
ಬೆಂಗಳೂರು: ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಇದೀಗ ಅಪ್ರಸ್ತುತ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತವಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕುರಿತು ಮಾತನಾಡಿದ್ದೇನೆ. ಇದರಲ್ಲಿ ಹೊಗಳುವುದು ಏನು ಬಂತು. ಸಿದ್ದರಾಮಯ್ಯ 16 ಬಜೆಟ್ ಕೊಟ್ಟಿದ್ದು ಸತ್ಯ ಅಲ್ಲವೇ? ಸಿದ್ದರಾಮಯ್ಯ ಹದಿನಾರು ಬಜೆಟ್ ಕೊಟ್ಟಿದ್ದು ನಿಜವಲ್ಲವೇ? ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದರೂ ರಾಜ್ಯದಲ್ಲಿ ಆರ್ಥಿಕ ಸಾಮರಸ್ಯವನ್ನು ಸಾಧಿಸಿದ್ದಾರೆ. ಯಾರಾದರೂ ಅದನ್ನು ಹೊಗಳುಭಟ್ಟತನ ಎಂದು ಭಾವಿಸಿದರೆ, ಹಾಗೆಯೇ ತಿಳಿದುಕೊಳ್ಳಲಿ ಎಂದು ತಿಳಿಸಿದರು.
ಬಿಎಂಐಸಿ ಯೋಜನೆಯ ಸಮಸ್ಯೆ ಹಲವು ವರ್ಷಗಳಿಂದ ಬಗೆಹರಿದಿಲ್ಲ. ಸರ್ಕಾರ ಯೋಜನೆಗೆ ಜಮೀನು ನೀಡಿದ್ದು, 300ಕ್ಕೂ ಹೆಚ್ಚು ಪ್ರಕರಣ ಕೋರ್ಟ್ನಲ್ಲಿದೆ. ಈ ಸಮಸ್ಯೆಯನ್ನು ಸಚಿವ ಸಂಪುಟ ಸಭೆಯಲ್ಲಿ ಅರ್ಧಗಂಟೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ ನನ್ನ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಸಮಿತಿಯಲ್ಲಿ ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್, ಡಾ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಸೇರಿ ಹಿರಿಯ ಸಚಿವರು ಸದಸ್ಯರಾಗಿದ್ದಾರೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಈ ಹಿಂದೆ ನೀಡಿದ್ದ ವರದಿಯನ್ನು ನಾವು ಅಧ್ಯಯನ ಮಾಡಿ ಬಿಎಂಐಸಿ ಯೋಜನೆಯ ಬಗ್ಗೆ ನಮ್ಮ ವರದಿ ನೀಡುತ್ತೇವೆ ಎಂದು ವಿವರಿಸಿದರು.
ಜನಿವಾರ ವಿವಾದ ಕುರಿತು ಮಾತನಾಡಿ, ಈ ವಿವಾದದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈಗಾಗಲೇ ಘಟನೆಯನ್ನು ಖಂಡಿಸಿದ್ದೇನೆ. ಅವರು ಹಾಗೇಕೆ ಮಾಡಿದರು, ಯಾರೂ ಸೂಚನೆ ನೀಡಿದ್ದರು ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.
‘ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿ ಜಾರಿಗೆ ವರ್ಷವಾಗಲಿದೆ' ಎಂಬ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ಕುರಿತು ಮಾತನಾಡಿ, ಇದು ಅವರ ವೈಯಕ್ತಿಕ ಅಭಿಪ್ರಾಯ. ಅಂತಿಮವಾಗಿ ಸಂಪುಟ ಸಭೆಯಲ್ಲಿ ತೀರ್ಮಾನ ಆಗುತ್ತದೆ. ಇದು ಜಟಿಲ ಎಂದು ನನಗೇನೂ ಕಾಣುತ್ತಿಲ್ಲ ಎಂದು ಹೇಳಿದರು.
Advertisement