
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಒಂದೆಡೆ ಟೀಕೆ ವ್ಯಕ್ತವಾಗುತ್ತಲೇ ಇದೆ. ಬಿಟ್ಟಿ ಭಾಗ್ಯಗಳನ್ನು ಜನರಿಗೆ ನೀಡಿ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂಬ ಕೂಗು ಕೇಳಿಬರುವ ಮಧ್ಯೆ ಮಹಿಳೆಯರಿಗೆ ಸರ್ಕಾರಿ ಸಾಮಾನ್ಯ ಬಸ್ಸುಗಳಲ್ಲಿ ಉಚಿತ ಸಂಚಾರಕ್ಕೆ ಇರುವ 'ಶಕ್ತಿ' ಯೋಜನೆ ವಿಶ್ವ ದಾಖಲೆ ಮಾಡಿದೆ.
ಶಕ್ತಿ ಯೋಜನೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (London Book Of World Records) (ಎಲ್ಬಿಡಬ್ಲ್ಯೂಆರ್) ನಿರ್ಮಿಸಿದ್ದು, ಅಧಿಕೃತವಾಗಿ ಪ್ರಮಾಣಪತ್ರ ಸಿಕ್ಕಿದೆ. ಈ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಪಡೆದಿರುವ ಅತಿ ಹೆಚ್ಚು ಉಚಿತ ಬಸ್ ಪ್ರಯಾಣಗಳ ಸಂಖ್ಯೆ 564.10 ಕೋಟಿ ಎಂದು ದಾಖಲಾಗಿದೆ. ಈ ಸಾಧನೆಯನ್ನು ಗಮನಿಸಿ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ನೀಡಿದೆ.
ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ‘ಶಕ್ತಿ’
ರಾಜ್ಯದ ಶಕ್ತಿ ಯೋಜನೆ ವಿಶ್ವಮಟ್ಟದಲ್ಲಿ ಪ್ರಶಂಸೆ ಗಳಿಸಿದೆ. ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಪ್ರಶಸ್ತಿ ಪಡೆದುಕೊಂಡು ತನ್ನ ಖ್ಯಾತಿ ಹೆಚ್ಚಿಸಿಕೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಇದರ ಜೊತೆಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶ್ವದಲ್ಲೇ ಅತಿ ಹೆಚ್ಚು ಪ್ರಶಸ್ತಿ ಪಡೆದ ರಸ್ತೆ ಸಾರಿಗೆ ನಿಗಮವೆಂದು ಗುರುತಿಸಲ್ಪಟ್ಟಿದೆ. 1997ರಿಂದ ಇಲ್ಲಿಯವರೆಗೆ 46 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಈ ಎರಡು ದಾಖಲೆಗಳು ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.
ಸಿಹಿಸುದ್ದಿ ಹಂಚಿಕೊಂಡ ಸಿದ್ದರಾಮಯ್ಯ
ಎಲ್ಬಿಡಬ್ಲ್ಯೂಆರ್ ಪ್ರಮಾಣೀಕರಿಸಿದ ಎರಡು ಐತಿಹಾಸಿಕ ವಿಶ್ವ ದಾಖಲೆಗಳೊಂದಿಗೆ ಕರ್ನಾಟಕ ಜಾಗತಿಕ ವೇದಿಕೆಗೆ ಪ್ರವೇಶಿಸಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರು 564.10 ಕೋಟಿ ಪ್ರಯಾಣಗಳನ್ನು ಮಾಡಿದ್ದಾರೆ. ಇದು ಅವರ ದೈನಂದಿನ ಚಲನಶೀಲತೆಯನ್ನು ಬಲಪಡಿಸುತ್ತದೆ. ಕೆಎಸ್ಆರ್ಟಿಸಿಯು 44 ಪ್ರಶಸ್ತಿಗಳೊಂದಿಗೆ ಸಾರ್ವಜನಿಕ ಸೇವೆಯಲ್ಲಿ ಮುಂದುವರಿದಿದೆ" ಎಂದು ಹೇಳಿದ್ದಾರೆ.
ಈ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ದೊಡ್ಡ ನೆರವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣಿಸಿ, ಕೆಲಸ, ಶಿಕ್ಷಣ ಮತ್ತು ಇತರ ಕಾರ್ಯಗಳನ್ನು ಸುಲಭವಾಗಿ ಮಾಡುತ್ತಿದ್ದಾರೆ. ಇದರಿಂದ ಅವರ ಆರ್ಥಿಕ ಭಾರ ಕಡಿಮೆಯಾಗಿದೆ ಮತ್ತು ಸ್ವಾವಲಂಬನೆ ಹೆಚ್ಚಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. "ಜನರ ಮೊದಲು ಆಡಳಿತಕ್ಕೆ ಇದು ಜಾಗತಿಕ ಮನ್ನಣೆ! ನಮ್ಮ ಜನಕೇಂದ್ರಿತ ಆಡಳಿತ ಕರ್ನಾಟಕಕ್ಕೆ ಎರಡು ಐತಿಹಾಸಿಕ ಜಾಗತಿಕ ಗೌರವಗಳನ್ನು ತಂದಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ 564 ಕೋಟಿ ಪ್ರಯಾಣಗಳು ನೀಡಿ, ಚಲನಶೀಲತೆಯನ್ನು ಬದಲಿಸಿದೆ. ಕೆಎಸ್ಆರ್ಟಿಸಿಯ 464 ಪ್ರಶಸ್ತಿಗಳು ಸಾರ್ವಜನಿಕ ಸೇವೆಯಲ್ಲಿ ನಮ್ಮ ಬದ್ಧತೆಯನ್ನು ತೋರಿಸುತ್ತವೆ. ಈ ಉತ್ಸಾಹದೊಂದಿಗೆ ಕರ್ನಾಟಕವನ್ನು ಇನ್ನಷ್ಟು ಎತ್ತರಕ್ಕೆ ನಾವು ತೆಗೆದುಕೊಂಡು ಹೋಗುತ್ತೇವೆ" ಎಂದಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಯಶಸ್ಸಿನ ಸಂಕೇತವೆಂದು ಬಣ್ಣಿಸಿದ್ದಾರೆ.
Advertisement