

ಬೆಂಗಳೂರು: ಆರೋಗ್ಯ ಇಲಾಖೆಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದಿನಪತ್ರಿಕೆಯಲ್ಲಿ ಪ್ರಕಟವಾದ ಉರ್ದು ಜಾಹೀರಾತಿನ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ವಾಗ್ವಾದ ನಡೆಸಿದವು.
ಕನ್ನಡ ಹೊರತುಪಡಿಸಿ ಇತರೆ ಭಾಷೆಗಳಲ್ಲಿ ಆಹ್ವಾನ ಪತ್ರಿಕೆ ಮುದ್ರಿಸುತ್ತಾ ಹೋಗುವುದು ಸರಿಯಲ್ಲ. ಕನ್ನಡಕ್ಕೆ ಮೊದಲ ಆದ್ಯತೆಯನ್ನು ಕರ್ನಾಟಕದಲ್ಲಿ ನೀಡಬೇಕು. ಓಲೈಕೆ ರಾಜಕಾರಣಕ್ಕಾಗಿ ಕನ್ನಡವನ್ನು ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಕಡೆಗಣಿಸುತ್ತಿದೆ.
ರೋಗ ನಿರೋಧಕ ಚಿಕಿತ್ಸೆ, ಆಂಬುಲೆನ್ಸ್ಗೆ ಚಾಲನೆ ನೀಡಬೇಕಾಗಿದ್ದ ಆಹ್ವಾನ ಪತ್ರಿಕೆಯನ್ನು ಸಂಪೂರ್ಣ ಉರ್ದುವಿನಲ್ಲಿ ಪ್ರಕಟಿಸಿದೆ ಎಂದು ಕರ್ನಾಟಕ ಬಿಜೆಪಿ ‘ಎಕ್ಸ್’ ಪೋಸ್ಟ್ ಮೂಲಕ ಟೀಕಿಸಿದೆ.
ಸಿಎಂ, ಡಿಸಿಎಂ ಅವರೇ, ಕರ್ನಾಟಕದ ಆಡಳಿತ ಭಾಷೆ ಕನ್ನಡವೋ ಅಥವಾ ಉರ್ದುವೋ, ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಉರ್ದು ಮಾತನಾಡುತ್ತಾರೆ ಎಂಬ ಕಾರಣಕ್ಕೆ ಸರ್ಕಾರದ ಅಧಿಕೃತ ಆಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ ಪ್ರಕಟಿಸಲು ಅಧಿಕಾರ ಕೊಟ್ಟವರಾರು ಎಂದಿದೆ. ನಿಮ್ಮ ಮನೆಯಲ್ಲಿ ಉರ್ದುವಿನಲ್ಲಿ ಮಾತನಾಡಿ, ಆದರೆ ಕರ್ನಾಟಕದ ಆಡಳಿತ ಭಾಷೆ ಕನ್ನಡ ಎಂಬುದನ್ನು ನೆನಪಿಡಿ ಎಂದು ಎಚ್ಚರಿಕೆ ನೀಡಿದೆ.
ಅಧಿಕೃತ ಆಮಂತ್ರಣ ಪತ್ರಿಕೆಗೂ ಮತ್ತು ಪತ್ರಿಕಾ ಜಾಹೀರಾತಿಗೂ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರ ಬುದ್ಧಿ ಮಂಕಾಗಿದೆಯೇ? ಅಥವಾ ಜನರನ್ನು ದಾರಿ ತಪ್ಪಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದೀರಾ?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ‘ಎಕ್ಸ್’ ಮೂಲಕವೇ ಪ್ರತ್ಯುತ್ತರ ನೀಡಿದರು. ‘ಜಾಹೀರಾತು ಹಿಡಿದು ನಾಡದ್ರೋಹಿ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಗರು ವಿಶ್ವ ಗುರು ಫೋಟೊ ಸೇರಿಸಿ ನಿಮ್ಮದೇ ಅಧಿಕಾರಾವಧಿಯ ಎಷ್ಟು ಜಾಹೀರಾತು ನೀಡಿದ್ದೀರಿ ಅಂತ ಒಮ್ಮೆ ತಿರುಗಿ ನೋಡಲಿ’ ಎಂದು ಟೀಕಿಸಿದ್ದಾರೆ
ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಉರ್ದು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗಿದ್ದವು. ಅವರೂ ನಾಡದ್ರೋಹಿಗಳಾ, ಯಾವುದೇ ಆಮಂತ್ರಣ ಪತ್ರಿಕೆ ಉರ್ದುವಿನಲ್ಲಿಲ್ಲ, ಆಯಾ ಭಾಷೆಯ ಓದುಗರಿಗೆ ಮಾಹಿತಿ ತಲುಪಿಸಲು ಪತ್ರಿಕೆಗಳ ಭಾಷೆಯಲ್ಲೇ ಜಾಹೀರಾತು ನೀಡುವುದು ಆಡಳಿತದ ಸಾಮಾನ್ಯ ಪ್ರಕ್ರಿಯೆ ಎಂದು ಉತ್ತರಿಸಿದ್ದಾರೆ.
Advertisement