
ರಾಯಚೂರು: ವಿರೋಧ ಪಕ್ಷಗಳ ಸುಳ್ಳು ಆರೋಪಗಳನ್ನು ಆಧರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪುನರುಚ್ಚರಿಸಿದ್ದಾರೆ.
ವಿರೋಧ ಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ. ರಾಜಕೀಯ ಕಾರಣಕ್ಕೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನಾನು ಏಕೆ ರಾಜೀನಾಮೆ ನೀಡಬೇಕೇ? ಸುಳ್ಳು ಆರೋಪಗಳಿಗೆ ಉತ್ತರ ನೀಡುತ್ತೇವೆ. ನಾವು ಜನರಿಗೆ ಸತ್ಯವನ್ನು ಹೇಳುತ್ತೇವೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
ಇನ್ನು ಮುಡಾ ನಿವೇಶನ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ನಂತರ ದಲಿತ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜನರು ಅನಗತ್ಯವಾಗಿ ಊಹಾಪೋಹ ಸೃಷ್ಟಿಸುತ್ತಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಾರೆ ಅಥವಾ ಸಚಿವ ಎನ್ಎಸ್ ಬೋಸರಾಜು ಇನ್ಯಾರನ್ನೊ ಭೇಟಿ ಮಾಡುತ್ತಾರೆ. ಇದರಲ್ಲಿ ಊಹಾಪೋಹ ಸೃಷ್ಟಿಸುವ ಅಗತ್ಯ ಏನಿದೆ. ಹಿಂದೆಯೂ ಇಂತಹ ಸಭೆಗಳು ನಡೆದಿವೆ ಮತ್ತು ಮುಂದೆಯೂ ನಡೆಯುತ್ತವೆ ಎಂದು ಹೇಳಿದರು.
ಮೈಸೂರಿನಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ಅವರು ಸತ್ಯವನ್ನು ಮಾತನಾಡಿದ್ದಾರೆ.
ಜಿ ಟಿ ದೇವೇಗೌಡ ಅವರು ಜೆಡಿಎಸ್ನ ಕೋರ್ ಕಮಿಟಿ ಅಧ್ಯಕ್ಷರು ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸದಸ್ಯರಲ್ಲಿ ಒಬ್ಬರು. ಅವರು ಸತ್ಯವನ್ನು ಮಾತ್ರ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದರು.
ನನ್ನ ರಾಜೀನಾಮೆ ಕೇಳುವ ಆರ್ ಅಶೋಕ್ ಅವರು ಮೊದಲು ಅವರು ರಾಜೀನಾಮೆ ಕೊಡಬೇಕು. ಅವರಿಗೆ ರಾಜೀನಾಮೆ ಕೊಡಬೇಕು ಅನ್ನಿಸಿದ್ರೆ ಕೊಟ್ಟುಬಿಡಲಿ. ಆದರೆ ಯಾವುದೇ ತಪ್ಪು ಮಾಡದ ನಾನ್ಯಾಕೆ ರಾಜೀನಾಮೆ ಕೊಡಬೇಕು. ಕಾನೂನು ಹೋರಾಟ ಮಾಡುತ್ತೇನೆ. ಸತ್ಯಕ್ಕೆ ಜಯವಿದೆ ಎಂದರು.
Advertisement