
ಬೆಂಗಳೂರು: ರಾಜ್ಯದಲ್ಲಿ 'ದರಬೀಜಾಸುರ' ಸರ್ಕಾರ ಜನರ ರಕ್ತ ಹೀರುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಡೀಸೆಲ್ ದರ ಲೀಟರಿಗೆ ರೂ.2 ಏರಿಕೆಯಾಗಿದೆ. ದಿನಕ್ಕೊಂದು ಸುಳ್ಳು, ತಿಂಗಳಿಗೊಂದು ದರ ಏರಿಕೆಯಾಗುತ್ತಿದೆ. ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತದ ವೈಖರಿ ಇದು ಎಂದು ಕಿಡಿಕಾರಿದ್ದಾರೆ.
ಇಂದಿನಿಂದ ಕಾಂಗ್ರೆಸ್ ಕಂಪನಿ ಸರಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ. ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಕೂಡ ನಾಚುವಂತೆ ಕನ್ನಡಿಗರ ಮೇಲೆ ದರ ಏರಿಕೆ ದಂಡಯಾತ್ರೆ ನಡೆಸುತ್ತಿದೆ. ದುರಾಡಳಿತದಿಂದ ಸಮೃದ್ಧ ಕರ್ನಾಟಕವನ್ನು ಬರ್ಬಾದ್ ಮಾಡಿರುವ ಕಾಂಗ್ರೆಸ್ ಕಂಪನಿ ಸರಕಾರ ದರಬೀಜಾಸುರ ರೂಪ ತಳೆದು ಜನರ ರಕ್ತ ಹೀರುತ್ತಿದೆ.
ನೀರು, ಮೆಟ್ರೋ ರೈಲು, KSRTC ಬಸ್ ಟಿಕೆಟ್, ಹಾಲು (3 ಸಲ ದರ ಏರಿಕೆ), ಮೊಸರು, ವಿದ್ಯುತ್, ಮುದ್ರಾಂಕ, ಮಾರ್ಗದರ್ಶಿ ಮೌಲ್ಯ, ಅಬ್ಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ, ಲ್ಯಾಬ್ ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರವನ್ನು ಸರ್ಕಾರ ಏರಿಕೆ ಮಾಡಿದೆ. ಇಷ್ಟು ಸಾಲದೆಂಬಂತೆ ಜನರ ಮೇಲೆ ಇಂದಿನಿಂದ (ಏಪ್ರಿಲ್ 1ರಿಂದ) ಕಸದ ಸೆಸ್ ಹೇರುತ್ತಿದೆ ದರ ಬೀಜಾಸುರ ಸರಕಾರ. ಕಸ ಹೆಸರಿನಲ್ಲಿ ಕೋಟಿ ಕೋಟಿ ಸುಲಿಗೆ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಕಳೆದ ಹತ್ತು ತಿಂಗಳಲ್ಲಿ ಡಿಸೇಲ್ ಪ್ರತಿ ಲೀಟರಿಗೆ ರೂ.5 ಏರಿಕೆ ಭಾಗ್ಯವನ್ನು ಸರ್ಕಾರ ಕೊಟ್ಟಿದೆ. ಯುಗಾದಿ ಹೊಸ ತೊಡಕು ದಿನವೇ ಹೊಸ ಹೊಸ ದರ ವಿಧಿಸಿ ದರ ಬೀಜಾಸುರ ಸರಕಾರ ವಿಜೃಂಭಿಸಿದೆ. ಬೆಳಗ್ಗೆ ನಿದ್ರೆಯಿಂದ ಜನರೆದ್ದರೆ ಸುಲಿಗೆ ಬರೆ ಹಾಕುತ್ತಿದೆ ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ. ಕೈ ಕಂಪನಿ ಸರಕಾರಕ್ಕೆ ಕಣ್ಣಿಲ್ಲ, ಕರುಣೆಯೂ ಇಲ್ಲ. ಕಿತ್ತು ತಿನ್ನುವ ವಿಕೃತಿಯನ್ನು ಹತ್ತಿಕ್ಕಲು ಜನರು ಬೀದಿಗಿಳಿದು ದಂಗೆ ಎಳದೇ ವಿಧಿ ಇಲ್ಲ ಎಂದು ಕಿಡಿಕಾರಿದ್ದಾರೆ.
Advertisement