
ಮಂಡ್ಯ: ರಾಜಕೀಯ ದ್ವೇಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ನನಗೆ ಹೆಜ್ಜೆ ಹೆಜ್ಜೆಗೂ ಅಡ್ಡಿಯನ್ನುಂಟು ಮಾಡುತ್ತಿದ್ದು, ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್. ಡಿ.ಕುಮಾರಸ್ವಾಮಿ ಸೋಮವಾರ ಹೇಳಿದ್ದಾರೆ.
ಮಂಡ್ಯದ ಜನತೆ ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಜವಾಬ್ದಾರಿ ನೀಡಿದ್ದಾರೆ. ಮಂಡ್ಯ, ರಾಮನಗರ ಅಥವಾ ತುಮಕೂರು ಜಿಲ್ಲೆಗಳಿಗೆ ಒಂದೆರಡು ಕೈಗಾರಿಕೆಗಳನ್ನು ತರಲು ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಆದರೆ ರಾಜಕೀಯ ದ್ವೇಷದ ಕಾರಣದಿಂದ ರಾಜ್ಯ ಸರ್ಕಾರ ನನಗೆ ಬೆಂಬಲ ನೀಡುತ್ತಿಲ್ಲ ಮತ್ತು ಪ್ರತಿ ಹಂತದಲ್ಲೂ ನನಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಂದನಹಳ್ಳಿ ಗ್ರಾಮದಲ್ಲಿ ಸಿದ್ಧಿ ವಿನಾಯಕ ಮತ್ತು ನಾಗದೇವತೆಗಳ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಕಂಪನಿಯು ಕರ್ನಾಟಕದ ಹೆಮ್ಮೆಯ ಉದ್ಯಮಗಳಲ್ಲಿ ಒಂದಾಗಿದೆ."ಕುದುರೆಮುಖದಲ್ಲಿ ಗಣಿಗಾರಿಕೆ ಕಾರ್ಯ ನಿಲ್ಲಿಸಿದ್ದರಿಂದ, ಸಾವಿರಾರು ಸ್ಥಳೀಯರು ಉದ್ಯೋಗ ಕಳೆದುಕೊಂಡಿದ್ದಾರೆ" ಎಂದು ಅವರು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಂಡೂರು, ಬಳ್ಳಾರಿಯಲ್ಲಿ ಗಣಿಗಾರಿಕೆಗೆ ಹಣ ಪಡೆದು ಅನುಮತಿ ನೀಡಲಾಗಿತ್ತು, ಆದರೆ ಕೋಟಿಗಟ್ಟಲೆ ಹಣ ಪಡೆದರೂ ಗಣಿಗಾರಿಕೆ ನಡೆದಿಲ್ಲ ಎಂದರು.
ನಾನು ಕೇಂದ್ರ ಉಕ್ಕು ಸಚಿವನಾದ ಕೂಡಲೇ ಅಧಿಕಾರಿಗಳು ಈ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದರು ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಅಸಹಕಾರದ ಬಗ್ಗೆ ನನಗೆ ತಿಳಿಸಿದರು. ಬಳ್ಳಾರಿಯಲ್ಲಿ ಗಣಿಗಾರಿಕೆ ಪುನರಾರಂಭಿಸಲು ಕುದುರೆಮುಖ ಕಂಪನಿಗೆ ಹಣದ ಅಗತ್ಯವಿದೆ ಎಂದು ಹೇಳಿದರು.
Advertisement