

ಚಿಕ್ಕಮಗಳೂರು: ನೀಟ್ ಪ್ರತಿಭಟನೆಯ ಸಂದರ್ಭದ ವಿಡಿಯೋ ಎಂದು ಹೇಳಿ ಬಿಹಾರದ ರಸ್ತೆ ಅಪಘಾತದ ವಿಡಿಯೋ ತೋರಿಸುವ ಮೂಲಕ ಬಿಜೆಪಿ MLC ಸಿ.ಟಿ ರವಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನೀಟ್ ಗೂ ಮುಲ್ಲಾಗಳಿಗೂ ಏನು ಸಂಬಂಧ? ಎದೆ ಸೀಳಿದರೆ ಮೂರು ಅಕ್ಷರವಿಲ್ಲದ ಮುಲ್ಲಾಗಳು ನೀಟ್ ಪ್ರತಿಭಟನೆಯಲ್ಲಿ ಭಾಗಿಯಾಗುವುದಂತೆ, ಪ್ರಧಾನ್ ರಾಜೀನಾಮೆ ಕೇಳುವುದಂತೆ… ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ಈ ಸಂಬಂಧ ಸಿ.ಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇಂದು ಚಿಕ್ಕಮಗಳೂರು ಪೊಲೀಸರು ಸಿಟಿ ರವಿ ಅವರ ಬಸವನಹಳ್ಳಿಯಲ್ಲಿರುವ ನಿವಾಸಕ್ಕೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ತೆರಳಿದ್ದರು. ನೋಟಿಸ್ ಸ್ವೀಕರಿಸದ ಸಿ.ಟಿ ರವಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಇನ್ನು ಪೊಲೀಸರು ಅಂಟಿಸುತ್ತಿದ್ದಂತೆ ನೋಟಿಸ್ ಅನ್ನು ಅವರ ಬೆಂಬಲಿಗರು ಕಿತ್ತು ಬಿಸಾಕಿ ಪೊಲೀಸರ ವಿರುದ್ಧವೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿ.ಟಿ ರವಿ, ನಾನು ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡಿಲ್ಲ. ನೀಟ್ ಪ್ರತಿಭಟನೆ ವೇಳೆ ವಾಹನಕ್ಕೆ ಬೆಂಕಿ ಹಚ್ಚಲು ಉದ್ರಿಕ್ತರು ಯತ್ನಿಸಿದ್ದರು. ಮುಲ್ಲಾ ಓರ್ವ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂದು ಹೇಳಿ ಬಿಹಾರದಲ್ಲಿ ವಾರದ ಹಿಂದೆ ನಡೆದಿದ್ದ ರಸ್ತೆ ಅಪಘಾತದ ವಿಡಿಯೋವೊಂದನ್ನು ತೋರಿಸಿದ್ದರು. ಇದು ವೈರಲ್ ಆಗುತ್ತಿದ್ದಂತೆ ಒಬ್ಬ ಜನಪ್ರತಿನಿಧಿಯಾಗಿ ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯದೆ ತೋರಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.