

ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ ಸಚಿವ ಎಚ್.ಸಿ. ಬಾಲಕೃಷ್ಣ ಅವರು, ಸ್ವತಃ ತಮ್ಮ ಹೆಂಡತಿ ಫೋನ್ ಟ್ರ್ಯಾಪಿಂಗ್ ಮಾಡಿದವರು ನನ್ನ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಶನಿವಾರ ತಿರುಗೇಟು ನೀಡಿದ್ದಾರೆ.
ಸ್ವತಃ ತಮ್ಮ ಧರ್ಮಪತ್ನಿಯ ಫೋನ್ ಟ್ಯಾಪಿಂಗ್ ಮಾಡಿದಂತಹ ವ್ಯಕ್ತಿ ಕುಮಾರಸ್ವಾಮಿ. ಅಲ್ಲದೇ ತಮ್ಮ ಪಿಎಗಳ ಮೇಲೂ ಫೋನ್ ಟ್ಯಾಪಿಂಗ್ ಮಾಡಿಸಿದ್ದಾರೆ. ನಿನಗೆ ನಿನ್ನ ಹೆಂಡತಿ ಮೇಲೆ ನಂಬಿಕೆ ಇಲ್ಲ. ಇನ್ನೂ ಸಮಾಜವನ್ನ ಹೇಗೆ ನಂಬ್ತೀರಿ ಎಂದು ಸಚಿವ ಬಾಲಕೃಷ್ಣ ಅವರು ಕೇಂದ್ರ ಸಚಿವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಅದೇನೋ ಗನ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಅದು ಯಾವ ಗನ್ ಅವರಿಗೆ ತರಲು ಹೇಳಿ. ಒಂದು ನನಗೆ ಶೂಟ್ ಮಾಡ್ಲಿ, ಇಲ್ಲಅಂದ್ರೆ ಅವರೇ ಶೂಟ್ ಮಾಡಿಕೊಳ್ಳಿ. ಸುಮ್ನೆ ಹಿಟ್ ಅಂಡ್ ರನ್ ಕೇಸ್, ಉಡಾಫೆ ಮಾತು ನಡೆಯಲ್ಲ. ನನ್ನ ಹತ್ತಿರ ಗನ್ನು ಇಲ್ಲ, ಲೈಸೆನ್ಸೂ ಇಲ್ಲ. ಇಂತಹ ಆರೋಪ ಮಾಡೋಕೆ ನಾಚಿಕೆ ಆಗಬೇಕು. ಸಾಬೀತು ಮಾಡಿ ಇಲ್ಲ ಕ್ಷಮೆ ಕೇಳಿ ಎಂದು ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸ್ವಾಮೀಜಿ ಮೇಲೆ ಫೋನ್ ಟ್ಯಾಪಿಂಗ್ ಮಾಡಿಸಿದವರು ಇವರು. ಇವರೇ ಸಮಾಜಕ್ಕೆ ಬುದ್ಧಿ ಹೇಳುತ್ತಿದ್ದಾರೆ. ಅಂತಹ ಮನಸ್ಥಿತಿ ಇರುವಂತಹ ವ್ಯಕ್ತಿ ಅವರು, ದಯಮಾಡಿ ಗೌರವಯುತವಾಗಿ ನಡೆದುಕೊಳ್ಳಲು ಹೇಳಿ. ನನ್ನ ಮೇಲೆ ಗನ್ ಪಾಯಿಂಟ್ ಆರೋಪ ಮಾಡ್ತಾರೆ. ಇವರ ತರ ಹಲಾಲ್ ಕೋರ್ ರಾಜಕಾರಣ ಮಾಡೋ ಅಭ್ಯಾಸ ನನಗಿಲ್ಲ. ಗನ್ ತೋರಿಸೋದು, ಕತ್ತಿ ತೋರಿಸೋದು ನನ್ನ ರಾಜಕೀಯ ಜೀವನದಲ್ಲೇ ಇಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಕಿಡಿ ಕಾರಿದರು.
ನಮ್ಮ ಮಾಜಿ ನಾಯಕರು ಅಂತ ನಾನು ಗೌರವ ಕೊಡುತ್ತಿದ್ದೇನೆ. ನಾನು ಯಾರಿಗೂ ಹೆದರಲ್ಲ, ನನಗೆ ಕೋಪ ಬಂದರೆ ಯಾರನ್ನೂ ಕೇರ್ ಮಾಡಲ್ಲ. ನಾನೇನು ಸತ್ಯ ಹರಿಶ್ಚಂದ್ರ ಅಲ್ಲ. ಸಣ್ಣಪುಟ್ಟ ತಪ್ಪು ಮಾಡಿರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಗೌರವದ ನಡವಳಿಕೆ ಇಟ್ಟುಕೊಂಡಿದ್ದೇನೆ ಎಂದರು.