
ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ, ನಾವು ಬಿಜೆಪಿ, ಆರ್ಎಸ್ಎಸ್ ಮತ್ತು ಅದರ ಪ್ರಭಾವಕ್ಕೆ ಒಳಪಟ್ಟಿರುವ ಭಾರತದ ರಾಜ್ಯ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆಂಬ ಎಂಬ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ಸಿಡಿಮಿಡಿಗೊಂಡಿದೆ.
ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ವಿದೇಶಿ ಕೈಗೊಂಬೆ ಆಗಿರುವ ರಾಹುಲ್ ಅವರ ಹೋರಾಟದ ಗುಟ್ಟು ರಟ್ಟಾಗಿದೆ. ವಿದೇಶದಲ್ಲಿರುವ ಭಾರತ ವಿರೋಧಿಗಳ ಜತೆ ಸೇರಿಕೊಂಡು ಇಂದು ಭಾರತದ ಒಳಗೆ ಭಾರತದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಯಾರಿಗಾಗಿ ಹೋರಾಟ ಮಾಡುತ್ತಿದ್ದಾರೆ? ಯಾವ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ? ಉತ್ತರಿಸಬಲ್ಲರಾ? ಎಂದು ಪ್ರಶ್ನಿಸಿದೆ.
ಸಂಸದ ಲೆಹರ್ ಸಿಂಗ್ ಅವರು ಟ್ವೀಟ್ ಮಾಡಿ, ರಾಹುಲ್ ಗಾಂಧಿ ವಿದೇಶಿ ರಜೆಯಿಂದ ಹಿಂತಿರುಗಿ ಬಂದಿದ್ದಾರೆ. ಭಾರತದ ರಾಜ್ಯ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ಇಷ್ಟು ದಿನ ನಮ್ಮಲ್ಲಿದ್ದ ಅನುಮಾನವನ್ನು ಖಚಿತಪಡಿಸಿದ್ದಾರೆ. ಇದಕ್ಕೆ ಅವರಿಗೆ ಧನ್ಯವಾದ ಹೇಳಬೇಕು. ಇಲ್ಲಿಯವರೆಗೆ ನಕ್ಸಲೀಯರು ಮಾತ್ರ ಭಾರತದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ನಾವು ಭಾವಿಸಿದ್ದೆವು. ಇಂದು ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರನ್ನು ನಕ್ಸಲೀಯರು, ನಗರ ನಕ್ಸಲರನ್ನಾಗಿ ಮಾಡಿದ್ದಾರೆಂದು ಹೇಳಿದ್ದಾರೆ.
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ನಕ್ಸಲೀಯರಿಗೆ ಶರಣಾಗತಿ ಪ್ಯಾಕೇಜ್ ಘೋಷಿಸಿ, ಸಿಎಂ ಅಧಿಕೃತ ಕಚೇರಿಯಲ್ಲಿ ಶರಣಾದ ನಕ್ಸಲ್ ಕಾರ್ಯಕರ್ತರನ್ನು ವಿಶೇಷ ಗಣ್ಯ ಅತಿಥಿಗಳ ರೀತಿಯಲ್ಲಿ ಬರ ಮಾಡಿಕೊಂಡಿದ್ದನ್ನು ನೆನಪಿಸುತ್ತದೆ. ಪ್ರಭುತ್ವದ ವಿರುದ್ಧ ಹೋರಾಡಬೇಕೆಂದು ರಾಹುಲ್ ಗಾಂಧಿ ಹೇಳುವುದಾದರೆ ಆಯಾ ರಾಜ್ಯದ ಕಾಂಗ್ರೆಸ್ ಸರ್ಕಾರಗಳನ್ನು ವಜಾಗೊಳಿಸಬೇಕಾಗುತ್ತದೆ. ಕಾಂಗ್ರೆಸ್ ನಾಯಕ ಏಕಕಾಲಕ್ಕೆ ಎರಡು ನಿಲುವುಗಳನ್ನು ಪ್ರತಿಪಾದಿಸುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
Advertisement