

ಬೆಂಗಳೂರು: ಬಿಜೆಪಿಯಿಂದ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಬೂಟ್ ನೆಕ್ಕುವ ಸಂಸ್ಕೃತಿ ನಿಮ್ಮ ಪಕ್ಷದಲ್ಲಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಮುಖಂಡ ರುದ್ರೇಶ್ ಮಾಡಿರುವ ಟೀಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸೋಮಶೇಖರ್, ಈ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸೋಮವಾರ ಪತ್ರ ಬರೆದು 13 ಪ್ರಶ್ನೆ ಕೇಳಿದ್ದಾರೆ. ಸೋಮಶೇಖರ್ ಅವರ ಈ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೊಳಗಾಗುತ್ತಿದೆ.
ಬಜೆಟ್ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ನಾನು ನೈಸ್ ರಸ್ತೆ ಯೋಜನೆ ಸಂತ್ರಸ್ತ ರೈತರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೆ. ನಿಮ್ಮ ಮತ್ತು ನಿಮ್ಮ ಮಗ ಬಿ.ವೈ.ವಿಜಯೇಂದ್ರ ಅವರ ಹಿಂಬಾಲಕನಾಗಿರುವ ರುದ್ರೇಶ್ ಎಂಬಾತ ಸುದ್ದಿಗೋಷ್ಠಿ ನಡೆಸಿದ್ದಾನೆ. ಬಿಜೆಪಿಯಲ್ಲಿ ಯಾರ ಬೂಟ್ ನೆಕ್ಕಲು ಬರುತ್ತೀಯಾ ಎಂದು ನನ್ನನ್ನು ಪ್ರಶ್ನಿಸಿದ್ದಾನೆ. ಆ ವ್ಯಕ್ತಿ ಯಾರು? ಬೂಟ್ ನೆಕ್ಕುವವರಿಗೆ ಮಾತ್ರ ನಿಮ್ಮಲ್ಲಿ ಅವಕಾಶವೇ ಎಂದು ಸೋಮಶೇಖರ್ ಪ್ರಶ್ನಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ಪಕ್ಷದ ನಾಯಕರುಗಳಿಂದಾದ ಸಮಸ್ಯೆಗಳು ಮತ್ತು ಗೊಂದಲಗಳಿಂದ ಬೇಸತ್ತು, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದೆ. ವಿಜಯೇಂದ್ರ ಎಲ್ಲವನ್ನೂ ಸರಿಪಡಿಸುತ್ತಾನೆ ಎಂದು ನೀವು ಹೇಳಿದ್ದರಿಂದ ಪಕ್ಷದಲ್ಲಿ ಉಳಿದಿದ್ದೆ. ಆದರೆ ನನ್ನನ್ನು ಉಚ್ಚಾಟನೆ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀವು ಕರೆದಾಗ ನನ್ನ ರಾಜಕೀಯ ಜೀವನವನ್ನೇ ಒತ್ತೆ ಇಟ್ಟು ಬಿಜೆಪಿ ಸೇರಿದ್ದಕ್ಕೆ ಕಿಂಚಿತ್ತೂ ಉಪಕಾರ ಸ್ಮರಣೆ ಇಲ್ಲದೆ, ಬೆನ್ನಮೂಳೆ ಇಲ್ಲದ ವ್ಯಕ್ತಿಯನ್ನು ನೀವು ಛೂ ಬಿಟ್ಟಿದ್ದೀರಾ? ನನ್ನ ಮುಂದಿನ ನಿರ್ಣಯಕ್ಕೆ ನೀವು ಕೊಡುವ ಉತ್ತರ ಬಹಳ ಮುಖ್ಯವಾಗಿದೆ.
ಎಸ್.ಟಿ ಸೋಮಶೇಖರ್ ( ಉಚ್ಚಾಟಿತ ಬಿಜೆಪಿ ಶಾಸಕ)
ನನ್ನ ರಾಜಕೀಯ ಜೀವನವನ್ನು ಒತ್ತೆ ಇಟ್ಟು ನಿಮ್ಮೊಂದಿಗೆ ಬಂದೆ. ಆದರೆ ಉಪಕಾರ ಸ್ಮರಣೆ ಇಲ್ಲದೆ, ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ರುದ್ರೇಶ್ ಎಂಬಾತನನ್ನು ಛೂಬಿಟ್ಟಿದ್ದೀರಿ. ಕ್ಷೇತ್ರದಲ್ಲಿ ಈಗಲೂ ನನ್ನ ಹಿಡಿತ ಇದೆ ಎಂಬುದು ನಿಮಗೆ ತಿಳಿದಿದ್ದರೆ ಸಾಕು ಎಂದಿದ್ದಾರೆ. ಈ ಪತ್ರದಲ್ಲಿ ನಾನು ಎತ್ತಿರುವ ಪ್ರಶ್ನೆಗಳಿಗೆ ನೀವು ಉತ್ತರ ನೀಡಬೇಕು. ನನ್ನ ಮುಂದಿನ ನಿರ್ಣಯ ಏನಾಗಿರಬೇಕು ಎಂಬ ದೃಷ್ಟಿಯಲ್ಲಿ ನಿಮ್ಮ ಉತ್ತರ ಬಹಳ ಮುಖ್ಯವಾಗಲಿದೆ’ ಎಂದಿದ್ದಾರೆ.
ಈ ವಿಚಾರವಾಗಿ ಕೇಂದ್ರ ನಾಯಕರಿಗೆ ಪತ್ರ ಬರೆದಿಲ್ಲ. ಯಡಿಯೂರಪ್ಪನವರು, ವಿಜಯೇಂದ್ರ ಹಾಗೂ ಸಂಘ ಪರಿವಾರದ ಪ್ರಮುಖರಿಗೆ ಬರೆದಿದ್ದೇನೆ. ನನ್ನ ವಿಚಾರದಲ್ಲಿ ಯಡಿಯೂರಪ್ಪನವರಾಗಲಿ, ವಿಜಯೇಂದ್ರ ಅವರಾಗಲಿ ಅಗೌರವದಿಂದ ನಡೆದುಕೊಂಡಿಲ್ಲ. ಟೀಕೆ ವಿಚಾರವಾಗಿ ಸ್ಪೀಕರ್ಗೆ ಹಕ್ಕುಚ್ಯುತಿ ಮಂಡನೆ ಪ್ರಸ್ತಾವ ಸಲ್ಲಿಸಿದ್ದೇನೆ. ವಕೀಲರೊಂದಿಗೂ ಚರ್ಚಿಸುತ್ತಿದ್ದೇನೆ.
ಯಡಿಯೂರಪ್ಪ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಪತ್ರ ನೀಡಿ ವಾಸ್ತವಾಂಶವನ್ನು ಗಮನಕ್ಕೆ ತರುತ್ತೇನೆ. ಬಿಜೆಪಿಗೆ ಮರಳುವ ಚಿಂತನೆ ಮಾಡಿಲ್ಲ. ಕಾಂಗ್ರೆಸ್ ಸೇರುವುದಾಗಿಯೂ ಹೇಳಿಲ್ಲ. ದೊಡ್ಡ ಕ್ಷೇತ್ರವಾಗಿರುವುದರಿಂದ ಸಿಎಂ, ಡಿಸಿಎಂ, ಸಚಿವರನ್ನು ಭೇಟಿಯಾಗಿ ಅನುದಾನ ಪಡೆದು ಕೆಲಸ ಮಾಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಬಿಎಸ್ ಯಡಿಯೂರಪ್ಪ ಅವರನ್ನು ಸುದ್ದಿಗಾರರು ಕೇಳಿದಾಗ, ''ಈ ಬಗ್ಗೆ ನನಗೇನು ಗೊತ್ತಿಲ್ಲ,'' ಎಂದಷ್ಟೇ ಹೇಳಿದ್ದಾರೆ.
Advertisement