
ಹುಬ್ಬಳ್ಳಿ: ಈಗಲ್ಲ, ಮೊದಲಿನಿಂದಲೂ ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ರೇಸ್ ನಲ್ಲಿದ್ದಾರೆಂದು ಸಚಿವ ಸತೀಶ್ ಜಾರಕಿಹೊಳಿಯವರು ಶನಿವಾರ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತು ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸಿದರು. ಬಳಿಕ ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷರನ್ನ ನೇಮಿಸುವ ಅಧಿಕಾರ ನಮಗಿಲ್ಲ, ಅದನ್ನ ಹೈಕಮಾಂಡ್ ನೋಡುತ್ತೆ. ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರೇ ಹೇಳಿದ್ದಾರೆ. ನನ್ನ ಸಮಯ ಮತ್ತು ಸರದಿಗಾಗಿ ಕಾಯುತ್ತೇನೆ. ದೇಶದ ನಾನಾ ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಿದೆ. ಈಗ ತಕ್ಷಣ ಮಾಡಲು ಆಗದೆ ಇರಬಹುದು, ಆದರೆ, ಆಗಿಯೇ ಆಗುತ್ತೆ. ಅವರು ಯಾವಾಗ ಮಾಡುತ್ತಾರೆ ಎನ್ನುವುದನ್ನು ಕಾದು ನೋಡೋಣ. ನಾನಂತೂ ಯಾವುದೇ ರೀತಿಯ ಆಕಾಂಕ್ಷಿ ಅಲ್ಲ. ನಾನು ಅಧ್ಯಕ್ಷ ಆಗಬೇಕು ಅಂತ ನನ್ನ ಹಿಂಬಾಲಕರು, ಪ್ರಮುಖರು ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸಹಜ ಕೂಡ. ಸಂದರ್ಭ ಬಂದಾಗ ನೋಡೋಣ ಎಂದು ಹೇಳಿದರು.
ಬಜೆಟ್ ನಂತರ ಸಿಎಂ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ನನ್ನ ವ್ಯಾಪ್ತಿಗೆ ಬರಲ್ಲ ಎಂದು ನಾನು ಹೇಳಿದ್ದೇನೆ. ನಾನು ಮಂತ್ರಿ ಮಂಡಲದಲ್ಲಿ ಒಬ್ಬ ಮಂತ್ರಿ ಅಷ್ಟೇ. ಆ ಬಗ್ಗೆ ಚರ್ಚೆ ಮಾಡುವ ಅಧಿಕಾರ ನಮಗಿಲ್ಲ. ಏನೇ ಇದ್ದರೂ ಈ ಬಗ್ಗೆ ವರಿಷ್ಠರೇ ಚರ್ಚೆ ಮಾಡಬೇಕು. ಈಗಾಗಲೇ ಸಚಿವರ ಕಾರ್ಯ ವೈಖರಿ ಬಗ್ಗೆ ವರದಿ ತೆಗೆದುಕೊಂಡಿದ್ದಾರೆ. ಯಾವ ಸಚಿವರನ್ನು ತೆಗೆದುಕೊಳ್ಳಬೇಕು, ಕೈ ಬಿಡಬೇಕು ಎಂದು ಹಿರಿಯ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂಬ ವರದಿಗಳ ಕುರಿತು ಮಾತನಾಡಿ, ಅವೆಲ್ಲವೂ ಕೇವಲ ವದಂತಿಗಳಷ್ಟೆ ಎಂದು ಹೇಳಿದರು.
Advertisement