
ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆ "ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್" ಸೇರ್ಪಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಹಂಚಿಕೊಂಡ ಪ್ರಮಾಣಪತ್ರ ಇದೀಗ ಅಪಹಾಸ್ಯಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.
ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದರು. ಆದರೆ ಇದು ನಕಲಿ ಎಂದು ಬಿಜೆಪಿ ಆರೋಪಿಸಿದ್ದು, ಈ ಬಗ್ಗೆ, ಸಿಎಂ ಕಚೇರಿ(ಸಿಎಂಒ) ಈಗ ಪರಿಶೀಲಿಸುತ್ತಿದೆ.
ಮೂರು ದಿನಗಳ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ವಾಸಿಸುವ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಸುಗಮಗೊಳಿಸುವ ತಮ್ಮ ಸರ್ಕಾರದ 'ಶಕ್ತಿ' ಯೋಜನೆಯ ಮೂಲಕ ಅತಿ ಹೆಚ್ಚು ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕಾಗಿ 'ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಸೇರಿದೆ ಎಂದು ಪ್ರಮಾಣ ಪತ್ರ ಹಂಚಿಕೊಂಡಿದ್ದರು.
ಬಿಜೆಪಿ ಎಂಎಲ್ಸಿ ಮತ್ತು ಮಾಜಿ ಸಚಿವ ಸಿ ಟಿ ರವಿ ಹೇಳಿದಂತೆ ಈ ಪ್ರಮಾಣಪತ್ರವು ನಕಲಿ ಎಂದು ಈಗ ತಿಳಿದುಬಂದಿದೆ.
ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಲಿಮಿಟೆಡ್ ಅನ್ನು "ಜುಲೈ 15, 2025 ರಂದು ಮುಚ್ಚಲಾಯಿತು" ಎಂದು ಜೆಡಿ(ಎಸ್) ಹೇಳಿಕೊಂಡಿದೆ.
"ಈ ಪ್ರಮಾಣಪತ್ರ ನಕಲಿ ಮಾತ್ರವಲ್ಲ. ಅದರ ದರಪಟ್ಟಿಯೂ ಇದೆ! ನೀವು ಎಷ್ಟು ಕೆಳಮಟ್ಟಕ್ಕೆ ಹೋಗಿ ಜನರನ್ನು ಮರುಳು ಮಾಡಲು ಈ ಅಗ್ಗದ ತಂತ್ರಗಳನ್ನು ಮಾಡುತ್ತೀದಿರಿ" ಎಂದು ಸಿಟಿ ರವಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉದಾಹರಣೆಗೆ, ಪ್ರಮಾಣಪತ್ರ, ಪದಕ, ಟ್ರೋಫಿಯನ್ನು ಹೊಂದಿರುವ 4,000 ರೂ.ಗಳ 'ಕ್ಲಾಸಿಕ್ ಯೋಜನೆ'ಯನ್ನು ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ. ಪ್ಲಾಟಿನಂ ಪ್ಯಾಕೇಜ್ ಬೆಲೆ 10,000 ರೂ. ಎಂದು ಹೇಳಿದ್ದಾರೆ.
ಅವಿನಾಶ್ ಡಿ ಸಕುಂಡೆ ಲಂಡನ್ ಬುಕ್ ಆಫ್ ರೆಕಾರ್ಡ್ಸ್ನ "ಅಂತರರಾಷ್ಟ್ರೀಯ ಅಧ್ಯಕ್ಷರು" ಆಗಿದ್ದರೆ, ಡಾ. ಇವಾನ್ ಗಸಿನಾ ಯುರೋಪಿಯನ್ ಯೂನಿಯನ್ ಮುಖ್ಯಸ್ಥರಾಗಿದ್ದು, ಅವರು ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದಾರೆ.
ಇದು "ಕಾಂಗ್ರೆಸ್ಗೆ ದೊಡ್ಡ ಮುಜುಗರ" ಎಂದು ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ ಪೋಸ್ಟ್ ಮಾಡಿದ್ದಾರೆ.
"ನಿನ್ನೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ರಾಜ್ಯ ಯೋಜನೆಗಳನ್ನು ಲಂಡನ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ಅದು ನಕಲಿ ಎಂದು ತಿಳಿದುಬಂದಿದೆ. ಯಾರೋ ಅಕ್ಷರಶಃ ಕಾಂಗ್ರೆಸ್ ಗೆ ಮೋಸ ಮಾಡಿದ್ದಾರೆ! ಈ ಪ್ರಮಾಣಪತ್ರವು ಕಾಗುಣಿತ ಮತ್ತು ವ್ಯಾಕರಣ ದೋಷಗಳಿಂದ ತುಂಬಿದೆ ಎಂದು ಟೀಕಿಸಿದ್ದಾರೆ.
ಇನ್ನು ಈ ಬಗ್ಗೆ ಸ್ಪಷ್ಟಿಕರಣ ಪಡೆಯಲು ಸಿಎಂ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಸಂಪರ್ಕಿಸಿದಾಗ, "ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಅದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ಈಗ ನಾವು ಅವರಿಂದ ಸ್ಪಷ್ಟೀಕರಣ ಕೇಳಿದ್ದೇವೆ" ಎಂದಿದ್ದಾರೆ.
Advertisement