

ಬೆಂಗಳೂರು: ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಗದ್ದಲ ನಡುವೆ ಕೈ ಶಾಸಕರು ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ. ರಾಜ್ಯ ಸಂಪುಟ ಪುನಾರಚನೆ ಕೂಗು ಕೇಳಿಬಂದಿದೆ.
ಮೊದಲ ಬಾರಿಗೆ ಗೆದ್ದಿರುವ ಕಾಂಗ್ರೆಸ್ನ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದು, ಸಂಪುಟ ವಿಸ್ತರಣೆ ಮಾಡಿ, ನಮಗೂ ಅವಕಾಶ ಕೊಡಿ ಎಂದು ಧ್ವನಿ ಎತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಕರ್ನಾಟಕ ಪ್ರವಾಸದಲ್ಲಿರುವಾಗಲೇ ಸಂಪುಟ ಪುನರ್ ರಚನೆ ಬೇಡಿಕೆ ಬಂದಿದೆ.
ಶಾಸಕರು ಬರೆದಿರುವ ಪತ್ರದ ಸಾರಾಂಶ ಹೀಗಿದೆ
ಕಾಂಗ್ರೆಸ್ನಿಂದ ಮೊದಲ ಬಾರಿ 38 ಶಾಸಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಯುವಕರಿಗೆ ಅವಶ್ಯಕತೆ ಇದೆ ಎಂದು ಜನ ಹೇಳಿದ್ದಾರೆ. ಮೊದಲ ಬಾರಿ ಗೆದ್ದವರಿಗೆ ಸಚಿವ ಸ್ಥಾನ ನೀಡಿ ಜನಾದೇಶಕ್ಕೆ ಮನ್ನಣೆ ನೀಡಿ. ಯುವಕರಿಗೆ ಅವಕಾಶ ನೀಡುವುದು ಈ ಕ್ಷಣದ ಬೇಡಿಕೆಯಾಗಿದೆ.
ಮೊದಲ ಬಾರಿ ಗೆದ್ದಿರುವ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಿ. ಬೇರೆ ಸರ್ಕಾರದಲ್ಲಿ ಮೊದಲ ಬಾರಿ ಶಾಸಕರು ಸಿಎಂ ಆಗಿದ್ದಾರೆ. ಹೊಸಬರಿಗೆ ಅವಕಾಶ ನೀಡಿದರೆ ಮುಂದಿನ ಚುನಾವಣೆ ಗೆಲ್ಲಲು ಸಹಕಾರಿಯಾಗಲಿದೆ. ಪಕ್ಷ ನಿಷ್ಠೆ, ಸೈದ್ದಾಂತಿಕವಾಗಿ ಗಟ್ಟಿಯಾಗಿರುವವರಿಗೆ ಅವಕಾಶ ನೀಡಿ ಎಂದು ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ಶಾಸಕರಾದ ಎ.ಎಸ್.ಪೊನ್ನಣ್ಣ, ಭೀಮಸೇನ ಚಿಮ್ಮನಕಟ್ಟಿ, ಪ್ರದೀಪ್ ಈಶ್ವರ್, ಇಕ್ಬಾಲ್ ಹುಸೇನ್, ಎನ್.ಟಿ.ಶ್ರೀನಿವಾಸ, ಅಶೋಕ್ ಕುಮಾರ್ ರೈ, ಎನ್.ಶ್ರೀನಿವಾಸ, ದರ್ಶನ್ ಧ್ರುವನಾರಾಯಣ, ಶಿವಗಂಗಾ ಬಸವರಾಜು, ವಿಶ್ವಾಸ್ ವೈದ್ಯ, ನಾರಾ ಭರತ್ ರೆಡ್ಡಿ, ಪ್ರಕಾಶ್ ಕೋಳಿವಾಡ, ಕೆ.ಎಸ್.ಆನಂದ, ಮಂಥರ್ ಗೌಡ, ಚನ್ನಾರೆಡ್ಡಿ ಪಾಟೀಲ್, ದೇವೇಂದ್ರಪ್ಪ. ಡಿ.ರವಿಶಂಕರ್, ನಯನಾ ಮೋಟಮ್ಮ, ರಾಜಾವೇಣುಗೋಪಾಲ ನಾಯಕ, ಮಹೇಂದ್ರ ತಮ್ಮಣ್ಣನವರ್, ಎ.ಸಿ.ಶ್ರೀನಿವಾಸ, ಅಶೋಕ್ ಮನಗೂಳಿ, ಪಿ.ರವಿಕುಮಾರ್, ಬಾಬಾಸಾಹೇಬ್ ಪಾಟೀಲ್ ಸೇರಿ 31 ಶಾಸಕರು ಪತ್ರ ಬರೆದಿದ್ದಾರೆ.
Advertisement