

ಬೆಂಗಳೂರು: ಕಬಡ್ಡಿ ಪಂದ್ಯದಲ್ಲಿ ಬೆಟ್ಟಿಂಗ್ ಆರೋಪ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.
42ನೇ ACJM ನ್ಯಾಯಾಲಯವು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಪೊಲೀಸರಿಗೆ ಡಾ. ಪರಮೇಶ್ವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಬಿಜೆಪಿ, “ಸಾಮಾನ್ಯ ಜನರು ಬೆಟ್ಟಿಂಗ್ ಮಾಡಿದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಆದರೆ ಗೃಹ ಸಚಿವರು ಸಾರ್ವಜನಿಕವಾಗಿ ಬೆಟ್ಟಿಂಗ್ ಒಪ್ಪಿಕೊಂಡಿದ್ದರೂ ಏಕೆ ಬಂಧನವಾಗಿಲ್ಲ?” ಎಂದು ಪ್ರಶ್ನಿಸಿದೆ.
ಬೇಲಿಯೇ ಎದ್ದು ಹೊಲ ಮೆಯ್ಯುವ ರೀತಿ, ಕರ್ನಾಟಕದ ಘನತೆವೆತ್ತ ಗೃಹ ಸಚಿವ ಪರಮೇಶ್ವರ್ ಅವರು ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವುದು ಅಕ್ಷಮ್ಯ ಅಪರಾಧ. ಗೃಹ ಸಚಿವರ ವಿರುದ್ಧ FIR ದಾಖಲಾಗಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಗೊತ್ತಿಲ್ಲ, ಆಕಸ್ಮಿಕ, ಮಕ್ಕಳಾಟ, ತಮಾಷೆಗೆ ಮಾಡಿದ್ದು ಎಂದು ತೇಪೆ ಹಚ್ಚುವ ಬದಲು ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದೆ.
ರಾಜ್ಯ ಜೆಡಿಎಸ್ ಕೂಡ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದೆ. ಬೆಟ್ಟಿಂಗ್ ದಂಧೆಯನ್ನು ಮಟ್ಟಹಾಕಬೇಕಾದ ಗೃಹ ಸಚಿವ ಪರಮೇಶ್ವರ್ ಈ ರೀತಿ ವರ್ತಿಸಿದರೆ ಜನಸಾಮಾನ್ಯರಿಗೆ ಯಾವ ಸಂದೇಶ ನೀಡಿದಂತಾಗುತ್ತದೆ? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರೇ ಬೆಟ್ಟಿಂಗ್ ಕಟ್ಟುವುದು , ಅದಕ್ಕೆ ಪ್ರೇರೇಪಿಸುವುದು ದುರಂತ. ಕಬ್ಬಡ್ಡಿ ಪಂದ್ಯಾವಳಿ ವೇಳೆ ಜೂಜಾಟವಾಡಿದ್ದ ಸಚಿವ ಪರಮೇಶ್ವರ್ ವಿರುದ್ಧ #FIR ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿರುವುದು ಸರಿಯಾಗಿದೆ. ಇನ್ನಾದರೂ ಸಚಿವರು ತಮ್ಮ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಲಿ ಎಂದು ಒತ್ತಾಯಿಸಿದೆ
Advertisement