

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ಗಾಗಿ 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ಗೆಲ್ಲಿಸಿಕೊಂಡು ಬರದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಕೆಪಿಸಿಸಿ ಸಭೆಯಲ್ಲಿ ಡಿಕೆ ಶಿವಕುಮಾರ್, ಸುರ್ಜೇವಾಲಾ ಅವರ ಎದುರಲ್ಲೇ ಓಪನ್ ಆಗಿಯೇ ಹೇಳಿದ್ದೆ ಎಂದು ಸಚಿವ ಜಮೀರ್ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದದ್ದು ನಿಜ, ಆ ನಂತರ ಎಲ್ಲವೂ ಸರಿಹೋಗಿದೆ. ಜಬ್ಬಾರ್ ಜೊತೆಗೆ 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ಆದರೆ ಜಬ್ಬಾರ್ಗೆ ಟಿಕೆಟ್ ಕೊಡಿ ಅಂತ ಕೇಳಲಿಲ್ಲ. ಯಾವುದೇ ಮುಚ್ಚುಮರೆ ಮಾಡಿಲ್ಲ. ಓಪನ್ ಆಗಿ ಕೆಪಿಸಿಸಿ ಸಭೆಯಲ್ಲೇ ಹೇಳಿದ್ದೆ ಎಂದರು.
ನನ್ನ ಜವಾಬ್ದಾರಿ ಮೇಲೆ ಟಿಕೆಟ್ ಕೇಳಿದ್ದೆ
ದಾವಣಗೆರೆ ಟಿಕೆಟ್ ಬಗ್ಗೆ ಓಪನ್ ಆಗಿ ನಾನು ಕೆಪಿಸಿಸಿ ಸಭೆಯಲ್ಲಿ ಡಿಕೆ ಶಿವಕುಮಾರ್, ರಂದೀಪ್ ಸಿಂಗ್ ಸುರ್ಜೇವಾಲಾ ಅವರ ಮುಂದೆಯೇ ಹೇಳಿದ್ದೆ. ಜಬ್ಬಾರ್ಗೆ ಟಿಕೆಟ್ ಕೊಡಿ ಅನ್ನಲಿಲ್ಲ, ಏಕೆಂದರೆ ಜಬ್ಬಾರ್ ಎಂಎಲ್ಸಿ ಇದ್ದಾರೆ, ಅವರಿಗೆ ಟಿಕೆಟ್ ಕೇಳಿದ್ದು ತಪ್ಪು ಅಂತ ಗೊತ್ತಾಯ್ತು. ಜಬ್ಬಾರ್ ಬದಲು 7 ಮಂದಿ ಮುಸ್ಲಿಮರಲ್ಲಿ ಯಾರಿಗಾದ್ರೂ ಟಿಕೆಟ್ ಕೊಡಿ ಅಂದಿದ್ದೆ. ನಾನು ಗೆಲ್ಲಿಸಿಕೊಂಡು ಬರದಿದ್ರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದಿದ್ದೆ. ಆದ್ರೂ ಟಿಕೆಟ್ ಕೊಡಲಿಲ್ಲ. ಅದಕ್ಕೆ ಅಸಮಾಧಾನ ಇದ್ದಿದ್ದು ನಿಜ, ಆಮೇಲೆ ಎಲ್ಲವೂ ಸರಿ ಆಗಿದೆ ಎಂದರು.
ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರಿಗೂ ಮಂತ್ರಿಯಾಗುವ ಆಸೆ ಇರೋದು ಸಹಜ. ನನಗೂ ಆಸೆಯಿಲ್ವಾ? ಎಲ್ಲರಿಗೂ ಆಸೆ ಇರೋದು ಸಹಜ. ನನ್ನ ಕೆಲಸ ನಾನು ನಿಭಾಯಿಸಿದ್ದೇನೆ. ದಾವಣಗೆರೆಗೆ ಹೋಗಿ ರೋಡ್ ಶೋ ನಡೆಸಿ, ಸುದ್ದಿಗೋಷ್ಠಿ ಮಾಡಿದ್ದೇನೆ. ಮಲ್ಲಿಕಾರ್ಜುನ ಮನೆಯಲ್ಲಿ ಊಟ ಕೂಡ ಮಾಡಿದೆ, ಅಗತ್ಯಬಿದ್ರೆ ಬಾಗಲಕೋಟೆಗೂ ಹೋಗ್ತೀನಿ ಅಂತ ಹೇಳಿದ್ದೆ. ನಸೀರ್ ಅಹಮದ್ಗೆ ಬಾಗಲಕೋಟೆ ಜವಾಬ್ದಾರಿ ಕೊಟ್ಟಿದ್ದರು, ಬಾಗಲಕೋಟೆಯಲ್ಲಿ 10 ದಿನ ನಸೀರ್ ಕೆಲಸ ಮಾಡಿದ್ದಾರೆ. ಆರೋಪ ಮಾಡುವುದಾದರೆ ಹೆಸರು ಹೇಳಬೇಕು ತಾನೇ ಎಂದು ಕೇಳಿದರು.
Advertisement