

ಬೆಂಗಳೂರು: ರಾಜ್ಯ ಮತ್ತು ಪಕ್ಷಕ್ಕೆ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರವೂ, ಈ ಬಾರಿ ಸಂಪುಟದಲ್ಲಿ ನನಗೆ ಅವಕಾಶ ನೀಡದಿರುವುದು ತೀವ್ರ ನಿರಾಶೆ ತಂದಿದೆ. ನನ್ನನ್ನು ಸಂಪುಟದಿಂದ ಹೊರಗಿಡಲು ಯಾವುದೇ ಕಾರಣವನ್ನು ತಿಳಿಸದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಇನ್ನಷ್ಟು ಬೇಸರ ತಂದಿದೆ ಎಂದು ಮಾಜಿ ಸಚಿವ, ಶಾಸಕ ದಿನೇಶ್ ಗುಂಡೂರಾವ್ ನಿನ್ನೆ ಡಿ ಕೆ ಶಿವಕುಮಾರ್ ನೇತೃತ್ವದ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು, "ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಸೂಕ್ತ ಕಾರಣವನ್ನೂ ತಿಳಿಸಿಲ್ಲ ಎಂಬುದೇ ನನಗೆ ಹೆಚ್ಚು ನಿರಾಶೆ ತಂದಿದೆ. ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನನಗೆ ಅನೇಕ ಅವಕಾಶಗಳು ದೊರೆತಿವೆ. ಆದರೆ ನನ್ನನ್ನು ಏಕೆ ಕೈಬಿಡಲಾಗಿದೆ ಎಂಬುದಕ್ಕೆ ಕಾರಣವನ್ನು ಹೇಳಬೇಕಿತ್ತು. ನನ್ನನ್ನು ಏಕೆ ಕೈಬಿಟ್ಟರು ಎಂಬುದು ನನಗೆ ತಿಳಿದಿಲ್ಲ. ನಾನು ಸಚಿವನಾಗಿ ಕಳಪೆ ಕೆಲಸ ಮಾಡಿದ್ದೇನಾ? ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇದೆಯೇ? ಪಕ್ಷಕ್ಕಾಗಿ ನಾನು ಸಮರ್ಪಕವಾಗಿ ಕೆಲಸ ಮಾಡಲಿಲ್ಲವೇ? ನಾನು ಯಾವಾಗಲೂ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಪಕ್ಷ ನೀಡಿದ ಪ್ರತಿಯೊಂದು ಜವಾಬ್ದಾರಿಯನ್ನೂ ಅತ್ಯುತ್ತಮವಾಗಿ ನಿಭಾಯಿಸಲು ಪ್ರಯತ್ನಿಸಿದ್ದೇನೆ.
ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಮೂರು ವರ್ಷಗಳ ಕಾಲ ನಾನು ಸ್ವಯಂಪ್ರೇರಿತವಾಗಿ, 'ಪಕ್ಷದ ಕೆಲಸ ಮಾಡಲು ನನಗೆ ಅವಕಾಶ ನೀಡಿ, ಸಚಿವ ಸ್ಥಾನವನ್ನು ಮತ್ತೊಬ್ಬರಿಗೆ ನೀಡಿ' ಎಂದು ಹೇಳಿದ್ದೆ. ಸಚಿವನಾಗುವುದೇ ನನ್ನ ಅಂತಿಮ ಗುರಿಯಲ್ಲ. ಆದರೆ ನನ್ನನ್ನು ಏಕೆ ಕೈಬಿಟ್ಟರು ಎಂಬುದಕ್ಕೆ ಸೂಕ್ತ ಕಾರಣವನ್ನಾದರೂ ತಿಳಿಸಬೇಕಿತ್ತು ಎಂಬುದೇ ನನ್ನ ನೋವು. ಮುಂದಾದರೂ ನನ್ನನ್ನು ಕೈಬಿಟ್ಟ ಕಾರಣವನ್ನು ತಿಳಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಸೂಕ್ತ ಕಾರಣ ನೀಡಬೇಕು ಎಂಬುದಷ್ಟೇ ನನ್ನ ನಿರೀಕ್ಷೆ. ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಕಾಂಗ್ರೆಸ್ ನನಗೆ ಸಾಕಷ್ಟು ಕೊಟ್ಟಿದೆ, ಇದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಜನರು ನನ್ನನ್ನು 'ಏಕೆ ಕೈಬಿಟ್ಟರು?' ಎಂದು ಕೇಳಿದಾಗ ನನ್ನ ಬಳಿ ಉತ್ತರವೇ ಇಲ್ಲ," ಎಂದು ಅವರು ಹೇಳಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, "ಈಗ ಸಚಿವರಾಗುವ ಅವಕಾಶ ಪಡೆದ ಎಲ್ಲರಿಗೂ ನನ್ನ ಅಭಿನಂದನೆಗಳು. ಅವರು ಉತ್ತಮವಾಗಿ ಕೆಲಸ ಮಾಡಿ ಕರ್ನಾಟಕದ ಜನರ ಹಿತಾಸಕ್ತಿಗೆ ಸೇವೆ ಸಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದರು.
"ಅವಕಾಶ ಸಿಗದೆ ನಿರಾಶೆಗೊಂಡಿರುವ ಹಿರಿಯ ನಾಯಕರು ಸೇರಿದಂತೆ ಎಲ್ಲರ ಬಗ್ಗೆಯೂ ಪಕ್ಷದ ನಾಯಕತ್ವ ಗಮನಹರಿಸಬೇಕು. ಅವರಿಗೆ ಮಾತನಾಡಿ, ಸಮಾಧಾನಪಡಿಸಿ, ಮತ್ತೆ ಪಕ್ಷದೊಂದಿಗೆ ಒಗ್ಗೂಡಿಸುವ ಪ್ರಯತ್ನ ಮಾಡಬೇಕು. ಈ ಜವಾಬ್ದಾರಿಯನ್ನು ಪಕ್ಷದ ನಾಯಕತ್ವ, ರಾಜ್ಯ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ವಹಿಸಿಕೊಳ್ಳಬೇಕು. ಅವಕಾಶ ಸಿಗದವರಿಗೆ ಸೂಕ್ತ ಸಮಾಧಾನ ನೀಡುವ ಕೆಲಸ ನಡೆಯುತ್ತದೆ ಎಂಬ ವಿಶ್ವಾಸ ನನಗಿದೆ. ಸಚಿವ ಸಂಪುಟ ರಚನೆಯಾಗುವಾಗ ಇಂತಹ ಅಸಮಾಧಾನಗಳು ಸಹಜ," ಎಂದು ಹೇಳಿದರು.
ದಿನೇಶ್ ಗುಂಡೂರಾವ್ ಅವರ ಬೆನ್ನಲ್ಲೇ ಅವರ ಪತ್ನಿ ತಬು ಕೂಡ ಸರಣಿ ಪೋಸ್ಟ್ ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ, ಬೇಸರ ಹೊರಹಾಕಿದ್ದಾರೆ. ನಮ್ಮ ಸ್ನೇಹಿತರು, ಅಧಿಕಾರಿಗಳು, ವೈದ್ಯರು ಹಾಗೂ ಮುಖ್ಯವಾಗಿ ನಮ್ಮ ಕ್ಷೇತ್ರದ ಜನರು ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟಕ್ಕೆ ಏಕೆ ಸೇರಿಸಿಲ್ಲ ಎಂದು ನಿರಂತರವಾಗಿ ಕೇಳುತ್ತಿದ್ದಾರೆ.
ಅವರು ಆರೋಗ್ಯ ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿ ಆರೋಗ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದವರು. ಪಕ್ಷದ ಅತ್ಯಂತ ಕಷ್ಟದ ದಿನಗಳಲ್ಲಿಯೂ ನಿಷ್ಠೆಯಿಂದ ಜೊತೆಯಾಗಿ ನಿಂತವರು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು, ಪಕ್ಷದ ಸಂಘಟನೆಗಾಗಿ ಶ್ರಮಿಸಿದ ಕೆಲವೇ ನಾಯಕರಲ್ಲಿ ಒಬ್ಬರು.
ಹಾಗಿದ್ದರೂ ಅವರನ್ನು ಏಕೆ ಕೈಬಿಡಲಾಯಿತು? ಅದಕ್ಕೆ ನನ್ನ ಸಂಕ್ಷಿಪ್ತ ಉತ್ತರ ಒಂದೇ — ‘ನಿಮಗೆ ಎಷ್ಟು ಆಶ್ಚರ್ಯವಾಗಿದೆಯೋ, ನನಗೂ ಅಷ್ಟೇ ಆಶ್ಚರ್ಯವಾಗಿದೆ.’ ಒಂದು ಕ್ಷಣದ ನಿರ್ಧಾರದಲ್ಲಿ ಜನರನ್ನು ಬಲಿಕೊಡಲಾಗುತ್ತಿದೆ. ಕೊನೆಗೆ ಇಲ್ಲಿ ಕೆಲಸಕ್ಕಿಂತ ಜಾತಿಯೇ ಪ್ರಮುಖವಾಗುತ್ತದೆ ಎಂಬುದು ವಿಷಾದನೀಯ ಎಂದು ಹೇಳಿದ್ದಾರೆ.