

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಿಜೆಡ್ ಜಮೀರ್ ಅಹ್ಮದ್ ಖಾನ್ ಮತ್ತು ರಿಜ್ವಾನ್ ಅರ್ಷದ್ ಅವರನ್ನು ಸಚಿವರನ್ನಾಗಿ ಸೇರಿಸಿಕೊಳ್ಳುವ ಮೂಲಕ ಕರ್ನಾಟಕ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯವನ್ನು ಹೆಚ್ಚಿಸಿದೆ.
ಯುಟಿ ಖಾದರ್ ಮತ್ತು ಕೆಜೆ ಜಾರ್ಜ್ ಈಗಾಗಲೇ ಸಂಪುಟದಲ್ಲಿದ್ದಾರೆ, ಸರ್ಕಾರವು ಈಗ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯಗಳಿಂದ ನಾಲ್ಕು ಸಚಿವರನ್ನು ಹೊಂದಿದೆ. ಕುತೂಹಲಕಾರಿಯಾಗಿ, ಕಾಂಗ್ರೆಸ್ ಹಿರಿಯ ಶಾಸಕ ಸಲೀಮ್ ಅಹ್ಮದ್ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ದಾವಣಗೆರೆ ವಿಧಾನಸಭಾ ಉಪಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಕೆಲವು ವರ್ಗಗಳಲ್ಲಿ ಕಾಂಗ್ರೆಸ್ ಅಸಮಾಧಾನವನ್ನು ಎದುರಿಸಿದ ನಂತರ ಸಂಪುಟ ವಿಸ್ತರಣೆಯಾಗಿದೆ, ಅಲ್ಲಿ ಪಕ್ಷವು ತನ್ನ ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತದಾರರ ಒಂದು ವರ್ಗದಿಂದ ಸ್ಪಷ್ಟ ವಿರೋಧ ಅನುಭವಿಸಿತು. ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪಕ್ಷವು ಹಲವಾರು ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿತು.
ಅಲ್ಪಸಂಖ್ಯಾತ ಇಲಾಖೆಯ ಅಧ್ಯಕ್ಷ ಕೆ ಅಬ್ದುಲ್ ಜಬ್ಬಾರ್ ಅವರನ್ನು ಅಮಾನತುಗೊಳಿಸಲಾಯಿತು, ಆಗಿನ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ತೆಗೆದುಹಾಕಲಾಯಿತು. ಇದು ಪಕ್ಷದ ಅಲ್ಪಸಂಖ್ಯಾತ ನಾಯಕರಿಂದ ಹೆಚ್ಚಿನ ವಿರೋಧಕ್ಕೆ ಕಾರಣವಾಗಿತ್ತು.
2013-2018 ಮತ್ತು 2023-2026ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೂವರು ನಾಯಕರು ಸಚಿವರಾಗಿದ್ದರು. 2013 ರಲ್ಲಿ, ಖಮರುಲ್ ಇಸ್ಲಾಂ, ಯುಟಿ ಖಾದರ್ ಮತ್ತು ಕೆಜೆ ಜಾರ್ಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. 2023 ರಲ್ಲಿ ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್ ಮತ್ತು ಜಾರ್ಜ್ ಗೆ ಸಚಿವ ಸ್ಥಾನ ನೀಡಲಾಯಿತು.
ಬಿಜೆಪಿಯ ಐದು ಸಿಎಂ ಗಳ ಅವದಿಯಲ್ಲಿ ಅಲ್ಪಸಂಖ್ಯಾತರಿಗೆಆದ್ಯತೆ ನೀಡಿರಲಿಲ್ಲ, 2008 ರಲ್ಲಿ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ ಮುಮ್ತಾಜ್ ಅಲಿ ಖಾನ್ ಸಮುದಾಯದ ಏಕೈಕ ಸಚಿವರಾಗಿದ್ದರು.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ರಾಜಕೀಯ ವಿಶ್ಲೇಷಕ ಪ್ರೊ. ಸಂದೀಪ್ ಶಾಸ್ತ್ರಿ, ಅಹಿಂದ ಮುಖಂಡ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಮೂಲಕ, ಸಿಎಂ ಡಿಕೆ ಶಿವಕುಮಾರ್ ಅವರು ಅಹಿಂದದ ಭಾಗವಾಗಿದ್ದವರಿಗೆ ತಮ್ಮ ಸಂಪುಟದಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದು ಖಚಿತಪಡಿಸಿಕೊಂಡರು.
ಅವರು ಅಲ್ಪಸಂಖ್ಯಾತ ಸಮುದಾಯದಿಂದ ನಾಲ್ಕು ಸಚಿವರನ್ನು ಸೇರಿಸಿಕೊಂಡಿದ್ದಾರೆ. ಹಲವಾರು ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವ ಅಲ್ಪಸಂಖ್ಯಾತ ಮತದಾರರ ಪ್ರಾತಿನಿಧ್ಯದ ಪ್ರತಿಬಿಂಬವೂ ಇದಾಗಿದೆ ಎಂದು ಅವರು ಹೇಳಿದರು. ವಿಧಾನಸಭಾ ಚುನಾವಣೆಗೆ ಮುಂಚೆ ನಡೆಯುವ ಸಂಪುಟ ವಿಸ್ತರಣೆಯನ್ನು ಅದೇ ಕಾರಣಕ್ಕಾಗಿ ಮಾಡಲಾಗುತ್ತದೆ ಎಂದು ಪ್ರೊ. ಶಾಸ್ತ್ರಿ ಹೇಳಿದರು.