

ಬೆಂಗಳೂರು: ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಮಾರ್ಚ್ 8 ರಂದು ನಗರದಲ್ಲಿ ಮೆಗಾ ರ್ಯಾಲಿ ನಡೆಸಲು ಜೆಡಿಎಸ್ ನಾಯಕತ್ವ ಯೋಜಿಸುತ್ತಿದೆ. ಇದರ ಜೊತೆಗ ಮೈತ್ರಿ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರ ಸೇರಿ ಕೆಲ ವಿಷಯಗಳಲ್ಲಿ ಉಂಟಾಗಿರುವ ಗೊಂದಲಗಳಿಗೆ ಮದ್ದರೆಯಲು BJP ಮತ್ತು JDS ನಾಯಕರು ಮುಂದಾಗಿದ್ದಾರೆ.
ಜೆಡಿಎಸ್ ಬಿಜೆಪಿ ಜೊತೆ ಕಠಿಣ ಚೌಕಾಶಿ ಮಾಡಲು ಪ್ರಯತ್ನಿಸುತ್ತಿದೆ. 2028 ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವಾಗ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಲು ಪಕ್ಷ ಬಯಸಿದೆ.
224 ಸ್ಥಾನಗಳಲ್ಲಿ 113 ಸ್ಥಾನಗಳನ್ನು ಗೆದ್ದರೆ ಸಿಎಂ ಹುದ್ದೆಯನ್ನು ಕುಮಾರಸ್ವಾಮಿ ಪಡೆಯಬಹುದು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಯಾರು ಮುಖ್ಯಮಂತ್ರಿಯಾಗಬೇಕೆಂದು ಚರ್ಚಿಸಲು ಇದು ಸಮಯವಲ್ಲ. ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ ಎಂದು ಹೇಳಿದರು.
ಜೆಡಿಎಸ್ ಇತ್ತೀಚೆಗೆ ತನ್ನ ಜಿಲ್ಲಾ ಘಟಕಗಳಿಗೆ ಮುಖ್ಯಸ್ಥರನ್ನು ನೇಮಿಸಿದೆ. 2028 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 80 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ ಎಂದು ಜೆಡಿಎಸ್ ನಾಯಕರೊಬ್ಬರು ತಿಳಿಸಿದ್ದಾರೆ. ಪಕ್ಷವು ಬಿಜೆಪಿಯಿಂದ ಕನಿಷ್ಠ 90-100 ಸ್ಥಾನಗಳನ್ನು ನಿರೀಕ್ಷಿಸುತ್ತಿದ್ದು ಜೆಡಿಎಸ್ ಪಕ್ಷವು ಮಾತುಕತೆಗೆ ಮುಕ್ತವಾಗಿದೆ ಎಂದು ಅವರು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿ ಬರುವ ಐದು ನಗರ ಪುರಸಭೆಗಳಿಗೆ ನಡೆಯುವ ಚುನಾವಣೆಯಲ್ಲಿ 369 ಸ್ಥಾನಗಳಲ್ಲಿ ಕನಿಷ್ಠ 100-120 ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಬಯಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜೂನ್ 30 ರೊಳಗೆ ಜಿಬಿಎ ಚುನಾವಣೆ ನಡೆಯಬೇಕು.
ಬೆಂಗಳೂರು ಪಶ್ಚಿಮದಲ್ಲಿ, ವಿಶೇಷವಾಗಿ ಯಶವಂತಪುರ, ದಾಸರಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಬಲವಾದ ನೆಲೆಯನ್ನು ಹೊಂದಿದೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರಿಗೆ ಆಪ್ತರಾಗಿರುವ ಜೆಡಿಎಸ್ ನಾಯಕರೊಬ್ಬರು ಹೇಳಿದ್ದಾರೆ.
Advertisement