

ಬೆಂಗಳೂರು: ಮಾಧ್ಯಮದವರೇ ನಾಯಕತ್ವ ಬದಲಾವಣೆಯ ಬಗ್ಗೆ ಹೆಚ್ಚಾಗಿ ಚರ್ಚಿಸುತ್ತಿದ್ದಾರೆ. ಇಷ್ಟೊಂದು ಪ್ರಶ್ನೆ ಕೇಳಬೇಕಾದ ಅಗತ್ಯ ಏನಿದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದು, ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.
ಮೈಸೂರಿನಲ್ಲಿ ಸಿಕ್ಕ ಮುಖ್ಯಮಂತ್ರಿಗಳಿಗೆ ಮಾಧ್ಯಮ ಪ್ರತಿನಿಧಿಗಳು ನಾಯಕತ್ವ ಬದಲಾವಣೆ ಕುರಿತು ನಾನಾ ಪ್ರಶ್ನೆಗಳನ್ನು ಕೇಳಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಕೆಎನ್ ರಾಜಣ್ಣ ಭೇಟಿಯಾದ ವಿಚಾರವನ್ನು ಪ್ರಸ್ತಾಪಿಸಿ, ಈ ಭೇಟಿ ಅಧಿಕಾರ ಹಸ್ತಾಂತರದ ಪೂರ್ವಭಾವಿ ಬೆಳವಣಿಗೆಯೇ ಎಂದು ಕೇಳಿದರು.
ಇದಕ್ಕೆ ಕೋಪಗೊಂಡ ಮುಖ್ಯಮಂತ್ರಿಗಳು, ಒನ್ಸ್ ಫಾರ್ ಆಲ್ ಈ ವಿಚಾರದ ಬಗ್ಗೆ ಹೇಳಿಬಿಡುತ್ತೇನೆ ಕೇಳಿ, ಹೈಕಮಾಂಡ್ ತೀರ್ಮಾನವೇ ಅಂತಿಮ. ಈಗಾಗಲೇ ನಾನು ಹೈಕಮಾಂಡ್ ಜೊತೆ ಮಾತನಾಡಿದ್ದು, ಅವರೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲಿಗೆ ಎಲ್ಲ ಗೊಂದಲಗಳು ಮುಗಿದಿದ್ದು, ಹೈಕಮಾಂಡ್ ತನ್ನ ನಿರ್ಧಾರವನ್ನು ಶೀಘ್ರವೇ ಪ್ರಕಟಿಸಲಿದೆ. ಆದರೆ ಈ ವಿಷಯದ ಬಗ್ಗೆ ಮಾಧ್ಯಮದವರೇ ಅನಗತ್ಯವಾಗಿ ಅತಿ ಹೆಚ್ಚು ಚರ್ಚೆ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ನಾನು ಅಧಿವೇಶನದಲ್ಲಿ ಮಾತನಾಡಿದ ಮೇಲೂ ಈ ವಿಚಾರದಲ್ಲಿ ಯಾಕೆ ಪ್ರಶ್ನೆ ಕೇಳುತ್ತಿದ್ದೀರಾ ಎಂದು ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡರು.
ಡಿಕೆ.ಶಿವಕುಮಾರ್ ಹಾಗೂ ರಾಜಣ್ಣ ಭೇಟಿ ಕುರಿತು ಮಾತನಾಡಿ, ಕೆ.ಎನ್. ರಾಜಣ್ಣ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿರುವುದರಿಂದ ಅವರನ್ನು ಭೇಟಿ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಬಾರದು ಎಂಬ ಯಾವುದೇ ನಿಯಮಗಳಿಲ್ಲ. ಈ ಭೇಟಿಯಲ್ಲಿ ಯಾವುದೇ ಅಸಹಜತೆ ಇಲ್ಲದ ಕಾರಣ ಇದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದರು.
Advertisement