
ಬೆಂಗಳೂರು: ಸರ್ವಾಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ನಿಧನರಾಗಿರಬಹುದು, ಆದರೆ ಪಕ್ಷದಲ್ಲಿರುವವೇ ಮನಸ್ಥಿತಿ ಇಂದಿಗೂ ಬದಲಾಗಿಲ್ಲ... ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನಾವು ಮರೆಯಬಾರದು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಆಯೋಜಿಸಿದ್ದ '1975 ರ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್- ಕರಾಳ ಇತಿಹಾಸಕ್ಕೆ 50 ವರ್ಷ' ಎಂಬ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಮಾತನಾಡುತ್ತಿದ್ದರು.
ಇತಿಹಾಸದಿಂದ ಪಾಠ ಕಲಿಯದಿದ್ದರೆ ಅವರು ಮಾಡಿದ ತಪ್ಪನ್ನು ಉತ್ತೇಜಿಸಿದಂತಾಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟಂತಹ ಪವಿತ್ರವಾದ ಸಂವಿಧಾನಕ್ಕೆ ಅಪಚಾರ ಮಾಡಿ, ತಿದ್ದುಪಡಿ ಮಾಡಿ, ತುರ್ತು ಪರಿಸ್ಥಿತಿ ಹೇರಿದಂತಹ ಮನಸ್ಸುಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಅಂದಿನ ಕತ್ತಲ ದಿನಗಳನ್ನು ಪ್ರತಿಯೊಬ್ಬರೂ ಅರಿಯಬೇಕು. ಅಂತಹ ದಿನಗಳಿಗೆ ಮತ್ತೆ ಅವಕಾಶ ನೀಡದೆ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎಂದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಲೇಜು ಮುಂದೆ ನಿಂತಿದ್ದಾಗ ನನ್ನನ್ನು ಅಕ್ರಮವಾಗಿ ಬಂಧಿಸಲಾಗಿತ್ತು. ಶಿವಮೊಗ್ಗ, ಬಳ್ಳಾರಿ ಕಾರಾಗೃಹದಲ್ಲಿರಿಸಲಾಗಿತ್ತು. ಅಧಿಕಾರವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳಬೇಕೆಂಬ ಉದ್ದೇಶದಿಂದ ಇಂದಿರಾ ಗಾಂಧಿ, ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಕ್ಕೆ ಅಂಕುಶ ಹಾಕಿದರು. ವಾಕ್ ಸ್ವಾತಂತ್ರ್ಯದ ಕತ್ತು ಹಿಸುಕಿದರು ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನದ ಪ್ರತಿ ಹಿಡಿದು, ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ಅವರ ಅಜ್ಜಿ ಇಂದಿರಾಗಾಂಧಿ ಅದೇ ಸಂವಿಧಾನವನ್ನು ನಾಶ ಮಾಡಿದ್ದರು. ಜನತಾ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಿ.ಆರ್. ಅಂಬೇಡ್ಕರ್ ರಚನೆಯ ಸಂವಿಧಾನ ಮತ್ತೆ ಜಾರಿಯಾಯಿತು. ಅದನ್ನು ರಾಹುಲ್ ಈಗ ಹಿಡಿದಿದ್ದಾರೆ ಎಂದು ಆರ್ಥಿಕ ಚಿಂತಕ ಎಸ್. ಗುರುಮೂರ್ತಿ ತಿಳಿಸಿದರು.
ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿ ಸಂವಿಧಾನವನ್ನು ತಿದ್ದುಪಡಿ ಮಾಡಿದರು. ಭಾರತದಲ್ಲಿ ಒಂದೇ ಪಕ್ಷ ಇರಬೇಕೆಂದು ನಿರಂಕುಶ ಪ್ರಭುತ್ವ ಸಾಧಿಸಲು ಹೊರಟರು. ಅವರು ಸೇರಿದಂತೆ ಕಾಂಗ್ರೆಸ್ನ ಯಾವ ನಾಯಕರೂ ಕರಾಳ ಅಧ್ಯಾಯವಾದ ತುರ್ತು ಪರಿಸ್ಥಿತಿ ಬಗ್ಗೆ ಇನ್ನೂ ಕ್ಷಮೆಯಾಚಿಸಿಲ್ಲ. ಸಂವಿಧಾನವನ್ನು ಹತ್ಯೆ ಮಾಡಿದವರು ಕಾಂಗ್ರೆಸ್ನವರು ಎಂದು ದೂರಿದರು.
‘ವಿದ್ಯಾರ್ಥಿ ಸಂಘಟನೆಯಲ್ಲಿದ್ದಾಗ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧನವಾದಾಗ, ಕದ್ದುಮುಚ್ಚಿ ಕ್ಯಾಮೆರಾವನ್ನು ಜೈಲಿಗೆ ತೆಗೆದುಕೊಂಡು ಹೋಗಿ, ಹಲವು ನಾಯಕರ ಚಿತ್ರಗಳನ್ನು ಸೆರೆಹಿಡಿದಿದ್ದೇನೆ’ ಎಂದು ಕಲಾವಿದ ಚಿ.ಸು. ಕೃಷ್ಣಸೆಟ್ಟಿ ಸ್ಮರಿಸಿಕೊಂಡರು.
ತುರ್ತುಪರಿಸ್ಥಿತಿ ಸಂದರ್ಭದಲ್ಲಿನ ಘಟನೆಗಳನ್ನು ವಿವರಿಸುವ ಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪುರಭವನದ ಮೆಟ್ಟಿಲುಗಳ ಮೇಲೆ ‘ಬೆಂಗಳೂರು ಕೇಂದ್ರ ಕಾರಾಗೃಹ’ದ ಪ್ರತಿಕೃತಿ ನಿರ್ಮಿಸಲಾಗಿತ್ತು. ವಿಶ್ರಾಂತ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ ಉಪಸ್ಥಿತರಿದ್ದರು.
Advertisement