
ಬೆಂಗಳೂರು: ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಮಗೂ ಬೇಸರ ತರಿಸಿದೆ. ನಾನು ದೆಹಲಿಗೆ ತೆರಳಿ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆಂದು ತಿಳಿದು ಬಂದಿದೆ.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ಮಲ್ಲೇಶ್ವರಂನ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ನಡೆದಿದ್ದ ಸಮಾರಂಭದಲ್ಲಿ ಮಾತನಾಡಿದ್ದ ಆರ್ ಅಶೋಕ್ ನಾವಿಬ್ಬರು ಬಿಜೆಪಿ ಪಕ್ಷದ ಜೋಡೆತ್ತು ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಅದೇ ಅಶೋಕ್ ವಿಜಯೇಂದ್ರ ವಿರುದ್ಧ ಮುನಿಸಿಕೊಂಡಿದ್ದಾರೆ. ಎಂದು ತಿಳಿದು ಬಂದಿದೆ.
ವಿರೋಧ ಪಕ್ಷದ ನಾಯಕರಾಗಿರುವ ಆರ್ ಅಶೋಕ್ ಮತ್ತು ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಬೇಕು ಎಂದು ಸಂಘದ ನಾಯಕರ ಮುಂದೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಚರ್ಚೆಗೆ ಗ್ರಾಸವಾಗುತ್ತಿದೆ.
ಪಕ್ಷದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಪಕ್ಷದಲ್ಲಿ ಹಿಂದೆಂದೂ ಇಷ್ಟು ಗೊಂದಲ ನಿರ್ಮಾಣ ಆಗಿರಲಿಲ್ಲ. ವಿಜಯೇಂದ್ರ ಅವರನ್ನು ಮುಂದುವರೆಸುವ ಸಂಬಂಧ ಯಾರಿಗೂ ಒಲವು ಇಲ್ಲ. ಆದ್ದರಿಂದ ಬೇರೆ ಯಾರನ್ನಾದರೂ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಪದಾಧಿಕಾರಿಗಳ ಮತ್ತು ಜಿಲ್ಲಾ ಅಧ್ಯಕ್ಷರ ಸಭೆಗಳನ್ನು ನಾಮ್ಕಾವಸ್ತೆ ಎಂಬಂತೆ ನಡೆಸಿದ್ದು ಬಿಟ್ಟರೆ, ಗಂಭೀರವಾಗಿ ಸಭೆಗಳನ್ನು ನಡೆಸಲಿಲ್ಲ. ಅವರಿಗೆ ಪಕ್ಷವನ್ನು ಮುನ್ನಡೆಸುವಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಮತ್ತೆ ಅಧ್ಯಕ್ಷರನ್ನಾಗಿ ಮಾಡಿದರೆ, ಪಕ್ಷ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ.
ಆದ್ದರಿಂದ ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಬೇಕು. ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದೂ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ಭೇಟಿ ಮಾಡಿರುವ ಈ ಇಬ್ಬರು ವಿಜಯೇಂದ್ರ ಅವರನ್ನು ಬದಲಿಸಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯಲ್ಲಿ ಬಣ ಕಿತ್ತಾಟ ತೀವ್ರಗೊಂಡ ಸಂದರ್ಭದಲ್ಲೂ ಆರ್ ಅಶೋಕ್ ಅಂತರ ಕಾಯ್ದುಕೊಂಡಿದ್ದರು. ಅಶೋಕ್ ಮತ್ತು ವಿಜಯೇಂದ್ರ ನಡುವೆ ಸದನದಲ್ಲೂ ದೊಡ್ಡ ಮಟ್ಟದ ಹೊಂದಾಣಿಕೆ ಕಂಡು ಬರುತ್ತಿರುಲಿಲ್ಲ. ಬಿಜೆಪಿ ಪಕ್ಷ ಮತ್ತು ವಿರೋಧ ಪಕ್ಷವಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೂ ಇಬ್ಬರು ನಾಯಕರ ನಡುವಿನ ಹೊಂದಾಣಿಕೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಹೀಗಿದ್ದರೂ ಆರ್ ಅಶೋಕ್ ಅವರು ವಿಜಯೇಂದ್ರ ವಿರುದ್ಧ ಬಹಿರಂಗವಾದ ಆರೋಪಗಳನ್ನು ಮಾಡಿರಲಿಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ರೆಬೆಲ್ ಟೀಂ ಬೇಡಿಕೆಯ ಬಗ್ಗೆಯೂ ಆರ್ ಅಶೋಕ್ ತಮ್ಮದೇ ಆದ ಅಂತರವನ್ನು ಕಾಯ್ದುಕೊಂಡಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆ ತಟಸ್ಥ ಬಣ ಮಾಜಿ ಸಿಎಂ ಡಿವಿ ಸದಾನಂದ ಗೌಡ ನಿವಾಸದಲ್ಲಿ ಸಭೆ ಸೇರಿತ್ತು. ಈ ಸಭೆಯಲ್ಲಿ ಆರ್ ಅಶೋಕ್, ಬಸವರಾಜ ಬೊಮ್ಮಾಯಿ, ಸಿಟಿ ರವಿ ಸೇರಿದಂತೆ ಕೆಲವೊಂದು ನಾಯಕರು ಭಾಗಿಯಾಗಿದ್ದರು. ಈ ಸಭೆಯ ಬಳಿಕ ತಟಸ್ಥ ಬಣವೂ ವಿಜಯೇಂದ್ರ ವಿರುದ್ಧ ತನ್ನ ಅಭಿಪ್ರಾಯವನ್ನು ಹೊಂದತೊಡಗಿದೆ ಎಂದೇ ಹೇಳಲಾಗುತ್ತಿತ್ತು.
Advertisement