

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಕದನ ಜೋರಾಗಿದೆ. ಮಾಗಡಿ ಕ್ಷೇತ್ರದ ಶಾಸಕ ಹೆಚ್ ಸಿ ಬಾಲಕೃಷ್ಣ ಅವರ ಹುಟ್ಟುಹಬ್ಬದ ಅಂಗವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರು ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಔತಣಕೂಟದಲ್ಲಿ ಭಾಗಿಯಾಗಿ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗಹನವಾದ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಶಾಸಕರ ಬಾಲಕೃಷ್ಣ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ನನ್ನ ಹುಟ್ಟುಹಬ್ಬದ ಅಂಗವಾಗಿ ನಾವೆಲ್ಲಾ ಫ್ರೆಂಡ್ಸ್ ಒಟ್ಟು ಸೇರಿದ್ದೇವೆ. ಸಮಾನಮನಸ್ಕ ಶಾಸಕರು ಸುಮಾರು 40 ಮಂದಿ ಗೆಟ್ ಟುಗೆದರ್ ಮಾಡಿದೆವು, ಇಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಬೆಂಬಲಿಗರು ಎಂದಲ್ಲ ಕಾಂಗ್ರೆಸ್ ನ ಶಾಸಕರಾಗಿ ಗುರುತಿಸಿಕೊಂಡಿದ್ದೇವೆ ಎಂದರು.
ಔತಣಕೂಟ ಸಭೆಯಲ್ಲಿ ಏನು ಚರ್ಚೆಯಾಗಿದ್ದೇನು?
ಇಂದು ನಾವೆಲ್ಲಾ ಸೇರಿ ಕಾಂಗ್ರೆಸ್ ಪಕ್ಷದ ಭವಿಷ್ಯ, 2028ರ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಪದೇ ಪದೇ ಚರ್ಚೆಗೆ ಬರುತ್ತಿರುತ್ತದೆ. ಜನರಲ್ಲಿ ಗೊಂದಲ ಮೂಡುತ್ತದೆ, ಇದೇ ಪರಿಸ್ಥಿತಿ ಮುಂದುವರಿದುಕೊಂಡು ಹೋದರೆ ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ. ಹಾಗಾಗಿ ಹೈಕಮಾಂಡ್ ಇದಕ್ಕೆ ಅಂತಿಮವಾದ ರೂಪವನ್ನು ಎಳೆಯಬೇಕೆಂದು ಒತ್ತಾಯ ಮಾಡಲು ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಹೈಕಮಾಂಡ್ ಗೆ ಒತ್ತಡ ಹೇರಲು ದೆಹಲಿ ಯಾತ್ರೆ ಮಾಡಲು ಮುಂದಾಗಿದ್ದೀರ ಎಂದು ಕೇಳಿದಾಗ, ದೆಹಲಿ ಯಾತ್ರೆ ಎಂದಲ್ಲ, ಕರ್ನಾಟಕದಲ್ಲಿ ಏನಾಗುತ್ತಿದೆ, ಏನು ಬೆಳವಣಿಗೆಗಳು ಆಗುತ್ತಿದೆ ಎಂದು ಹೈಕಮಾಂಡ್ ಗೆ ಗೊತ್ತಿದೆ, ಅವರೇನು ನಿದ್ದೆ ಮಾಡುತ್ತಿಲ್ಲ, ನಮಗೆ ಪ್ರತಿನಿತ್ಯ ಕ್ಷೇತ್ರಕ್ಕೆ ಹೋದರೆ ಸಿಎಂ ಬದಲಾವಣೆ ಬಗ್ಗೆಯೇ ಚರ್ಚೆ, ನಮಗೂ ಕೇಳಿ ಕೇಳಿ ಸಾಕಾಗಿ ಹೋಗಿದೆ. ನಮಗೆ ಕ್ಷೇತ್ರಕ್ಕೆ ಹೋದರೆ ಕಿರಿಕಿರಿಯಾಗುತ್ತಿದೆ, ಅದನ್ನು ತಪ್ಪಿಸಲು ಹೈಕಮಾಂಡ್ ಗೆ ಮನವಿ ಮಾಡಬೇಕು, ಅದಕ್ಕಾಗಿ ಏನು ಮಾಡಬೇಕೆಂದು ಮುಂದಿನ ದಿನಗಳಲ್ಲಿ ನೋಡುತ್ತೇವೆ ಎಂದರು.
ಹೈಕಮಾಂಡ್ ಮಧ್ಯ ಪ್ರವೇಶಿಸಿ ಈ ಗೊಂದಲಕ್ಕೆ ತೆರೆ ಎಳೆಯಲೇ ಬೇಕು, ಇಲ್ಲದಿದ್ದರೆ ಪಕ್ಷಕ್ಕೆ ಡ್ಯಾಮೇಜ್ ಆಗತ್ತೆ, ಯಾರನ್ನು ಸಿಎಂ ಮಾಡುತ್ತಾರೆ ಎಂಬುದಲ್ಲ, ಈ ಗೊಂದಲ ನಿವಾರಣೆಯಾಗಬೇಕೆಂಬುದು ನಮ್ಮೆಲ್ಲರ ಒತ್ತಾಸೆಯಾಗಿದೆ ಎಂದರು.
Advertisement