

ಬೆಂಗಳೂರು: ಬಿಜೆಪಿ ಮೈತ್ರಿ ಬಿಟ್ಟು ಹೊರಗೆ ಬನ್ರಿ ನೋಡೋಣ ಎಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ಚಲುವರಾಯಸ್ವಾಮಿ ಪಂಥಾಹ್ವಾನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ವಿಧಾನಸೌಧದ ಮುಂದೆ ನಿಂತು 120 ಸ್ಥಾನ ಗೆಲ್ತೀನಿ ಅಂತ ಹೇಳಿ ಎಂದು ಸವಾಲು ಹಾಕಿದರು. ಮೈತ್ರಿ ತೊರೆದು ಹೊರ ಬಂದು ಕುಮಾರಸ್ವಾಮಿ ಅವರು ವಿಧಾನಸೌಧದ ಮುಂದೆ ನಿಂತು 120 ಸ್ಥಾನ ಗೆಲ್ತೀನಿ ಅಂತ ಹೇಳಲಿ. 120 ಸ್ಥಾನ ಗೆದ್ದು ತೋರಿಸಲಿ ನೋಡೋಣ ಎಂದು ಅವರು ಸವಾಲು ಹಾಕಿದರು.
ಒಂದು ವೇಳೆ 120 ಸ್ಥಾನಗಳನ್ನು ಅವರು ಗೆದ್ದು ತೋರಿಸಿದರೆ ನಾವೇ ಅವರಿಗೆ ಸೆಲ್ಯೂಟ್ ಹೊಡೆದು ಸರೆಂಡರ್ ಆಗ್ತೀವಿ. ಮೈತ್ರಿ ಬಿಟ್ಟು ಏಕಾಂಗಿಯಾಗಿ ಬರಲಿ ನೋಡೋಣ. ಬಿಜೆಪಿ ಜೊತೆಗೆ ಇದ್ದು 20 ಸೀಟು ಗೆಲ್ಲುವುದಾದರೆ ಅದರಲ್ಲೇನಿದೆ? ಎಂದು ಪ್ರಶ್ನಿಸಿದರು.
ತಮಿಳುನಾಡು ಮಾಜಿ ಸಿಎಂ ದಿವಂಗತ ಕರುಣಾನಿಧಿ ಮಗನನ್ನು ನೋಡಿ ಕಲಿತುಕೊಳ್ಳಿ. ದೇವೇಗೌಡರ ಮಗನಾಗಿ ಏನ್ರಿ ನಿಮ್ಮ ಸಾಧನೆ? ಇನ್ನು ಮುಂದೆಯಾದರೂ ಗೌರವದಿಂದ ಮಾತನಾಡಿ ಮಿಸ್ಟರ್ ಕುಮಾರಸ್ವಾಮಿಯವರೇ. ನಮಗೆ ಕುಮಾರಸ್ವಾಮಿ ಅಭಿನಂದನೆ ಬೇಕಾಗಿಲ್ಲ, ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ರೇವಣ್ಣಗೆ ಇರುವ ಮನಸ್ಸೂ ನಿಮಗೆ ಇಲ್ಲ ಎಂದು ಕಿಡಿಕಾರಿದರು.
ನಿಮ್ಮಿಂದ ಒಳ್ಳೆಯದಂತೂ ಮಾಡುವುದಕ್ಕಾಗಲ್ಲ, ಒಳ್ಳೆಯದನ್ನೂ ನಿರೀಕ್ಷೆ ಮಾಡಿಲ್ಲ. ನಾನು ಹಿಂದೆಯೂ ಯಾರ ಚಮಚಾಗಿರಿ ಮಾಡಿದವನಲ್ಲ. ಹಿಂದೆ ಆರ್ ಎಸ್ ಎಸ್ ಬೈದವರು, ಈಗ ಅಧಿಕಾರಕ್ಕೆ ಆರ್ ಎಸ್ಎಸ್ ಹಾಗೂ ನರೇಂದ್ರ ಮೋದಿಯನ್ನು ಹೊಗಳುತ್ತಿದ್ದೀರಿ. ಬಾಲಕೃಷ್ಣಗೆ ಯಾರೋ ಒಬ್ಬ ಶಾಸಕ ಅಂತ ಮಾತನಾಡಿದ್ದೀರಿ. ಏನು ಗೌರವ ನಿಮ್ಮದು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲ ಬಾರಿ ಆಪರೇಷನ್ ಕಮಲ ಮಾಡಿದವರು ಕುಮಾರಸ್ವಾಮಿ. ಕುಮಾರಸ್ವಾಮಿ ಹೇಗೆ ಸಿಎಂ ಆದ್ರಿ ನೆನಪಿಸಿಕೊಳ್ಳಿ ಒಮ್ಮೆ. ಕುಮಾರಸ್ವಾಮಿ ಸಂವಿಧಾನಾತ್ಮಕ ಆಯ್ಕೆಯಾದ ಮುಖ್ಯಮಂತ್ರಿನಾ? ಕುಮಾರಸ್ವಾಮಿ ನಾಯಕತ್ವದಲ್ಲಿ ಯಾವತ್ತು 37 ಸೀಟಿಗಿಂತ ಮೇಲೆ ಹೋಗಿಲ್ಲ ಕಿಡಿಕಾರಿದ್ದಾರೆ.