ಬೆಂಗಳೂರು: ಕೋಲಾರ ಕಾಂಗ್ರೆಸ್ ಕಗ್ಗಂಟು ಬಿಡಿಸಲು ರಾಜ್ಯ ನಾಯಕತ್ವ ಹರಸಾಹಸ ನಡೆಸಿದರೂ ಪೈಪೋಟಿಗೆ ಬಿದ್ದಿರುವ ಸ್ಪೀಕರ್ ರಮೇಶ್ ಕುಮಾರ್ ಬಣ ಹಾಗೂ ಮುನಿಯಪ್ಪ ಕುಟುಂಬದ ನಡುವೆ ಹೊಂದಾಣಿಕೆ ಮೂಡಿಸಲು ಸಾಧ್ಯವಾಗಿಲ್ಲ.
ರಮೇಶ್ ಕುಮಾರ್ ಬಣದಲ್ಲಿರುವ ಶಾಸಕರೊಬ್ಬರು ಮಾತನಾಡಿ, ಕೋಲಾರ ಲೋಕಸಭಾ (ಮೀಸಲಾತಿ) ಕ್ಷೇತ್ರದ ಅಭ್ಯರ್ಥಿ ಬಗ್ಗೆ ಇಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದು, ರಾಜೀನಾಮೆಗೆ ಮುಂದಾಗಿದ್ದು ಸರಿಯಲ್ಲ. ಇಂತಹ ನಿರ್ಧಾರಗಳು ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದೂ ತಿಳಿಸಿದ್ದಾರೆ. ಆದರೆ, ಎಸ್ಸಿ (ಬಲ) ಸಮುದಾಯದವರಿಗೆ ಮಾತ್ರ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ಗೆ ಬಲವಾದ ಸಂದೇಶ ರವಾನಿಸುವಂಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.
ಎಸ್ಸಿ (ಎಡ) ಸಮುದಾಯದ ಸದಸ್ಯರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದ್ದೇ ಆದರೆ, ಅದನ್ನು ಗೌರವಿಸುತ್ತೇವೆ. ಆದರೆ ಮುನಿಯಪ್ಪ ಅವರ ಕುಟುಂಬದ ಪರವಾಗಿ ಟಿಕೆಟ್ ನೀಡಬಾರದು ಎಂಬುದು ನಮ್ಮ ಆಗ್ರಹವಾಗಿದೆ. ರಾಜ್ಯ ನಾಯಕತ್ವ ಮತ್ತು ಎಐಸಿಸಿ ನಮ್ಮ ಮನವಿಯನ್ನು ಪರಿಗಣಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕ್ಷೇತ್ರದ ಮೇಲೆ ಉತ್ತಮ ಹಿಡಿತ ಹೊಂದಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಲ್ಲದೆ ಶ್ರೀನಿವಾಸಪುರದಲ್ಲಿ ಪ್ರಚಾರ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದೂ ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ನಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂದು ಮುನಿಯಪ್ಪ ಅವರ ಆಪ್ತ ಹಾಗೂ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಇತರೆ ಕಾಂಗ್ರೆಸ್ ನಾಯಕರ ಸಂಬಂಧಿಕರಿಗೆ ಕಾಂಗ್ರೆಸ್ ಈಗಾಗಲೇ ಟಿಕೆಟ್ ನೀಡಿದೆ. ಇದೀಗ ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ನೀಡುವುದರಲ್ಲಿ ತಪ್ಪೇನಿದೆ. ರಮೇಶ್ ಕುಮಾರ್ ಅವರ ಬಣ ರಾಜ್ಯದ ಹಲವಾರು ಶಾಸಕರು, ಎಂಎಲ್ ಸಿಗಳ ಗೆಲುವಿಗೆ ಶ್ರಮಿಸಿದ ಹಿರಿಯ ಮುಖಂಡ ಮುನಿಯಪ್ಪ ಅವರನ್ನು ಗುರಿ ಮಾಡುತ್ತಿದೆ ಎಂದು ಹೇಳಿದ್ದಾರೆ.
Advertisement