ಬೆಂಗಳೂರು: ಬಿಜೆಪಿ ನಾಯಕರಿಗೆ ರಾಷ್ಟ್ರಧ್ವಜ, ಭಾರತೀಯ ಸಂವಿಧಾನ ಮತ್ತು ರಾಷ್ಟ್ರದ ಸಮಗ್ರತೆ ಇಷ್ಟವಿಲ್ಲದಿದ್ದರೆ, ಅವರು ತಮ್ಮ ಇಷ್ಟಕ್ಕೆ ಸರಿಹೊಂದಬಹುದಾದ ಪಾಕಿಸ್ತಾನಕ್ಕೆ ಹೋಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಸರ್ಕಾರಿ ಜಮೀನಿನಲ್ಲಿ 108 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಹಾರಿಸಲಾಗಿದ್ದ ಹನುಮಂತನ ಚಿತ್ರವಿರುವ ಕೇಸರಿ ಧ್ವಜವನ್ನು ಇಳಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯ ಪಿತೂರಿಗಳು ಮತ್ತು ತಂತ್ರಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಹೇಳಿದರು.
ತಿರಂಗ(ರಾಷ್ಟ್ರಧ್ವಜ)ವನ್ನು ದ್ವೇಷಿಸುವ ಆರ್ಎಸ್ಎಸ್ನಿಂದ ತರಬೇತಿ ಪಡೆದ ಬಿಜೆಪಿ ಕೂಡ ರಾಷ್ಟ್ರಧ್ವಜವನ್ನು ದ್ವೇಷಿಸುತ್ತಿದೆಯ. ಬಿಜೆಪಿಯವರು ತ್ರಿವರ್ಣ ಧ್ವಜವನ್ನು ಗೌರವಿಸುವ ಬದಲು ದ್ವೇಷಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
“ವಿಜಯೇಂದ್ರ ಅವರೇ ರಾಜ್ಯ ಸರ್ಕಾರ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಧ್ವಜಸ್ತಂಭದ ಉದ್ದೇಶವನ್ನು ಪೂರೈಸಿದೆ. ಆದರೂ ನಿಮಗೆ ಯಾಕೆ ಇಷ್ಟೊಂದು ಕೋಪ? ರಾಷ್ಟ್ರಧ್ವಜದ ಮೇಲೆ ದ್ವೇಷ ಸಾಧಿಸುವ ಮೂಲಕ ಬಿಜೆಪಿ ದೇಶವಿರೋಧಿಗಳೆಂದು ಸಾಬೀತು ಮಾಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಕರಾವಳಿ ಪ್ರದೇಶವನ್ನೇ ಹಿಂದುತ್ವ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಸಂಘಪರಿವಾರ ಇದೀಗ ಮಂಡ್ಯ ಜಿಲ್ಲೆಯಲ್ಲಿ ಸಕ್ರಿಯಗೊಂಡಿದ್ದು, ಹಿಂದುತ್ವ ಪ್ರಯೋಗಕ್ಕೆ ಮುಂದಾಗಿದೆ ಎಂದರು.
“ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ಶಾಂತಿ ಇರುವುದಿಲ್ಲ. ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಪ್ರತಿಪಕ್ಷದ ನಾಯಕನ ಸ್ಥಾನವು ಗೌರವಾನ್ವಿತ ಹುದ್ದೆಯಾಗಿದೆ, ಅವರ ಕಾರ್ಯಗಳು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ” ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ಟಾಂಗ್ ನೀಡಿದರು.
“ಆರ್ ಅಶೋಕ್ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಕೆಲವು ಸಂಗತಿಗಳು ಮೊದಲು ತಿಳಿದುಕೊಳ್ಳಿ. ಗೌರಿಶಂಕರ ಸೇವಾ ಟ್ರಸ್ಟ್ 2023 ರ ಡಿಸೆಂಬರ್ 29 ರಂದು ರಾಷ್ಟ್ರ ಮತ್ತು ರಾಜ್ಯ ಧ್ವಜಗಳನ್ನು ಮಾತ್ರ ಹಾರಿಸುವುದಾಗಿ ಸರ್ಕಾರಿ ಜಾಗದಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸಲು ಅನುಮತಿ ಪಡೆದಿದೆ ಎಂದರು.
Advertisement