
ಬೆಂಗಳೂರು: ಐತಿಹಾಸಿಕ ನಂದಿಗಿರಿಧಾಮದಲ್ಲಿ ಜೂ.19ರಂದು ಸಚಿವ ಸಂಪುಟ ಸಭೆ ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ನಡೆಸುವ ಸಂಬಂಧ ನಾವು ಕೆಲಸ ಮಾಡುತ್ತಿದ್ದೇವೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ದೃಢಪಡಿಸಿದ್ದಾರೆ. ಅಲ್ಲಿ ಒಂದು ದೊಡ್ಡ ಸಭಾಂಗಣವಿದೆ, ನಾವು ಅದನ್ನು ಸಭೆಗೆ ಬಳಸುತ್ತೇವೆ. ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತೇವೆ ಎಂದಿದ್ದಾರೆ.
ಇತ್ತೀಚೆಗೆ ನಂದಿ ಬೆಟ್ಟದಲ್ಲಿ ಗಣನೀಯವಾಗಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಇದರಲ್ಲಿ 1986 ರಲ್ಲಿ ನಡೆದ ಎರಡನೇ ಸಾರ್ಕ್ ಶೃಂಗಸಭೆಗಾಗಿ ನಿರ್ಮಿಸಲಾದ ಸೌಲಭ್ಯಗಳನ್ನೂ ಸಹ ನವೀಕರಣಗೊಳಿಸಲಾಗಿದೆ.
ಕಲಬುರಗಿ ಮತ್ತು ಮಲೆ ಮಹದೇಶ್ವರ ಬೆಟ್ಟಗಳಲ್ಲಿ ನಡೆದ ಸಂಪುಟ ಸಭೆಗಳಿಗಿಂತ ಉತ್ತಮವಾಗಿ ನಂದಿ ಗಿರಿದಾಮದಲ್ಲಿ ನಡೆಯುವ ಸಭೆಗಾಗಿ ಅಧಿಕಾರಿಗಳು ಮಹತ್ವದ ಸಿದ್ಧತೆ ಕೈಗೊಂಡಿದ್ದಾರೆ. ವಿಧಾನಸೌಧದ ಹೊರಗೆ ಸಚಿವ ಸಂಪುಟ ನಡೆಸುವುದು ಹೊಸದಲ್ಲ. ಹಿಂದೆ, ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಮಾಗಡಿ ರಸ್ತೆಯ ತಿಪ್ಪಗೊಂಡನಹಳ್ಳಿ ಅತಿಥಿಗೃಹದಲ್ಲಿ ಸಚಿವ ಸಂಪುಟ ಸಭೆ ಸೇರಿತು. ಎಸ್.ಎಂ. ಕೃಷ್ಣ ಅವರ ಸರ್ಕಾರ ಒಮ್ಮೆ ಸಚಿವ ಸಂಪುಟವನ್ನು ಮೈಸೂರಿನ ಎಚ್.ಡಿ. ಕೋಟೆ ಬಳಿಯ ಹಸಿರಿನ ಹೊರವಲಯ, ಅಂದರೆ ಕೇರಳದ ಮಾನಂತವಾಡಿಗೆ ಹೋಗುವ ಮಾರ್ಗದಲ್ಲಿ ನಡೆದಿತ್ತು. ಆರ್. ಗುಂಡೂರಾವ್ ಅವರ ಆಡಳಿತವು ಬೆಂಗಳೂರಿನಾಚೆಗೆ ಕ್ಯಾಬಿನೆಟ್ ಸಭೆಗಳನ್ನು ನಡೆಸುವ ಪ್ರಯೋಗವನ್ನು ಮಾಡಿತು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪರ್ಕಿಸಿದಾಗ, ಅವರ ತಂದೆಯ ಕಾಲದಲ್ಲಿ, ರಾಜ್ಯದಾದ್ಯಂತ ಎಲ್ಲಾ ವಿಭಾಗೀಯ ಕೇಂದ್ರಗಳಲ್ಲಿ - ಕಲಬುರಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ - ಕ್ಯಾಬಿನೆಟ್ ಸಭೆಗಳು ನಡೆಯುತ್ತಿದ್ದವು ಎಂದು ನೆನಪಿಸಿಕೊಂಡರು.
ಆಂತರಿಕ ಮಾಹಿತಿಯ ಪ್ರಕಾರ, ಈ ಸಭೆಗಳು ಹೆಚ್ಚಾಗಿ ಸ್ಥಳೀಯ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ. ಆದ್ದರಿಂದ, ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುವಾಗ ಪ್ರವಾಸೋದ್ಯಮ, ಸಂರಕ್ಷಣೆ ಮತ್ತು ಮೂಲಸೌಕರ್ಯ ಸೇರಿದಂತೆ ಚಿಕ್ಕಬಳ್ಳಾಪುರ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳು ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ ಎಂದು ನಿರೀಕ್ಷಿಸಿಸಲಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ನಗರ ಕೇಂದ್ರವಾಗಿರುವ ಚಿಕ್ಕಬಳ್ಳಾಪುರಕ್ಕೆ ತುರ್ತು ಗಮನ ಹರಿಸಬೇಕಾದಂತ ಹಲವಾರು ಮೂಲಸೌಕರ್ಯ ಸಮಸ್ಯೆಗಳನ್ನು ಹೊಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಸುಧಾಕರ್ ಅವರು ಕೋಟೆಯಿಂದ ಬೆಟ್ಟದ ಮೇಲಿರುವ ಸಭೆಯ ಸಭಾಂಗಣಕ್ಕೆ ರಸ್ತೆ ಸಂಪರ್ಕವನ್ನು ಸುಧಾರಿಸಲು ಹೇಳಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಲೋಕೋಪಯೋಗಿ ಕಾರ್ಯದರ್ಶಿ ಮತ್ತು ಜಿಲ್ಲಾ ಅಧಿಕಾರಿಗಳು ಮಂಗಳವಾರ ಪೂರ್ವಸಿದ್ಧತಾ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲರ ಕಣ್ಣುಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಸ್ಮರಣೀಯ ಕ್ಯಾಬಿನೆಟ್ ಸಭೆಗಳಲ್ಲಿ ಒಂದಾಗಬಹುದಾದೆಂದು ನಿರೀಕ್ಷಿಸಲಾಗಿದೆ. ರಾಜ್ಯದ ಸುಂದರವಾದ ವಿಹಾರ ತಾಣವಾದ ನಂದಿ ಬೆಟ್ಟಕ್ಕೆ ಬೆಂಗಳೂರಿನಿಂದ 70 ನಿಮಿಷಗಳ ಪ್ರಯಾಣ ಸಮಯವಾಗಿದೆ.
Advertisement