ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ಕಾಂಗ್ರೆಸ್ಗೆ ಏಕೆ ರಾಮಮಂದಿರದ ಉಸಾಬರಿ: ಸಚಿವ ಸುಧಾಕರ್ ಹೇಳಿಕೆಗೆ ಬಿಜೆಪಿ ಕಿಡಿ
ಬೆಂಗಳೂರು: ಪುಲ್ವಾಮಾ ದಾಳಿ ಹಾಗೂ ರಾಮಮಂದಿರ ಉದ್ಘಾಟನೆ ಚುನಾವಣಾ ಗಿಮಿಕ್ ಅಷ್ಟೇ ಎಂದು ಹೇಳಿರುವ ಸಚಿವ ಡಿ.ಸುಧಾಕರ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ದಲಿತರನ್ನು ಚಪ್ಪಲಿಗಾಲಿನಲ್ಲಿ ಒದ್ದ ಸಚಿವ ಡಿ. ಸುಧಾಕರ್ ಅವರೇ, ಅಯೋಧ್ಯೆಯ ರಾಮ ಮಂದಿರ ವಿಕಸಿತ ಭಾರತದ ಅಭಿವೃದ್ಧಿ ಹಾಗೂ ಪರಂಪರೆಯ ಸಂಕೇತ. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ಕಾಂಗ್ರೆಸ್ಗೆ ಏಕೆ ರಾಮಮಂದಿರದ ಉಸಾಬರಿ ಎಂದು ಪ್ರಶ್ನಿಸಿದೆ.
ಅಯೋಧ್ಯೆಯ ರಾಮ ಮಂದಿರ ಕೋಟ್ಯಂತರ ಭಾರತೀಯರ ದಶಕಗಳ ಕನಸು. ಅದೀಗ ನನಸಾಗುತ್ತಿದೆ. ಅಖಂಡ ಹಿಂದೂಗಳನ್ನು ಕೆಣಕಲೆಂದೇ ಕಾಂಗ್ರೆಸ್ ಡಿ. ಸುಧಾಕರ್ ಅಂತಹ ತಲೆ ಮಾಸಿದ ಸಚಿವರನ್ನು ಛೂ ಬಿಟ್ಟಿರುವುದಂತು ನೂರಕ್ಕೆ ನೂರು ಸತ್ಯ. ರಾಮಮಂದಿರ ಐಕ್ಯತೆಯ ಸಂಕೇತವಾದರೆ, ಕಾಂಗ್ರೆಸ್ ವಿಘಟನೆಯ ಸಂಕೇತ ಎಂಬುದು ಸುಧಾಕರ್ ಅವರ ಹೇಳಿಕೆಯಿಂದ ಸಾಬೀತಾಗುತ್ತಿದೆ ಎಂದು ಹೇಳಿದೆ.
ನಿನ್ನೆಯಷ್ಟೇ ರಾಮ ಮಂದಿರ ವಿಚಾರ ಕುರಿತು ಮಾತನಾಡಿದ್ದ ಸಚಿವ ಸುಧಾಕರ್ ಅವರು, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರ ಸ್ಟಂಟ್ ನೋಡಿದ್ದೇವೆ. ಎರಡು ಸಲ ಮೂರ್ಖರಾಗಿದ್ದೇವೆ. ಮತ್ತೆ ಮೂರನೇ ಸಲ ಮೂರ್ಖರಾಗಲು ಜನರು ದಡ್ಡರಾಗಲ್ಲ ಎಂಬ ನಂಬಿಕೆ ಇದೆ. ಲೋಕಸಭಾ ಚುನಾವಣೆ ಹಿನ್ನೆಲೆ ರಾಮಮಂದಿರ ಉದ್ಘಾಟನೆ ಮಾಡುತ್ತಿರುವುದು ಎಂಬುದು ಸತ್ಯ ಎಂದು ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ