ಕಾಂಗ್ರೆಸ್ ಸರ್ಕಾರ ನನ್ನನ್ನು ಗುರಿಯಾಗಿಸಿಕೊಂಡಿದೆ: HDK ಆರೋಪ ನಿರಾಕರಿಸಿದ DCM

ನ್ಯಾಯಾಲಯ ಹೇಳಿದಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಕೇತಗಾನಹಳ್ಳಿ ಸುದ್ದಿಗೆ ನಾವು ಹೋಗಿಲ್ಲ. ನಮಗೆ ಈ ವಿಚಾರ ಗೊತ್ತೂ ಇಲ್ಲ. ಯಾರೋ ಇದರ ಬಗ್ಗೆ ಪಿಐಎಲ್ ಹಾಕಿದ್ದಾರೆ.
DK Shivakumar-HD Kumaraswamy
ಡಿಕೆ ಶಿವಕುಮಾರ್-ಎಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರ ನನ್ನನ್ನು ಗುರಿಯಾಗಿಸಿಕೊಂಡಿದೆ ಎಂಬ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಆರೋಪವನ್ನು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ಮಂಗಳವಾರ ನಿರಾಕರಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ, ನಾವು ಎಂದಿಗೂ ದ್ವೇಷದ ರಾಜಕೀಯ ಮಾಡಿಲ್ಲ ಮತ್ತು ಅದರ ಅಗತ್ಯವೂ ಇಲ್ಲ ಎಂದು ಹೇಳಿದರು.

ನ್ಯಾಯಾಲಯ ಹೇಳಿದಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಕೇತಗಾನಹಳ್ಳಿ ಸುದ್ದಿಗೆ ನಾವು ಹೋಗಿಲ್ಲ. ನಮಗೆ ಈ ವಿಚಾರ ಗೊತ್ತೂ ಇಲ್ಲ. ಯಾರೋ ಇದರ ಬಗ್ಗೆ ಪಿಐಎಲ್ ಹಾಕಿದ್ದಾರೆ. ಇದು ಬಹಳ ವರ್ಷದಿಂದ ನಡೆದಿದೆ. ಭೂ ಒತ್ತುವರಿ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯವು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಇದರ ಬಗ್ಗೆ ನಾವು ಮಾಧ್ಯಮದಲ್ಲಿ ಓದಿದ್ದೇವೆ. ನ್ಯಾಯಾಲಯ ಕ್ರಮ ತೆಗೆದುಕೊಳ್ಳಲು ಗಡುವು ನೀಡಿದ ಕಾರಣಕ್ಕೆ ಅಧಿಕಾರಿಗಳು ಹೋಗಿ ಅಳತೆ ಮಾಡಿದ್ದಾರೆ ಎಂದು ತಿಳಿಸಿದರು.

ವಾಟ್ಸಪ್ ಅಲ್ಲಿ ಬಂದ ಸುದ್ದಿ ನೋಡಿದೆ. ಅಧಿಕಾರಿಗಳು ನೋಟಿಸ್ ನೀಡದೆ ಅಳತೆ ಮಾಡಲು ಸಾಧ್ಯವೇ? ಮೊದಲಿನಿಂದಲೂ ಅಳತೆ ಮಾಡಲಾಗಿತ್ತು. ಅವರ ಸಿಬ್ಬಂದಿ ಹೆಚ್ಚುವರಿ ಭೂಮಿಯಿದ್ದರೆ ವಾಪಸ್ ತೆಗೆದುಕೊಳ್ಳಿ ಎಂದು ಏಕೆ ಪತ್ರ ಬರೆದಿದ್ದಾರೆ? ಎಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಅವರು ನಮ್ಮ ಮೇಲೆ ಈ ಹಿಂದೆ ಏನು ಮಾತನಾಡಿದ್ದಾರೆ ಎಂಬುದನ್ನು ಈಗ ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

DK Shivakumar-HD Kumaraswamy
ಹೈಕೋರ್ಟ್ ಆದೇಶ: ಕೇಂದ್ರ ಸಚಿವ ಹೆಚ್ ​ಡಿ ಕುಮಾರಸ್ವಾಮಿ ಬಿಡದಿ ತೋಟದ ಮನೆ ಸುತ್ತ ಒತ್ತುವರಿ ತೆರವಿಗೆ ಸಿದ್ಧತೆ

ನಮ್ಮದೂ ಬೇಕಾದಷ್ಟು ದಾಖಲೆ ತೆಗೆದಿಟ್ಟುಕೊಂಡಿದ್ದಾರಂತೆ.‌ ನಾವು ಏನಾದರೂ ಒತ್ತುವರಿ ಮಾಡಿಕೊಂಡಿದ್ದರೆ ತೆಗೆದಿಡಲಿ. ಎಲ್ಲವೂ ನನ್ನ ಬಳಿ ಇದೆ, ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಅವರು ಹೇಳಿದ್ದ ನೆನಪು. ಮಧ್ಯರಾತ್ರಿ ಒತ್ತಿಸಿಕೊಂಡಿದ್ದಾರೆ, ಬರೆಸಿಕೊಂಡಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡಿದ್ದರು. ಕಾಸು ಕೊಟ್ಟು ಬರೆಸಿಕೊಂಡಿದ್ದೇವೆ. ಪುಗಸಟ್ಟೆ ಯಾರೂ ಬರೆದು ಕೊಡುವುದಿಲ್ಲ. ನಾನು ಒತ್ತುವರಿಗೆ ಯಾರಿಗಾದರೂ ಭಯಪಡಿಸಿದ್ದರೆ ಅವರಿಂದ ದೂರು ದಾಖಲಿಸಲಿ ಅಥವಾ ಇವರೇ ದೂರು ನೀಡಲಿ. ಇವರು ಮಾತ್ರ ಶುದ್ಧ, ನಾವು ಅಶುದ್ಧವೇ? ನಾವು ಯಾವುದೇ ದ್ವೇಷದ ರಾಜಕಾರಣಕ್ಕೆ ಹೋಗಿಲ್ಲ. ನನ್ನ ಮೇಲೂ ಬೇಕಾದಷ್ಟು ಪಿಐಎಲ್ ಹಾಕಿದ್ದಾರೆ ಎಂದು ಹರಿಹಾಯ್ದರು.

ನನ್ನ ಮೇಲೂ ಈ ಹಿಂದೆ ಅವರು ಬೇಕಾದಷ್ಟು ಆರೋಪ ಮಾಡಿಲ್ಲವೇ? ಗ್ರಾನೈಟ್ ಅದು, ಇದು ಕದ್ದಿದ್ದೀರಿ ಎಂದು ಹೇಳಿರಲಿಲ್ಲವೇ? ನನ್ನ ಹೆಂಡತಿ, ತಂಗಿ, ತಮ್ಮನ ಮೇಲೆ ತನಿಖೆ ನಡೆದಿರಲಿಲ್ಲವೇ? ಬಳ್ಳಾರಿಗೆ ಹೋಗಿ ಕದ್ದುಕೊಂಡು ಬಂದಿದ್ದೀರಿ ಎಂದು ಪ್ರಕರಣ ದಾಖಲಿಸಿರಲಿಲ್ಲವೇ? ಇವರ ಅಣ್ಣ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಬೇಕಾದಂತೆ ಅರ್ಜಿ ಬರೆದುಕೊಟ್ಟಿರಲಿಲ್ಲವೇ? ನಮಗೆಲ್ಲಾ ಇದು ತಿಳಿದಿಲ್ಲವೇ? ಸುಮ್ಮನೆ ಕಾಂಗ್ರೆಸ್, ಕಾಂಗ್ರೆಸ್ ಎನ್ನುತ್ತಾರೆ.‌ ಯಾವ ಕಾಂಗ್ರೆಸ್ಸಿಗರು ಇವರ ವಿಚಾರಕ್ಕೆ ಹೋಗಿಲ್ಲ. ಇವರ ಜಮೀನು ಇದ್ದರೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೇ ಬಿಟ್ಟುಕೊಡಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com