ಸಿದ್ದರಾಮಯ್ಯಗೆ ನೆಚ್ಚಿನ 'ನಾಟಿ ಕೋಳಿ ಸಾರು' ಬಡಿಸಲಿರುವ ಡಿ.ಕೆ ಶಿವಕುಮಾರ್: ತೀವ್ರ ಕುತೂಹಲ ಕೆರಳಿಸಿದ 2ನೇ ಬ್ರೇಕ್ ಫಾಸ್ಟ್ ಮೀಟಿಂಗ್!

ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಸಿದ್ದರಾಮಯ್ಯ ಕಳೆದ ಶನಿವಾರ ಡಿ ಕೆ ಶಿವಕುಮಾರ್ ಅವರನ್ನು ಉಪಹಾರಕ್ಕೆ ಆಹ್ವಾನಿಸಿದ್ದರು.
Break fast meeting at Siddaramaiah house (File photo)
ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದಿದ್ದ ಬ್ರೇಕ್ ಫಾಸ್ಟ್ ನ ಸಂಗ್ರಹ ಚಿತ್ರ
Updated on

ಬೆಂಗಳೂರು: ನಾಯಕತ್ವದ ಹಗ್ಗಜಗ್ಗಾಟದ ನಡುವೆಯೂ ಇಬ್ಬರ ನಡುವಿನ ಒಗ್ಗಟ್ಟನ್ನು ಪ್ರದರ್ಶಿಸುವ ಮತ್ತೊಂದು ಕ್ರಮವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಮಂಗಳವಾರ ಬೆಳಗ್ಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಪಾಹಾರಕ್ಕೆ ಆಹ್ವಾನಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಸಿದ್ದರಾಮಯ್ಯ ಕಳೆದ ಶನಿವಾರ ಡಿ ಕೆ ಶಿವಕುಮಾರ್ ಅವರನ್ನು ಉಪಹಾರಕ್ಕೆ ಆಹ್ವಾನಿಸಿದ್ದರು. ಈ ಮೂಲಕ ವಾರದೊಳಗೆ ಉಭಯ ನಾಯಕರ ಎರಡನೇ ಉಪಾಹಾರ ಮೀಟಿಂಗ್ ಇದಾಗಿದೆ.

ಮೆನುವಿನಲ್ಲಿ ನಾಟಿ ಕೋಳಿ, ಇಡ್ಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಾಹಾರದಲ್ಲಿ ಇಡ್ಲಿ, ವಡೆ, ಸಾಂಬಾರ್, ದೋಸೆ, ಚಟ್ನಿ ಮತ್ತು ಕೇಸರಿ ಬಾತ್ ಇದ್ದರೆ, ಡಿ.ಕೆ ಶಿವಕುಮಾರ್ ತಮ್ಮ ಹುಟ್ಟೂರು ಕನಕಪುರದ ನಾಟಿ ಕೋಳಿ ಮತ್ತು ಇಡ್ಲಿಯನ್ನು ಸಿದ್ದರಾಮಯ್ಯನವರಿಗೆ ಬಡಿಸಲು ಯೋಜಿಸುತ್ತಿದ್ದಾರೆ. ಅವರ ಬೆಂಗಳೂರಿನ ಸದಾಶಿವನಗರ ಮನೆಯಲ್ಲಿ ಈಗಾಗಲೇ ಅಡುಗೆ ಸಿದ್ದವಾಗುತ್ತಿದೆ.

ಕರ್ನಾಟಕಕ್ಕೆ ನಮ್ಮ ಭರವಸೆಗಳನ್ನು ಈಡೇರಿಸಲು ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಚರ್ಚಿಸಲು ಮತ್ತು ಬಲಪಡಿಸಲು ನಾನು ನಾಳೆ ಮುಖ್ಯಮಂತ್ರಿಯವರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಿದ್ದೇನೆ ಎಂದು ಡಿ ಕೆ ಶಿವಕುಮಾರ್ ನಿನ್ನೆ ಟ್ವೀಟ್ ಮೂಲಕ ಘೋಷಿಸಿಕೊಂಡಿದ್ದರು.

ನಿನ್ನೆ ಸಿದ್ದರಾಮಯ್ಯ ಅವರು ಉಪಹಾರಕ್ಕೆ ಆಹ್ವಾನಿಸುವ ಶಿವಕುಮಾರ್ ಅವರಿಂದ ಇನ್ನೂ ಫೋನ್ ಕರೆ ಬಂದಿಲ್ಲ, ಬಂದರೆ ಖಂಡಿತಾ ಹೋಗುತ್ತೇನೆ ಎಂದಿದ್ದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗಿನಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಹುದ್ದೆಯ ಮೇಲಿನ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವಿನ ಹಗ್ಗಜಗ್ಗಾಟ ನಿನ್ನೆ ಸಂಜೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ನಂತರ ಕೊನೆಗೊಂಡಂತೆ ಕಾಣುತ್ತಿತ್ತು. ಎರಡು ವರ್ಷಗಳ ಹಿಂದೆ ಮಾಡಿಕೊಂಡ ಒಪ್ಪಂದವನ್ನು ಗೌರವಿಸಿ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಐದು ವರ್ಷಗಳ ಅವಧಿಯನ್ನು ವಿಭಜಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

Break fast meeting at Siddaramaiah house (File photo)
'ಅದು ನನಗೂ ಸಿಎಂ ಗೂ ಸಂಬಂಧಪಟ್ಟ ವಿಚಾರ, ನಾವಿಬ್ರೂ ಬ್ರದರ್ಸ್ ರೀತಿ ಇದ್ದೇವೆ': ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಡಿ.ಕೆ ಶಿವಕುಮಾರ್; Video

ಸೋಷಿಯಲ್ ಮೀಡಿಯಾ ಮೂಲಕ ಜಗಜ್ಜಾಹೀರಾದ ಭಿನ್ನಮತ

ಸಾಮಾಜಿಕ ಮಾಧ್ಯಮಗಳಲ್ಲಿ ರಹಸ್ಯ ಸಂದೇಶಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಜಗಳವು ಉತ್ತುಂಗಕ್ಕೇರಿತ್ತು. ಅದೀಗ ಉಪಹಾರ ಕೂಟ ಮೂಲಕ ಜನತೆಗೆ ಒಗ್ಗಟ್ಟಿನ ಸಂದೇಶ ಸಾರುವಂತೆ ಕಾಣುತ್ತಿದೆ.

ಶನಿವಾರದ ಉಪಹಾರ ಸಭೆಯ ನಂತರ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ನಾಯಕತ್ವ ಬದಲಾವಣೆಯ ಕುರಿತು ಉನ್ನತ ಅಧಿಕಾರಿಗಳ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳುವ ಮೂಲಕ ಏಕತಾ ಮಂತ್ರವನ್ನು ಜಪಿಸಿದ್ದಾರೆ.

ಸಿದ್ದರಾಮಯ್ಯನವರಂತೆಯೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರಿಂದ ಕರೆ ಬಂದ ನಂತರ ಡಿ ಕೆ ಶಿವಕುಮಾರ್, ಹೈಕಮಾಂಡ್ ಸರಿಯಾದ ಸಮಯದಲ್ಲಿ ತನಗೆ ಸ್ಥಾನಮಾನ ನೀಡುತ್ತದೆ ಎಂದು ಮನದಟ್ಟಾದ ನಂತರ ಆದೇಶವನ್ನು ಪಾಲಿಸಿದರು.

ಬೆಳಗಾವಿ ಅಧಿವೇಶನ

ಡಿಸೆಂಬರ್ 8 ರಂದು ಬೆಳಗಾವಿಯಲ್ಲಿ ಆರಂಭವಾಗಲಿರುವ ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ನಡುವಿನ ಉಪಾಹಾರ ಸಭೆಗಳು ನಿರ್ಣಾಯಕವಾಗಿವೆ. ನಾಯಕತ್ವದ ಅನಿಶ್ಚಿತತೆ ಮತ್ತು ಆಡಳಿತದ ಮೇಲೆ ಅದರ ಪರಿಣಾಮವೇನಾದರೂ ಇದ್ದರೆ, ಕಾಂಗ್ರೆಸ್ ಸರ್ಕಾರವನ್ನು ಮೂಲೆಗುಂಪು ಮಾಡಲು ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅಸ್ತ್ರಗಳನ್ನು ಹರಿತಗೊಳಿಸುತ್ತಿವೆ.

ಸಿದ್ದರಾಮಯ್ಯ ಅವರ ಸಚಿವರ ಗುಂಪು ಪ್ರತ್ಯೇಕವಾಗಿ ನಡೆಸಿದ ಉಪಾಹಾರ ಮತ್ತು ಭೋಜನ ಕೂಟಗಳಿಗೆ ಪ್ರತಿಯಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಎಲ್ಲವೂ ಚೆನ್ನಾಗಿದೆ ಎಂಬ ಬಲವಾದ ಸಂದೇಶವನ್ನು ರವಾನಿಸುವುದು ಸಹ ಇದಾಗಿದೆ.

ಇದು ನಮ್ಮ ನಡುವಿನ ಉಪಹಾರ ಸಭೆ. ನಾವು ಸಹೋದರರಂತೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನೀವು ಮಾಧ್ಯಮಗಳು ಬಿಂಬಿಸುತ್ತಿರುವಂತೆ ನಮ್ಮಲ್ಲಿ ಯಾವುದೇ ಬಣವಿಲ್ಲ. ನಮ್ಮಲ್ಲಿ 140 ಶಾಸಕರಿದ್ದಾರೆ. ನಾವು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತೇವೆ ಎಂದು ಶಿವಕುಮಾರ್ ಹೇಳಿದರು. ಸಿದ್ದರಾಮಯ್ಯ ಕೂಡ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡುವುದಾಗಿ ದೃಢಪಡಿಸಿದ್ದಾರೆ.

ಕಾಂಗ್ರೆಸ್ ತಮ್ಮ ನಾಯಕರನ್ನು ಬೆಂಬಲಿಸದಿದ್ದರೆ, ಹಲವಾರು ಸಮುದಾಯಗಳು ಕಾಂಗ್ರೆಸ್‌ಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ ನಂತರ ಇತ್ತೀಚಿನ ಅಧಿಕಾರ ಸಂಘರ್ಷವು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವನ್ನುಂಟುಮಾಡಿತು.

ಸಿದ್ದರಾಮಯ್ಯ ಕುರುಬ ಸಮುದಾಯದವರಾಗಿದ್ದು, ಅವರ ನಾಯಕರು ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಿರುವ ಶಾಸಕರನ್ನು ಸೋಲಿಸುವುದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದರು. ಕೆಲವು ಶಾಸಕರು ಒಕ್ಕಲಿಗ ಸಮುದಾಯ ನಾಯಕ ಶಿವಕುಮಾರ್ ಪರವಾಗಿ ಲಾಬಿ ಮಾಡಲು ದೆಹಲಿಗೆ ಭೇಟಿ ನೀಡಿದ್ದರು. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ 2028 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸುವುದಾಗಿ ಒಕ್ಕಲಿಗ ನಾಯಕತ್ವ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿತ್ತು.

ಇವರಿಬ್ಬರ ನಡುವಿನ ಒಪ್ಪಂದವು ಕಾದಾಡುತ್ತಿರುವ ಗುಂಪುಗಳನ್ನು ಸಮಾಧಾನಪಡಿಸುತ್ತದೆಯೇ ಎಂದು ಕಾದು ನೋಡಬೇಕು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜಕೀಯ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಧಿಕಾರ ವರ್ಗಾವಣೆಯ ಕುರಿತು ಚರ್ಚೆ ಸರ್ಕಾರ ಅಥವಾ ಪಕ್ಷಕ್ಕೆ ಒಳ್ಳೆಯದಲ್ಲ, ಅದು ಮುಂದುವರಿಯಬಾರದು. ಇದು ಕೇವಲ ರಾಜಕೀಯ ಆಧಾರಿತ ಉಪಹಾರ ಸಭೆಗಳಲ್ಲ, ಇದು ಇತರ ವಿಷಯಗಳನ್ನು ಸಹ ಒಳಗೊಂಡಿದೆ ಎಂದರು.

ನಮ್ಮ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಉಪಾಹಾರ ಸೇವಿಸುತ್ತಿದ್ದಾರೆ, ಅದರಲ್ಲಿ ವಿಶೇಷ ಏನೂ ಇಲ್ಲ. ಹೈಕಮಾಂಡ್ ಸಂಪುಟ ಪುನಾರಚನೆಯ ಕರೆ ತೆಗೆದುಕೊಂಡು ರಾಜೀನಾಮೆ ನೀಡುವಂತೆ ಹೇಳಿದರೆ, ನಾನು ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಶಿವಕುಮಾರ್ ಅವರ ಕಿರಿಯ ಸಹೋದರ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ದೆಹಲಿಯಿಂದ ಹಿಂತಿರುಗಿದ್ದು, ಅವರು ಇಂದಿನ ಉಪಾಹಾರ ಕೂಟದಲ್ಲಿ ಹಾಜರಿರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com