

ಧಾರವಾಡ: ಬಹುನಿರೀಕ್ಷಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಕಳೆದ ಸೋಮವಾರ ವಿಸ್ತರಣೆಯಾಗಿದ್ದು, ಇದರ ಬೆನ್ನಲ್ಲೇ, ಸಂಪುಟ ವಿಸ್ತರಣೆ ಹಾಗೂ ‘ಪೇಮೆಂಟ್ ಸೀಟ್’ ಹಂಚಿಕೆ ಕುರಿತು ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಮತ್ತು ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ಇದೀಗ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಈ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಆರ್. ಬಿ. ತಿಮ್ಮಾಪುರ ಅವರು, ಆಡಿಯೋದಲ್ಲಿ ನನ್ನ ಹೆಸರು ಇರಬಹುದು, ಆದರೆ ನಾನು ಮಾತಾಡಿಲ್ಲ. ಹೈಕಮಾಂಡ್ ಆಗಲಿ ಸಿಎಂಗಾಗಲಿ ಟಾರ್ಗೆಟ್ ಮಾಡಿ ಮಾತಾಡಿಲ್ಲ, ಇದರಲ್ಲಿ ಯಾಕೆ ನನ್ನನ್ನು ಎಳಿತೀರಾ? ಎಂದು ಪ್ರಶ್ನಿಸಿದ್ದಾರೆ.
ವಿಜಯಾನಂದ ಕಾಶಪ್ಪನವರ ಬಗ್ಗೆ ಚರ್ಚೆ ನಡೀತಿತ್ತು. ಜಿಲ್ಲಾ ಮಂತ್ರಿ ಬಗ್ಗೆ ಚರ್ಚೆ ಮಾಡ್ತಾಯಿದ್ವಿ. ನಮ್ಮ ಜಿಲ್ಲೆಯ ವಿಚಾರ ಪಕ್ಷದಲ್ಲಿ ಮಾತಾಡುತ್ತೇವೆ. ವಿಜಯಾನಂದ ಕಾಶಪ್ಪನವರಗೆ ಸಚಿವ ಸ್ಥಾನ ಕೊಟ್ಟಿದ್ದು ಖುಷಿ. ನಾನು ಮೂರು ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದರು.
ನಾನು ಯಾವ ಕೇಸ್ ಬಗ್ಗೆಯೂ ಮಾತಾಡಿಲ್ಲ. ಮಾತಾಡಿದವರಿಗೆ ಕೇಳಿ, ನಂಜಯ್ಯನಮಠ್ ಜೊತೆ ಮಾತಾಡಿದ್ದೇನೆ ಎನ್ನಲಾಗುತ್ತಿದೆ. ಆದರೆ ನಾನು ಯಾವುದೇ ಪಕ್ಷದ ನಾಯಕರ ಬಗ್ಗೆ ಮಾತಾಡಿಲ್ಲ. ಜಿಲ್ಲಾಧ್ಯಕ್ಷರು ಮಾತಾಡಿದ ಬಗ್ಗೆ ನನಗೆ ಗೊತ್ತಿಲ್ಲ, ಜಿಲ್ಲಾಧ್ಯಕ್ಷರನ್ನೇ ಕೇಳಿ, ನಾನು ಅದಕ್ಕೆ ಪ್ರತಿಕ್ರಿಯೆ ನೀಡಲ್ಲ, ನಾನು ತಪ್ಪು ಮಾತಾಡಿದರೇ ನನಗೆ ಕೇಳಿ ಎಂದು ಆರ್.ಬಿ ತಿಮ್ಮಾಪುರ್ ಅವರು ಹೇಳಿದ್ದಾರೆ.
ಅಷ್ಟಕ್ಕೂ ಆಡಿಯೋದಲ್ಲಿ ಇರುವುದೇನು?
ಆಡಿಯೋದಲ್ಲಿ ಬಳ್ಳಾರಿಯ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼನಾಗೇಂದ್ರ ಅವರ ಮೇಲೆ ಕೇಸ್ ಇದ್ದರೂ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ನಾವು ಯಾವ ರೀತಿಯಾಗಿ ಜನಕ್ಕೆ ಮುಖ ತೋರಿಸಬೇಕು. ಹಣ ಕೊಟ್ಟು ಸಚಿವ ಸ್ಥಾನ ನೀಡಲಾಗಿದೆʼ ಎಂದು ಮಾತುಕತೆ ನಡೆಸಲಾಗಿದೆ. ಅಲ್ಲದೆ, ಸಂಭಾಷಣೆಯಲ್ಲಿ ಎಚ್.ಕೆ.ಪಾಟೀಲ್ಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಪಕ್ಷ ಸಂಘಟನೆ ಮಾಡಿದ್ದೀರಿ, ನಿಮಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಆರ್.ಬಿ.ತಿಮ್ಮಾಪುರ ಅವರನ್ನು ಉಲ್ಲೀಖಿಸಿ ಹೇಳಲಾಗಿದೆ.
ಕಾಂಗ್ರೆಸ್ ಪಕ್ಷದ ವಿರುದ್ದವೇ ಮುಖಂಡರೇ ಅಸಮಾಧಾನ ಹೂರಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ. ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.