

ಬೆಂಗಳೂರು: ಸಿಎಂ ಹುದ್ದೆ ಬಣ ಬಡಿದಾಟಕ್ಕೆ ಸಂಬಂಧಪಟ್ಟಂತೆ ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಇಂದು ಹೈಡ್ರಾಮಾವೇ ನಡೆದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಮುಂದಿನ ಸಿಎಂ ಕೂಗಾಟ ಕೇಳಿಬಂತು.
ಅಧಿಕಾರ ತ್ಯಾಗದ ಕುರಿತು ನಿನ್ನೆ ಬೇಳೂರು ಗೋಪಾಲಕೃಷ್ಣ ಮುಂದೆ ಸಿಎಂ ಆಡಿದ್ದ ಮಾತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಸಿ.ಎಂ. ಮಾತುಗಳನ್ನು ಸಮರ್ಥಿಸಿಕೊಂಡಿರುವ ಅವರು, 'ಯಾರಿಗೂ ಅಧಿಕಾರ ಶಾಶ್ವತವಲ್ಲ' ಎಂದು ಪುನರುಚ್ಚರಿಸಿದರು.
ಅಧಿಕಾರ ತ್ಯಾಗದ ಬಗ್ಗೆ ಸ್ಪಷ್ಟನೆ
ಮುಖ್ಯಮಂತ್ರಿಗಳು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ, ಆದರೆ 'ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದ್ರೂ ಬಿಡಲೇಬೇಕು' ಎಂದು ಹೇಳಿದರು.
ಹೈಕಮಾಂಡ್ ನಿರ್ಧಾರವೇ ಅಂತಿಮ
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಎಲ್ಲಾ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಯಾವ ರೀತಿಯಲ್ಲಿ ಹೈಕಮಾಂಡ್ ಬಗೆಹರಿಸುತ್ತದೆ ಎಂದು ನೋಡೋಣ. ಪಕ್ಷದಲ್ಲಿ ಒಳ್ಳೆಯ ವಾತಾವರಣ ಇರಬೇಕು ಎಂದು ಕಾರ್ಯಕರ್ತರು ಬಯಸುತ್ತಾರೆ ಎಂದರು.
ಇದೇ ವೇಳೆ ದಲಿತ ಸಿಎಂ ವಿಚಾರ ತಳ್ಳಿಹಾಕಿದ ಸಚಿವರು, ಈ ಅವಧಿಯಲ್ಲಿ ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆ ಇಲ್ಲ. ಪರಮೇಶ್ವರ್ ಒಬ್ಬ ಸೀನಿಯರ್ ಇದ್ದಾರೆ. ಸಿಎಂ ಬಗ್ಗೆ ಎಲ್ಲ ಮುಗಿದಿದೆ ಈಗ ಮತ್ತೆ ಶುರು ಮಾಡುವುದು ಬೇಡ. ನಿನ್ನೆ ಎಲ್ಲ ಮುಗಿದಿದೆ, ಪದೇ ಪದೇ ಆ ವಿಚಾರ ಮಾತನಾಡುವುದು ಬೇಡ ಎಂದರು.
Advertisement