

ರಾಮನಗರ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ತೀವ್ರ ಚರ್ಚೆಯಾಗುತ್ತಿದ್ದು, ಮೇ 15ಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದು ಗ್ಯಾರಂಟಿ ಎಂದು ಅವರ ಆಪ್ತ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಂಗಳವಾರ ಪುನರುಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಬೆಳವಣಿಗೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ನಾನು ಎರಡ್ಮೂರು ದಿನಾಂಕ ಹೇಳಿದ್ದೆ. ವಿವಿಧ ಕಾರಣಕ್ಕೆ ಆಗ ಆಗಲಿಲ್ಲ. ಈಗ ಹೇಳ್ತಿರೋದು ಅಂತಿಮ ದಿನಾಂಕವಾಗಿದ್ದು, ಮೇ 15 ರಂದು ನಮ್ಮ ನಾಯಕರ ಜನ್ಮ ದಿನವಿದ್ದು, ಅಂದು ಮುಖ್ಯಮಂತ್ರಿ ಹುದ್ದೆಯ ಗಿಫ್ಟ್ ಸಿಗಲಿದೆ ಎಂದರು.
ಈ ಅವಧಿಯಲ್ಲಿಯೇ ಅವರು ಮುಖ್ಯಮಂತ್ರಿ ಆಗಬೇಕು ಮತ್ತು ಅವರ ನಾಯಕತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗಬೇಕು ಎಂಬುದು ಎಲ್ಲರ ಬಯಕೆಯಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಡಾ.ಎಚ್.ಸಿ. ಮಹದೇವಪ್ಪ ಅವರು ಪಕ್ಷದ ವರಿಷ್ಠರನ್ನು ಭೇಟಿ ಕುರಿತು ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಇದರಲ್ಲಿ ಯಾವುದೇ ತಪ್ಪಿಲ್ಲ. ತಮ್ಮ ಕಷ್ಟ ಸುಖದ ಜೊತೆಗೆ ರಾಜ್ಯದ ಕೆಲ ವಿಷಯಗಳ ಕುರಿತು ಚರ್ಚಿಸಲು ಇಬ್ಬರೂ ದೆಹಲಿಗೆ ಹೋಗಿದ್ದಾರೆ ಎಂದರು.
ಸಿದ್ದರಾಮಯ್ಯ ಅವರನ್ನೇ ಮುಂದುವರೆಸುವಂತೆ ಹೈಕಮಾಂಡ್ ಗೆ ಮನವಿ ಮಾಡುತ್ತೇವೆ ಎಂಬ ಶಾಸಕ ಕೆ.ಎನ್. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮನಗರ ಶಾಸಕರು, ರಾಜಣ್ಣ ಅವರೂ ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಾಜಕಾರಣದಲ್ಲಿ ಅಭಿಪ್ರಾಯ ಬೇಧ ಸಹಜ. ಜಾತಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಗುಂಪುಗಾರಿಕೆ ಇದೆ. ರಾಜಕೀಯವೂ ಅದರಿಂದ ಹೊರತಾಗಿಲ್ಲ ಎಂದು ಹೇಳಿದರು.
Advertisement