

ಬೆಂಗಳೂರು: ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಫಲಿತಾಂಶಕ್ಕೂ ಮುನ್ನವೇ ರಾಜ್ಯ ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಹಲವು ಮುಸ್ಲಿಂ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಅಲ್ಪಸಂಖ್ಯಾತ ನಾಯಕರ ವಿರುದ್ಧದ ಕ್ರಮವನ್ನು ಸಮರ್ಥಿಸಿಕೊಂಡ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಇದರಲ್ಲಿ ನನ್ನ ವೈಯಕ್ತಿಕ ವಿಚಾರ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನೋಡಿ, ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಎಲ್ಲವೂ ಪಾರ್ಟಿ ನಿರ್ಧಾರ, ಪಾರ್ಟಿಗೆ ತನ್ನದೇ ಆದ ವರದಿ ಇದೆ. ದೆಹಲಿ ನಾಯಕರ ಸೂಚನೆ, ಸಲಹೆ ಮೇರೆಗೆ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಾವು ಮಾರ್ಗದರ್ಶನ ಮಾಡಬೇಕಾಗುತ್ತದೆ ಎಂದರು.
ಎಲ್ಲರೂ ನನ್ನ ವಿರುದ್ಧವೇ ಮಾತನಾಡಬಹುದು. ಆದರೆ, ಹಾಗೆ ಹೇಳಿದರೂ ಚಿಂತೆ ಇಲ್ಲ. ಪಕ್ಷದ ಶಿಸ್ತಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ನಮ್ಮ ಪಕ್ಷ ಇರೋದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಅಹಿಂದ ಸಮುದಾಯದ ಪರ. ಎಲ್ಲಾ ವರ್ಗಕ್ಕೆ ನ್ಯಾಯ ಕೋಡೋಕೆ ಇರೋದೇ ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.
ಸಿದ್ದರಾಮಯ್ಯ ಬಣ, ಡಿಕೆಶಿ ಬಣ ಅಂತಾ ಯಾವುದೂ ಇಲ್ಲ. ನಾವು 146 ಶಾಸಕರು ಒಂದೇ ಬಣ. ನಾನು, ಸಿಎಂ ಕೂತು ಎಷ್ಟು ಮಾತಾಡ್ತೇವೆ ಅಂತಾ ನಿಮಗೇನು ಗೊತ್ತು. ದಿನವೂ ಕುಳಿತುಕೊಳ್ಳುತ್ತೇವೆ, ದಿನಾ ಕೂಡ ಮಾತಾಡುತ್ತೇವೆ. ಅವರೇನು ಸಿದ್ದರಾಮಯ್ಯ ಅವರ ಬಣ ಅಂತ ಬೋರ್ಡ್ ಹಾಕಿಕೊಂಡಿದ್ದಾರಾ? ನನ್ನ ಬಣ ಅಂತ ನಾನು ಬೋರ್ಡ್ ಹಾಕಿಕೊಂಡಿದ್ದೀನಾ? 140 ಶಾಸಕರು ಕೂಡ ನನ್ನ ಮತ್ತು ಸಿಎಂ ಅವರ ಗುಂಪೇ. ಯಾವ ಗುಂಪು, ಬಣ ಇಲ್ಲ. ಯಾವ ಸ್ಟೇಟ್ಮೆಂಟ್ ಇಲ್ಲ. ನಮ್ಮದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು ಎಂದು ಸ್ಪಷ್ಟಪಡಿಸಿದರು.
Advertisement