

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕಾವು ಇನ್ನೂ ಆರಿಲ್ಲ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಮತಗಳ್ಳತನ ರ್ಯಾಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉತ್ತಮ ರೀತಿಯಲ್ಲಿ ಭಾಗವಹಿಸಿದ್ದು, ಹೈಕಮಾಂಡ್ ಆಯೋಜಿಸಿದ್ದ ಭೋಜನಕೂಟದಲ್ಲಿ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಅಧಿವೇಶನ ಪೂರ್ಣಗೊಂಡ ಬಳಿಕ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್ ನಡುವೆ ಹೈಕಮಾಂಡ್ ಸಮ್ಮುಖದಲ್ಲಿ ಮಾತುಕತೆ ನಡೆಯಲಿದ್ದು, ಡಿಸೆಂಬರ್ 20 ಅಥವಾ 21 ರಂದು ಮಾತುಕತೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನಾಯಕತ್ವ ಬದಲಾವಣೆ ವಿಚಾರ ಈಗಾಗಲೇ ರಾಜ್ಯದಲ್ಲಿ ಗೊಂದಲಗಳನ್ನು ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯಿನ್ನು ಚಾಣಕ್ಯತನದಿಂದ ಎದುರಿಸಲು, ತಂತ್ರಗಳನ್ನು ಹೈಕಮಾಂಡ್ ಅಳವಡಿಸಿಕೊಳ್ಳುತ್ತಿದೆ. ಈ ಮೂಲಕ ಅಧಿಕಾರ ವರ್ಗಾವಣೆಯನ್ನು ಸುಗಮ ರೀತಿಯಲ್ಲಿ ನಡೆಸಲು ಮುಂದಾಗಿದೆ.
ನಾಯಕತ್ವ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಪ್ರಯತ್ನ ನಡೆಸಿದ್ದರು. ಆದರೆ, ಪ್ರಯತ್ನ ವಿಫಲವಾಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಸೋನಿಯಾ ಅವರ ಬಳಿ ಭೇಟಿಗೆ ಅವಕಾಶ ಕೋರಿದ್ದರು. ಆದರೆ, ಸೋನಿಯಾ ಗಾಂಧಿಯವರು ನಿರಾಕರಿಸಿದ್ದರು.
2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಧಿಕಾರ ಹಂಚಿಕೆ ಒಪ್ಪಂಕ್ಕೆ ಹೈಕಮಾಂಡ್ ಸಾಕ್ಷಿಯಾಗಿದೆಯೇ ವಿನಃ ಪಕ್ಷವಲ್ಲ. ಹೀಗಾಗಿ ಯಾವುದೇ ನಿರ್ಧಾರವನ್ನು ನಮ್ಮ ಸಮ್ಮುಖದಲ್ಲೇ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಇಬ್ಬರೂ ನಾಯಕರು ಮಾತುಕತೆ ನಡೆಸಲಿ ಎಂದು ಸೋನಿಯಾ ಸಲಹೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಉಪಾಹಾರ ಸಭೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಈ ನಡುವೆ ದೆಹಲಿಯಲ್ಲಿ ನಡೆದ ವೋಟ್ ಚೋರಿ ರ್ಯಾಲಿ ವೇಳೆ ಹೈಕಮಾಂಡ್ ಭೋಜನಕೂಟವನ್ನು ಆಯೋಜಿಸಿದ್ದು, ಈ ಭೋಜನಕೂಟದಲ್ಲಿ ಡಿಕೆ.ಶಿವಕುಮಾರ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರರು ಹಾಜರಿದ್ದರು, ಈ ಸಭೆಯಲ್ಲಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಇದಲ್ಲದೆ, ಡಿಕೆ.ಶಿವಕುಮಾರ್ ಅವರು ಸೋಮವಾರ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಖರ್ಗೆ ಅವರೊಂದಿಗೆ ತಮ್ಮ ಸಹೋದರ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಜೊತೆಗೆ ಪ್ರಯಾಣಿಸಿದ್ದರು. ಒಟ್ಟು ಸುಮಾರು 3 ಗಂಟೆಗಳ ಕಾರ ವಿಮಾನದಲ್ಲಿ ಮೂವರು ಪ್ರಯಾಣಿಸಿದ್ದು, ಈ ವೇಳೆ ನಡೆದ ಮಾತುಕತೆ ಕುತೂಹಲಗಳನ್ನು ಮೂಡಿಸಿದೆ.
ಒಂದು ವೇಳೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದೇ ಆದರೆ, ತಮ್ಮ ಅಹಿಂದ ಬೆಂಬಲವನ್ನು ಬಳಸಿಕೊಂಡು ಶಿವಕುಮಾರ್ ಅವರನ್ನು ಎದುರಿಸುವ ಸಾಧ್ಯತೆಯಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ದಲಿತ ಸಿಎಂ ಕಾರ್ಡ್ ಅನ್ನು ಬಳಸಬಹುದು ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಸೋನಿಯಾ ಗಾಂಧಿಯವರ ಆಪ್ತ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಅವರು ಪರಸ್ಪರ ಒಪ್ಪಿಗೆ ಮೂಲಕ ಸುಗಮ ಅಧಿಕಾರ ವರ್ಗಾವಣೆಗೆ ಸಲಹೆ ನೀಡಿದ್ದಾರೆ. ಆ ರೀತಿ ಆಗದಿದ್ದರೆ, ಪಕ್ಷವು ಅಹಿಂದ ಮತಗಳ ಒಂದು ಭಾಗವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಹೈಕಮಾಂಡ್ ಡಿಸೆಂಬರ್ನಲ್ಲಿಯೇ ನಿರ್ಧಾರ ತೆಗೆದುಕೊಳ್ಳಬೇಕು, ಏಕೆಂದರೆ ನೂತನ ಮುಖ್ಯಮಂತ್ರಿ 2026-27ರ ಬಜೆಟ್ಗೆ ಕನಿಷ್ಠ ಒಂದು ತಿಂಗಳಾದರೂ ತಯಾರಿ ನಡೆಸಬೇಕಾಗುತ್ತದೆ, ಈ ತಿಂಗಳಿನಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ, ಸಿದ್ದರಾಮಯ್ಯ ಅವರೇ ಮುಂದಿನ ಬಜೆಟ್ ಅನ್ನು ಮಂಡಿಸಬಹುದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
Advertisement