

ಬೆಂಗಳೂರು: ನನಗೆ ಉಪ ಸಭಾಪತಿ ಸ್ಥಾನ ನೀಡಿದ್ದಾರೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಹೌದು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಭರವಸೆ ಇದೆ, ಪಕ್ಷ ಸೂಕ್ತ ತೀರ್ಮಾನ ತೆಗೆದುಕೊಂಡು ನನಗೆ ಸಚಿವೆ ಸ್ಥಾನ ನೀಡಬಹುದು ಎಂಬ ನಂಬಿಕೆಯಿದೆ ಎಂದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ 19 ಮಂದಿಗೆ ಸ್ಥಾನ ನೀಡಿ ಒಂದು ಸ್ಥಾನ ಕಾಯ್ದಿರಿಸಿದ್ದಾರೆ, ನಾನು ಕೂಡ ಸಚಿವೆ ಸ್ಥಾನ ಆಕಾಂಕ್ಷಿ, ನಮ್ಮ ಪಕ್ಷ ನನಗೆ ಅವಕಾಶ ಮಾಡಿಕೊಡಬಹುದು ಎಂಬ ನಿರೀಕ್ಷೆಯಿದೆ, ನೋಡೋಣ ಏನು ಮಾಡುತ್ತಾರೆ ಎಂದು, ಕಾದು ನೋಡೋಣ ಎಂದರು.
ಪಕ್ಷಕ್ಕೆ ದುಡಿದು, ಕೆಲಸ ಮಾಡಿರುವುದನ್ನು ಪರಿಗಣಿಸಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ಮೂವರು ಮಹಿಳಾ ಶಾಸಕರಿಗೆ ಈ ಬಾರಿ ಅವಕಾಶ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಕೇಳಿದ್ದೆವು ಕೂಡ. ವರಿಷ್ಠ ಹಂತದಲ್ಲಿ ಕೊನೆ ಗಳಿಗೆಯಲ್ಲಿ ಏನು ತೀರ್ಮಾನವಾಯಿತೋ ಗೊತ್ತಿಲ್ಲ, ಮಹಿಳೆಯರು ಸಚಿವರಾಗಲಿಲ್ಲ ಎಂಬ ನೋವು ಖಂಡಿತಾ ಇದೆ ಎಂದರು.