
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಹಲವು ಗುಂಪುಗಳಿದ್ದು, ಈ ಹಿಂದೆ ಸಭೆ ನಡೆಸಲು ನಿರ್ಧರಿಸಿ, ತದನಂತರ ಹೈಕಮಾಂಡ್ ಮಧ್ಯ ಪ್ರವೇಶದಿಂದ ಹಿಂದೆ ಸರಿದಿದ್ದ ಪರಿಶಿಷ್ಟ ಸಮುದಾಯದ ಸಚಿವರು ಮತ್ತು ಶಾಸಕರು ಮತ್ತೆ ಸಭೆ ಸೇರುತ್ತಿದ್ದಾರೆ.
ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದಲ್ಲಿ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಟಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಪರಿಶಿಷ್ಟ ಸಮುದಾಯದ ಸಚಿವರು ಮತ್ತು ಶಾಸಕರ ಸಭೆ ಕರೆಯಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರ ಹೇಳಿದರು.
ಒಳ ಮೀಸಲಾತಿ ಜಾರಿಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಪರಿಶಿಷ್ಟ ಸಮುದಾಯದ ಉಪ ಜಾತಿಗಳ ನಾಯಕರ ಅಭಿಪ್ರಾಯ ಸಂಗ್ರಹಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಆಗಸ್ಟ್ 4 ರಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ಆಗಸ್ಟ್ 2 ರಂದು ಸಭೆ ನಡೆಯುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ಅದರಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಚರ್ಚೆ ನಡೆಸಲು ಬಯಸಿದ್ದೇವೆ. ಪ್ರತಿಯೊಬ್ಬರ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳಲು ನಾವು ಸಭೆ ನಡೆಸುತ್ತಿದ್ದೇವೆ ಎಂದು ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು.
ಪರಿಶಿಷ್ಟ ಸಮುದಾಯದಲ್ಲಿನ ಸಮೀಕ್ಷೆ ಮುಕ್ತಾಯಗೊಂಡಿರುವುದಾಗಿ ಹೇಳಲಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ವಿವಿಧ ಉಪ ಜಾತಿಗಳ ನಾಯಕರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿಸಲು ಬಯಸಿದ್ದೇವೆ. ಸಮೀಕ್ಷೆಗೂ ಹಿಂದೆಯೇ ಇಂತಹ ಸಭೆ ನಡೆದಿತ್ತು. ಇದು ಅದರ ಮುಂದುವರೆದ ಭಾಗವಾಗಿದೆ. ಈಗ ಸಮೀಕ್ಷೆ ಮುಗಿದಿದ್ದು, ಯಾವುದೇ ಗೊಂದಲವಾಗದಂತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಕಾಂಗ್ರೆಸ್ ಎಸ್ ಸಿ, ಎಸ್ ಟಿ ಸಮುದಾಯದ ಶಾಸಕರು, ಸಚಿವರ 'ಡಿನ್ನರ್' ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿದ ವಿಚಾರ ಕುರಿತ ಪ್ರತಿಕ್ರಿಯಿಸಿದ ಪರಮೇಶ್ವರ್, ಇದು ಅಂತಹ ಸಭೆಯಲ್ಲ. ನಾವು ಬೃಹತ್ ರ್ಯಾಲಿ ಮಾಡಲು ಯೋಜಿಸಿದ್ದೇವು. ಅದಕ್ಕಾಗಿ ಅದನ್ನು ಮುಂದೂಡುವಂತೆ ಹೈಕಮಾಂಡ್ ಹೇಳಿತ್ತು. ಆದರೆ, ಶಾಸಕರ ಸಭೆ ನಡಸದಂತೆ ಹೇಳಿಲ್ಲ. ಅವರು ಅದನ್ನು ಮಾಡಲು ಸಾಧ್ಯವಿಲ್ಲ. ಅದು ನಮ್ಮ ಇತಿಮಿತಿಯಲ್ಲಿದೆ. ಈ ಬಾರಿಯೂ ಡಿನ್ನರ್ ಅಥವಾ ಲಂಚ್ ಅಥವಾ ಕಾಫಿ ಯಾವುದೋ ಒಂದು ಮೀಟಿಂಗ್ ಮಾಡ್ತೇವೆ ಎಂದರು.
Advertisement