

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನ ಮುಂದುವರಿಕೆ ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತು ಸ್ಪಷ್ಟತೆ ಪಡೆಯಲು ಕಾಂಗ್ರೆಸ್ ಹೈಕಮಾಂಡ್ ನ್ನು ಭೇಟಿ ಮಾಡುವುದಕ್ಕೂ ಮುನ್ನವೇ, 25–30 ಕಾಂಗ್ರೆಸ್ ಶಾಸಕರ ಗುಂಪೊಂದು ಇಂದು ಭಾನುವಾರ ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕೆ ಬೇಡಿಕೆಯಿಡಲು ಮುಂದಾಗಿವೆ.
ಮೂರಕ್ಕಿಂತ ಹೆಚ್ಚು ಬಾರಿ ಚುನಾವಣೆಯಲ್ಲಿ ಗೆದ್ದಿರುವ ಈ ನಾಯಕರು, ಸೋಮವಾರ ಸಂಜೆ ಹಿಂದಿರುಗುವ ಯೋಜನೆ ಮಾಡಿಕೊಂಡಿದ್ದಾರೆ, ಹೀಗಾಗಿ ಮಂಗಳವಾರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಈ ಗುಂಪಿನಲ್ಲಿ ಸುಬ್ಬಾರೆಡ್ಡಿ, ಪುಟ್ಟರಂಗ ಶೆಟ್ಟಿ, ಹಂಪನಗೌಡ ಬಾದರ್ಲಿ, ಬಿ.ಜಿ. ಶಾಂತನಗೌಡ, ಎ.ಟಿ. ಪಾಟೀಲ್, ಎ.ಆರ್. ಕೃಷ್ಣಮೂರ್ತಿ, ಪ್ರಸಾದ್ ಅಬ್ಬಯ್ಯ, ಯು.ಬಿ. ಬಣಕಾರ್, ಜಿ.ಎಸ್. ಪಾಟೀಲ್, ಯಶವಂತರಾಯಗೌಡ ಪಾಟೀಲ್, ಕೆ. ಷಡಕ್ಷರಿ, ಅಶೋಕ್ ಪಟ್ಟಣ, ಟಿ.ಬಿ. ಜಯಚಂದ್ರ, ಎಸ್.ಎನ್. ನಾರಾಯಣಸ್ವಾಮಿ, ಲಕ್ಷ್ಮಣ ಸವದಿ, ಅಪ್ಪಾಜಿ ನಾಡಗೌಡ, ರಿಜ್ವಾನ್ ಅರ್ಶದ್, ಪ್ರಿಯಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಬಿ.ಆರ್. ಪಾಟೀಲ್, ಬಿ. ಶಿವಣ್ಣ, ವಿನಯ್ ಕುಲಕರ್ಣಿ, ರಾಘವೇಂದ್ರ ಹಿಟ್ನಾಳ್ ಮತ್ತು ಪಿ.ಎಂ. ನರೇಂದ್ರಸ್ವಾಮಿ ಸೇರಿದ್ದಾರೆ.
ಟಿ ಬಿ ಜಯಚಂದ್ರ ಅವರು, ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ (2028ರ ವಿಧಾನಸಭಾ ಚುನಾವಣೆಗೆ ಮುನ್ನ) ಪಕ್ಷದಲ್ಲಿ ಸದಸ್ಯರೊಳಗೆ ಸಮಸ್ಯೆ, ಭಿನ್ನಾಭಿಪ್ರಾಯ ಬರದಂತೆ, ಇತರರಿಗೂ ಅವಕಾಶ ನೀಡಬೇಕು ಎಂಬುದು ಮುಖ್ಯ ಬೇಡಿಕೆಯಾಗಿದೆ. ಈ ಮನವಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಇಡಲಾಗುತ್ತದೆ ಎಂದು ಹೇಳಿದರು.
Advertisement