ಸಂಪುಟಕ್ಕೆ ಸದ್ಯದಲ್ಲೇ ಮಹಿಳಾ ಸಚಿವರ ಸೇರ್ಪಡೆ: CM ಡಿ ಕೆ ಶಿವಕುಮಾರ್

ಸರ್ಕಾರದೊಳಗಿನ ಚರ್ಚೆಯ ಬಳಿಕ ನಾಗೇಂದ್ರ ಅವರು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅಧಿಕೃತ ವರದಿಯಲ್ಲಿ ಹಗರಣದಲ್ಲಿ ಅವರ ಪಾತ್ರವಿಲ್ಲ ಎಂದು ತಿಳಿದುಬಂದ ಬಳಿಕ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಯಿತು ಎಂದು ಡಿ ಕೆ ಶಿವಕುಮಾರ್ ಹೇಳಿದರು.
D K Shivakumar
ಡಿ ಕೆ ಶಿವಕುಮಾರ್
Updated on

ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ಪಾತ್ರವಿಲ್ಲ ಎಂದು ಅಧಿಕೃತ ವರದಿ ತಿಳಿಸಿದ ಬಳಿಕ ಅವರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಮಹಿಳಾ ಪ್ರತಿನಿಧಿಯೊಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗುವುದು ಎಂದೂ ಅವರು ತಿಳಿಸಿದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಪಾಲಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

89 ಕೋಟಿ ಮೊತ್ತದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್, ಸರ್ಕಾರದೊಳಗಿನ ಚರ್ಚೆಯ ಬಳಿಕ ನಾಗೇಂದ್ರ ಅವರು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅಧಿಕೃತ ವರದಿಯಲ್ಲಿ ಹಗರಣದಲ್ಲಿ ಅವರ ಪಾತ್ರವಿಲ್ಲ ಎಂದು ತಿಳಿದುಬಂದ ಬಳಿಕ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಯಿತು ಎಂದರು.

ಇದನ್ನು ನಾಗೇಂದ್ರ ಅವರು ಮಾಡಿಲ್ಲ. ತನಿಖೆಯ ವೇಳೆ ಶೇ.95ರಷ್ಟು ಹಣವನ್ನು ವಾಪಸ್ ಪಡೆಯಲಾಗಿದೆ ಎಂದು ಅವರು ಹೇಳಿದರು.

D K Shivakumar
ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಒಂದೆರಡು ದಿನಗಳಲ್ಲಿ ಮಹಿಳೆ ಸಂಪುಟಕ್ಕೆ ಸೇರ್ಪಡೆ

ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್, ಮಹಿಳಾ ಸಚಿವರು ನಮ್ಮ ಸಂಪುಟದಲ್ಲಿ ಖಂಡಿತವಾಗಿಯೂ ಇರಲಿದ್ದಾರೆ. ಮಹಿಳಾ ಸಬಲೀಕರಣದ ಸಿದ್ಧಾಂತಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ತಿಂಗಳ ಬಳಿಕ ಆಗಸ್ಟ್ 3ರಂದು ಡಿ ಕೆ ಶಿವಕುಮಾರ್ ಸಂಪುಟ ವಿಸ್ತರಣೆ ಮಾಡಿದ್ದರು. ಒಟ್ಟು 20 ಸಚಿವರ ಹೆಸರುಗಳನ್ನು ಕಾಂಗ್ರೆಸ್ ಘೋಷಿಸಿತ್ತು. ಆದರೆ ಮಹಿಳಾ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೊನೆಯ ಕ್ಷಣದಲ್ಲಿ ಕೈಬಿಡಲಾಗಿತ್ತು. ಅಂತಿಮವಾಗಿ 19 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು.

ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ ಕೊನೆಗೆ ಕೆಲವು ಸಮಸ್ಯೆಗಳು ಎದುರಾದವು. ಮುಂದಿನ ಒಂದೆರಡು ದಿನಗಳಲ್ಲಿ ಮಹಿಳಾ ಸಚಿವರೊಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗುವುದು ಎಂದು ನಾನು ಭಾವಿಸುತ್ತೇನೆ” ಎಂದು ಇಂಡಿಯಾ ಟುಡೇ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೇಳಿದರು.

ಸದ್ಯ ಡಿ ಕೆ ಶಿವಕುಮಾರ್ ಸರ್ಕಾರದಲ್ಲಿ 34 ಸಚಿವ ಸ್ಥಾನಗಳ ಪೈಕಿ 33 ಮಂದಿ ಸಚಿವರಾಗಿದ್ದಾರೆ. ಉಳಿದಿರುವ ಒಂದು ಸ್ಥಾನವನ್ನು ಮಹಿಳಾ ಸಚಿವರಿಗೆ ನೀಡಲು ಮೀಸಲಿಡಲಾಗಿದೆ ಎನ್ನಲಾಗಿದೆ.

D K Shivakumar
ಸದನ ನುಂಗಿದ ನಾಗೇಂದ್ರ: 3 ದಿನ ಮುನ್ನವೇ ಅಧಿವೇಶನ ಮೊಟಕು; ರಾತ್ರಿಯಿಡೀ ಧರಣಿ ನಡೆಸುವ ವಿಪಕ್ಷಗಳ ಯೋಜನೆಗೆ ತಣ್ಣೀರು!

ಸಚಿವ ಸ್ಥಾನಕ್ಕಾಗಿ ಶಾಸಕರ ಒತ್ತಡವಿಲ್ಲ

ತಮ್ಮನ್ನು ಆತುರದಲ್ಲಿರುವ ವ್ಯಕ್ತಿ ಎಂದು ಬಣ್ಣಿಸಿಕೊಂಡ ಶಿವಕುಮಾರ್, ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಉಳಿದಿರುವ ಅವಧಿಯಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ದೇಶಾದ್ಯಂತ ಕಾಂಗ್ರೆಸ್‌ಗೆ ಮಾದರಿಯಾಗುವ ಸಂಕಲ್ಪ ಹೊಂದಿರುವುದಾಗಿ ಹೇಳಿದರು.

ಸಚಿವ ಸ್ಥಾನ ಹಾಗೂ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕಾಗಿ ಶಾಸಕರಿಂದ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದೊಳಗಿನ ಆಕಾಂಕ್ಷೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದರು.

ಪ್ರತಿಯೊಬ್ಬರೂ ಸಚಿವರಾಗಲು, ನಿಗಮ-ಮಂಡಳಿ ಅಧ್ಯಕ್ಷರಾಗಲು ಅರ್ಹರು. ನನಗೆ ಅಂತಹ ಯಾವುದೇ ಒತ್ತಡವಿಲ್ಲ” ಎಂದು ಹೇಳಿದರು. ಆದರೆ ಸಚಿವ ಸಂಪುಟದ ಗಾತ್ರಕ್ಕೆ ಶೇ.15ರ ಮಿತಿ ಇರುವುದರಿಂದ ಎಲ್ಲರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ

ಕಾಂಗ್ರೆಸ್‌ನಲ್ಲಿ ಪ್ರತಿಸ್ಪರ್ಧಿ ಬಣಗಳಿವೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಿದ ಡಿ ಕೆ ಶಿವಕುಮಾರ್, ನಾನು ಯಾವುದೇ ಬಣವನ್ನು ನಂಬುವುದಿಲ್ಲ. ಸಿದ್ದರಾಮಯ್ಯ ಅವರಿಗೂ ತಮ್ಮದೇ ಬಣವಿತ್ತು ಎಂದು ನಾನು ಭಾವಿಸುವುದಿಲ್ಲ. ನಮ್ಮದು ಕಾಂಗ್ರೆಸ್ ಬಣ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

ಆಡಳಿತದ ಕುರಿತು ಮಾತನಾಡಿದ ಅವರು, ರಾಜಕೀಯ ಪಕ್ಷದ ಭೇದವಿಲ್ಲದೆ ಎಲ್ಲರಿಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ದಕ್ಷಿಣ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕ್ಷೇತ್ರ ಪುನರ್ವಿಂಗಡಣೆ ಸಂದರ್ಭದಲ್ಲಿ ಈಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದನ್ನು ವಿರೋಧಿಸಿದರು.

ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ದಕ್ಷಿಣ ಭಾರತದ ಜನರ ಮನಸ್ಸಿನಲ್ಲಿ ಖಂಡಿತವಾಗಿಯೂ ಗೊಂದಲ ಉಂಟಾಗುತ್ತದೆ. ದಕ್ಷಿಣ ಭಾರತೀಯರ ಧ್ವನಿ ಹತ್ತಿಕ್ಕಲ್ಪಡುತ್ತದೆ ಎಂದು ಹೇಳಿದರು.

ತಮಿಳುನಾಡು ಮತ್ತು ಕೇರಳವೂ ಇದೇ ನಿಲುವು ಹೊಂದಿವೆ. ದಕ್ಷಿಣ ರಾಜ್ಯಗಳ ಧ್ವನಿಯನ್ನು ರಕ್ಷಿಸಬೇಕಿದೆ ಎಂದರು.

ಕಾವೇರಿ ನೀರು ಬಿಡುಗಡೆ: ಸುಪ್ರೀಂ ಕೋರ್ಟ್ ಆದೇಶ ಪಾಲನೆ

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯು ಮುಖ್ಯವಾಗಿ ತಮಿಳುನಾಡು ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಉದ್ದೇಶ ಹೊಂದಿದೆ ಎಂದರು.

ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಕರ್ನಾಟಕ ಪಾಲಿಸಲಿದೆ ಎಂದು ಅವರು ಪುನರುಚ್ಚರಿಸಿದರು.

ನಾನು ಹಾಗೆಯೇ ಮಾಡುತ್ತೇನೆ. ಸುಪ್ರೀಂ ಕೋರ್ಟ್ ಏನು ನಿರ್ದೇಶನ ನೀಡಿದೆಯೋ, ಆ ಬದ್ಧತೆಯನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದರು.

ಮೇಲ್ಭದ್ರಾ ಯೋಜನೆಗೆ ಕೇಂದ್ರ ಅನುದಾನ ನೀಡಿಲ್ಲ

ಮೇಲ್ಭದ್ರಾ ಏತ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದೆ ವಿಫಲವಾಗಿದೆ. 2022-23ರ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 5,400 ಕೋಟಿ ಅನುದಾನ ಘೋಷಿಸಿದ್ದರೂ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ 150 ಕಿ.ಮೀ. ಫ್ಲೈಓವರ್, 47 ಕಿ.ಮೀ. ಸುರಂಗ

ಬೆಂಗಳೂರಿನ ಮೂಲಸೌಕರ್ಯ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್, ನಗರದಲ್ಲಿನ ಸಂಚಾರ ದಟ್ಟಣೆ ಹಾಗೂ ಸಂಚಾರ ವ್ಯವಸ್ಥೆ ಸುಧಾರಿಸಲು ಸುರಂಗ ಮಾರ್ಗಗಳು ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.

ನಗರದಲ್ಲಿ ಸುಮಾರು 150 ಕಿ.ಮೀ. ಉದ್ದದ ಮೇಲ್ಸೇತುವೆಗಳು ಹಾಗೂ 47 ಕಿ.ಮೀ. ಉದ್ದದ ಸುರಂಗ ಮಾರ್ಗಗಳನ್ನು ನಿರ್ಮಿಸುವ ಯೋಜನೆ ಇದೆ ಎಂದು ಹೇಳಿದರು.

ಬೆಂಗಳೂರಿನ ರಸ್ತೆ ಗುಂಡಿಗಳ ನಿರ್ವಹಣೆಯನ್ನು ಸಮರ್ಥಿಸಿಕೊಂಡ ಅವರು, ನಗರದಲ್ಲಿ ಸುಮಾರು 1.4 ಕೋಟಿ ಜನಸಂಖ್ಯೆ ಹಾಗೂ 1.35 ಕೋಟಿ ವಾಹನಗಳಿವೆ ಎಂದರು. ನಗರದ ಸುಮಾರು ಶೇ.60ರಷ್ಟು ರಸ್ತೆಗಳಿಗೆ ಈಗಾಗಲೇ ಕಾಂಕ್ರೀಟ್ ಹಾಕಲಾಗಿದೆ ಎಂದು ಹೇಳಿದರು.

10 ಸಾವಿರ ಭಾರತ್ ಜೋಡೋ ಯುವ ಕ್ಲಬ್‌ಗಳ ಸ್ಥಾಪನೆ

ಯುವಕರನ್ನು ಕ್ರೀಡೆ, ಸಂಸ್ಕೃತಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಮಾದಕ ವಸ್ತುಗಳು ಹಾಗೂ ಮದ್ಯದ ಬಳಕೆಯಿಂದ ದೂರವಿಡಲು ಕರ್ನಾಟಕದಾದ್ಯಂತ 10,000 ಭಾರತ್ ಜೋಡೋ ಯುವ ಕ್ಲಬ್‌ಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಅಲ್ಪಸಂಖ್ಯಾತರ ಓಲೈಕೆ ಆರೋಪವನ್ನು ತಳ್ಳಿಹಾಕಿದ ಅವರು, ಕಾಂಗ್ರೆಸ್ ಪಕ್ಷವು ಸಮಾಜದ ಪ್ರತಿಯೊಂದು ವರ್ಗವನ್ನೂ ಒಗ್ಗೂಡಿಸಿಕೊಂಡು ಸಾಗುವ ನಂಬಿಕೆಯನ್ನು ಹೊಂದಿದೆ. ಎಲ್ಲ ಸಮುದಾಯಗಳನ್ನೂ ಸರ್ಕಾರ ರಕ್ಷಿಸಲಿದೆ ಎಂದರು.

SIR ಪ್ರಕ್ರಿಯೆಗೆ ವಿರೋಧ, ಮತದಾನದ ಹಕ್ಕು ರಕ್ಷಣೆಗೆ ಭರವಸೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ತಾವು ಒಪ್ಪುವುದಿಲ್ಲ ಎಂದು ಶಿವಕುಮಾರ್ ಹೇಳಿದರು. ಆದರೆ ಅರ್ಹ ನಿವಾಸಿಗಳು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಅರ್ಹತೆಯನ್ನು ಸಾಬೀತುಪಡಿಸಲು ನಿವಾಸಿಗಳಿಗೆ ವಾಸಸ್ಥಳ, ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ ಎಂದರು.

2028ರಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಕಾಂಗ್ರೆಸ್ ಗೆಲುವು: ಡಿಕೆಶಿ ವಿಶ್ವಾಸ

ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

2029ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದರು.

ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 135 ಶಾಸಕರು ಹಾಗೂ ಒಂಬತ್ತು ಲೋಕಸಭಾ ಸದಸ್ಯರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com