

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಾನೂನುಬದ್ಧವಾಗಿ ನೋಂದಾಯಿತ ಸಂಸ್ಥೆಯಲ್ಲ. ಅದಕ್ಕೆ ನೋಂದಣಿ ಮಾಡಿಕೊಳ್ಳಲು ಹಣದ ಕೊರತೆಯಿದ್ದರೆ, ಅದರ ಸಂಪೂರ್ಣ ಶುಲ್ಕವನ್ನು ನಾನೇ ಪಾವತಿಸುತ್ತೇನೆ ನೋಂದಣಿ ಮಾಡಿಸಿ ಎಂದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಸಂಘಟನೆಗೆ ಬಹಿರಂಗ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಜಕೀಯ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಆರ್ಎಸ್ಎಸ್ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು, ಈ ಹಿಂದೆ ವಿಧಾನ ಪರಿಷತ್ನಲ್ಲಿ ಆರ್ಎಸ್ಎಸ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು ಎಂಬುದನ್ನು ಪ್ರಸ್ತಾಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಆರ್ಎಸ್ಎಸ್ ನೋಂದಣಿಯಾಗದ ಸಂಘಟನೆಯಾಗಿರುವುದರಿಂದ ಅದರ ವಿರುದ್ಧ ಪ್ರಕರಣಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದಲ್ಲಿ ಓದಿದ ಮೂರ್ಖರ ಗುಂಪು. ಆರ್ಎಸ್ಎಸ್ ನೋಂದಣಿಯಾಗಿಲ್ಲ. ಹಾಗಿದ್ದರೆ ಅದನ್ನು ಏಕೆ ನಿಷೇಧಿಸಬೇಕು? ಕಾನೂನಿನ ಚೌಕಟ್ಟಿನೊಳಗೆ ಬನ್ನಿ. ನೀವು ಕಾನೂನಿಗಿಂತ ಮೇಲಲ್ಲ ಎಂದು ಟೀಕಿಸಿದರು.
ನಿಮ್ಮ ಸಂಘಟನೆಯನ್ನು ನೋಂದಣಿ ಮಾಡಿಸಿಕೊಳ್ಳಿ. ನೋಂದಣಿ ಶುಲ್ಕವನ್ನು ನಾನೇ ಪಾವತಿಸುತ್ತೇನೆ. ಕರ್ನಾಟಕದಲ್ಲಿರುವ ಆರ್ಎಸ್ಎಸ್ನ ಎಲ್ಲ ಶಾಖೆಗಳನ್ನು ನೋಂದಣಿ ಮಾಡಿಸಲು ತಮ್ಮ ಶಾಸಕರ ನಿಧಿ ಅಥವಾ ಸಂಬಳದಿಂದ ಹಣ ನೀಡಲು ಸಿದ್ಧನಿದ್ದೇನೆ. ಇಲ್ಲದೆ, ದೇಶದಾದ್ಯಂತ ಆರ್ಎಸ್ಎಸ್ನ ಘಟಕಗಳ ನೋಂದಣಿಗೂ ಅಗತ್ಯ ನೆರವು ನೀಡಲು ತಾನು ಸಿದ್ಧ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಮತ್ತು ಆರ್. ಅಶೋಕ್ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಆರ್ಎಸ್ಎಸ್ ಜತೆ ಗುರುತಿಸಿಕೊಂಡಿದ್ದರೂ ಸಂಘಟನೆ ನೋಂದಣಿ ಮಾಡಿಸಿಕೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.
ತಮ್ಮ ಹೇಳಿಕೆಗಳಿಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿರುವುದನ್ನೂ ಖರ್ಗೆ ಟೀಕಿಸಿದರು. ‘ನನ್ನ ಹೇಳಿಕೆಗಳು ಅಪ್ರಸ್ತುತವಾಗಿದ್ದರೆ, ಅವುಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಬಿಜೆಪಿಯವರಿಗೆ ಏಕೆ?’ ಎಂದು ಪ್ರಶ್ನಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕುರಿತೂ ಪ್ರತಿಕ್ರಿಯಿಸಿ, ಪ್ರಕರಣವನ್ನು ನ್ಯಾಯಾಲಯದಲ್ಲೇ ಎದುರಿಸಲು ಸಿದ್ಧ ಎಂದು ಹೇಳಿದರು.
ನನ್ನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿ ಸಮನ್ಸ್ ಕಳುಹಿಸಿದ್ದೀರಿ. ಬನ್ನಿ, ನ್ಯಾಯಾಲಯದಲ್ಲೇ ಉತ್ತರಿಸುತ್ತೇನೆ’ ಎಂದು ಸವಾಲು ಹಾಕಿದರು.