

ಬೆಂಗಳೂರು: ವಿಧಾನಸೌಧಕ್ಕೆ ಮತ್ತೆ ವಾಪಸ್ ಬರೋದು ಭಗವಂತ ಇಚ್ಛೆ ಮತ್ತು ಜನರ ಆಶೀರ್ವಾದದಿಂದ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು.
ಎರಡು ವರ್ಷಗಳ ಬಳಿಕ ಕೈಗಾರಿಕಾ ಸಚಿವರ ಜೊತೆ ಸಭೆ ನಡೆಸಲು ವಿಧಾನಸೌಧಕ್ಕೆ ಅವರು ಆಗಮಿಸಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು, ಯಾವಾಗ ವಿಧಾನಸೌಧಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ವಿಧಾನಸೌಧಕ್ಕೆ ಮತ್ತೆ ಬರೋದು ಅದೆಲ್ಲವನ್ನು ಭಗವಂತ ನಿಗದಿ ಮಾಡುತ್ತಾನೆ.
ರಾಜ್ಯದ ಜನತೆ ಆಶೀರ್ವಾದದ ಜೊತೆಗೆ ಭಗವಂತ ನಮ್ಮ ಹಣೆಯಲ್ಲಿ ಬರೆದಿರುತ್ತಾನೆ. ಅದರ ಪ್ರಕಾರ ನಾವು ಕೆಲಸವನ್ನು ನಿರ್ವಹಣೆ ಮಾಡಬೇಕಾಗುತ್ತದೆ. ನೋಡೋಣ ಮುಂದಿನ ದಿನಗಳಲ್ಲಿ ಭಗವಂತ ಇಚ್ಛೆ ಏನಿದೆ ಎಂದರು.
ನಾವು ಮೈತ್ರಿ ಪಕ್ಷದ ಹೊಂದಾಣಿಕೆಯಲ್ಲಿ ಇದ್ದೇವೆ. ದೆಹಲಿ ಬಿಜೆಪಿ ಹೈಕಮಾಂಡ್ ನಾಯಕರು, ರಾಜ್ಯ ನಾಯಕರು ನಾವೆಲ್ಲ ಜೊತೆಗೂಡಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಬರೋದಕ್ಕೆ ಜನತೆ ಆಶೀರ್ವಾದದಿಂದ ಪ್ರಯತ್ನ ಪಡುತ್ತೇವೆ ಎಂದರು. 2028 ರಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಹಾಗೂ ವಿಧಾನಸೌಧಕ್ಕೆ ಮತ್ತೆ ಬರುವ ಸಂದರ್ಭ ಸೃಷ್ಟಿಸುವ ಪ್ರಯತ್ನ ನಡೆಸುತ್ತೇವೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
Advertisement