
ಹಾಸನ: ಚೆನ್ನೈ-ಬೆಂಗಳೂರು ರಾಷ್ಟ್ರೀಯ ಎಕ್ಸ್ಪ್ರೆಸ್ವೇ-7 [NE-7] ಮತ್ತು ಬೆಂಗಳೂರು-ಹೈದರಾಬಾದ್ [NH-44] ಗಳ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು, ಯೋಜನೆಯನ್ನು ಪೂರ್ಣಗೊಳಿಸಲು ಮುಂಬರುವ ಬಜೆಟ್ನಲ್ಲಿ ಕೇಂದ್ರವು ಸಾಕಷ್ಟು ಅನುದಾನವನ್ನು ಒದಗಿಸಬೇಕು ಎಂದಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಂಭವಿಸಿದ ಮೊಸಳೆಹೊಸಳ್ಳಿ ದುರಂತ, ಕಾವೇರಿ, ಕೃಷ್ಣ ನದಿ ನೀರು ಹಂಚಿಕೆ ವಿಚಾರ, ರಸ್ತೆ ಕಾಮಗಾರಿಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಬೆಂಗಳೂರು, ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಮುಗಿದಿರುವುದನ್ನು ಉಲ್ಲೇಖಿಸಿದ ಅವರು, “ಉಳಿದ ಕಾಮಗಾರಿಗಾಗಿ ಅಗತ್ಯವಿರುವ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಹೈದರಾಬಾದ್ - ಬೆಂಗಳೂರು ರಸ್ತೆಯೂ ಪೂರ್ತಿಯಾಗಬೇಕು. ಈ ಮೂರು ಪ್ರಮುಖ ರಸ್ತೆಗಳು (ಚೆನ್ನೈ, ಬೆಂಗಳೂರು, ಹೈದರಾಬಾದ್- ಬೆಂಗಳೂರು, ಶಿರಾಡಿಘಾಟ್) ಸಂಪೂರ್ಣವಾದರೆ ರಾಜ್ಯದ ಅಭಿವೃದ್ಧಿಗೆ ದೊಡ್ಡ ದಾರಿ ತೆರೆದುಕೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟರು.
ಆಸ್ಕರ್ ಫರ್ನಾಂಡಿಸ್ ಅವರ ಕಾಲದಲ್ಲಿ 10 ಕಿಲೋಮೀಟರ್ ಉದ್ದದ ಸುರಂಗ ನಿರ್ಮಾಣದ ಮನವಿ ಮಾಡಿದ್ದೆ. ಆದರೆ ಇನ್ನೂ ಅದು ಆಗಿಲ್ಲ. ಈಗ ಬೆಟ್ಟಗಳು ನಿರಂತರ ಕುಸಿಯುತ್ತಿವೆ. ಇದಕ್ಕೆ ಶಾಶ್ವತ ಪರಿಹಾರವೆಂದರೆ ಸುರಂಗ ನಿರ್ಮಾಣ. ಸುರಂಗ ನಿರ್ಮಾಣ ಮಾಡಿದ ನಂತರ ಮರಗಳನ್ನು ನೆಡಿಸಿ ಅರಣ್ಯವನ್ನೂ ಬೆಳೆಸಬಹುದು. ಆದಷ್ಟು ಬೇಗ ಈ ಕೆಲಸ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು” ಎಂದು ಒತ್ತಾಯಿಸಿದರು.
ಭಾರತ್ಮಾಲಾ ಪರಿಯೋಜನಾ ಅಡಿಯಲ್ಲಿ 288 ಕಿ.ಮೀ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇ ಪ್ರಯಾಣದ ಸಮಯವನ್ನು 7 ಗಂಟೆಗಳಿಂದ 3 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ ಮತ್ತು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕೈಗಾರಿಕಾ ಸಂಚಾರವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
93ನೇ ವಯಸ್ಸಿನಲ್ಲಿರುವ ನಾನು ರಾಜಕೀಯ ಲಾಭಕ್ಕಾಗಿ ಮಾತನಾಡುವುದಿಲ್ಲ. 65 ವರ್ಷಗಳ ರಾಜಕೀಯ ಜೀವನದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಶಕ್ತಿಮೀರಿ ಹೋರಾಟ ಮಾಡಿದ್ದೇನೆ. ಜನರ ಒಳಿತಿನ ವಿಷಯದಲ್ಲಿ ರಾಜಕೀಯ ಮಾಡುವುದು ತಕ್ಕುದಲ್ಲ” ಎಂದು ಹೇಳಿದರು. ನಾನು ರಾಜಕೀಯದಿಂದ ನಿವೃತ್ತಿ ಆಗಲ್ಲ. ಈಗ ವೀಲ್ಚೇರ್ನಲ್ಲಿ ಬಂದಿದ್ದೇನೆ. ಸಂಸತ್ತಿಗೂ ವೀಲ್ಚೇರ್ನಲ್ಲಿ ಹೋಗುತ್ತೇನೆ. ನನಗೆ ಶಕ್ತಿ, ಅರ್ಹತೆ ಇದೆ. 65 ವರ್ಷಗಳ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿದ್ದು, ಮುಂದುವರಿಸುತ್ತೇನೆ’ ಎಂದು ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಹೇಳಿದರು.
ಮೊಸಳೆಹೊಸಹಳ್ಳಿ ಗಣೇಶ ಮೆರವಣಿಗೆಯ ವೇಳೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಮೃತರಿಗೆ ತಲಾ ₹1 ಲಕ್ಷ, ತೀವ್ರ ಗಾಯಾಳುಗಳಿಗೆ ₹ 25ಸಾವಿರದಿಂದ ₹15ಸಾವಿರದವರೆಗೆ ಪರಿಹಾರ ನೀಡಲಾಗುವುದು. ಪಕ್ಷದಲ್ಲಿ ಹಣ ಇರಲಿ, ಇಲ್ಲದೇ ಇರಲಿ ಜವಾಬ್ದಾರಿ ಹೊತ್ತುಕೊಂಡಿದ್ದೇನೆ ಎಂದರು.
ಜಿಲ್ಲಾಧಿಕಾರಿಯಿಂದ ಮೃತರ ಮಾಹಿತಿ ಪಡೆದು ಅವರ ಕುಟುಂಬದವರಿಗೆ ಪರಿಹಾರ ಹಣವನ್ನು ಹಸ್ತಾಂತರಿಸಲಾಗುವುದು. ಇಲ್ಲವಾದರೆ ಜಿಲ್ಲಾಧಿಕಾರಿ ಮೂಲಕವೇ ಅರ್ಹರಿಗೆ ಪರಿಹಾರ ಹಣ ತಲುಪಿಸಲಾಗುವುದು ಎಂದರು.
Advertisement