

ಮಂಡ್ಯ: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಆದರೆ, ಅವರ ಮುಂದೆ ದೊಡ್ಡ ಸವಾಲುಗಳಿವೆ. ‘ದೇರ್ ಇಸ್ ನೋ ಹನಿಮೂನ್ ಪಿರಿಯಡ್ ಆಫ್ ಡಿ.ಕೆ.ಶಿವಕುಮಾರ್’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಎಷ್ಟು ಸತ್ಯವೋ, ಅವರ ಮಂತ್ರಿ ಮಂಡಲ ನೋಡಿದಾಗ ಅದು ಸಿದ್ದರಾಮಯ್ಯ ಕ್ಯಾಬಿನೆಟ್ ಅನ್ನೋದು ಕೂಡ ಅಷ್ಟೇ ಸತ್ಯ ಎಂದರು.ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಾವು ಕುರ್ಚಿಯಿಂದ ಇಳಿಯುವಾಗ ಡಿ.ಕೆ.ಶಿವಕುಮಾರ್ ಅವರತ್ತ ಗೂಗ್ಲಿ ಎಸೆದು ಹೋಗಿದ್ದಾರೆ.
ಹಿಂದುಳಿದ ವರ್ಗಗಳ ವರದಿ ಸ್ವೀಕಾರ ಮಾಡಿ ಮುಂದಿನ ಸಿಎಂ ಏನು ಮಾಡುತ್ತಾರೆ ಎನ್ನುವ ಸವಾಲು ಡಿ.ಕೆ.ಶಿವಕುಮಾರ್ ಮುಂದೆ ಬಿಟ್ಟಿದ್ದಾರೆ. ಮುಂದಿನ 2 ವರ್ಷ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ ಎಂದರು.
ದೊಡ್ಡ ಸವಾಲುಗಳ ಮುಂದೆ ರಾಜ್ಯದ ಅಭಿವೃದ್ಧಿ ಮಾಡಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ಮಂತ್ರಿಮಂಡಲವನ್ನು ಸರಿದೂಗಿಸಿಕೊಂಡು ಹೋಗುವ ಸವಾಲು ಕೂಡ ಇದೆ. ಇದೆಲ್ಲವನ್ನು ಡಿ.ಕೆ.ಶಿವಕುಮಾರ್ ಹೇಗೆ ಸರಿಪಡಿಸಿಕೊಂಡು ಹೋಗ್ತಾರೆ ಎನ್ನುವುದನ್ನು ನಾವು ಕೂಡ ನೋಡ್ತೇವೆ. ನಾವು ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವೈಫಲ್ಯವನ್ನು ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡ್ತೇವೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿಯಾಗಿಲ್ಲ. ಸರ್ಕಾರವು ಅಲ್ಪಸಂಖ್ಯಾತರ ತುಷ್ಟೀಕರಣದ ಮೇಲೆ ಕೇಂದ್ರೀಕರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಖಾತರಿಗಳು ಮತ್ತು ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಅವರು ಹೇಳಿದರು.
ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಅಥವಾ ಸುಮಲತಾ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುವ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಅಂಥ ಯಾವುದೇ ತೀರ್ಮಾನ ನಮ್ಮ ಮುಂದೆ ಇಲ್ಲ. ಅದನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದರು.
"ರಾಜ್ಯ ಅಧ್ಯಕ್ಷರಾಗಿ, ನಾನು ಸಂಘಟನೆಯನ್ನು ಬಲಪಡಿಸುತ್ತೇನೆ ಮತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವತ್ತ ಕೆಲಸ ಮಾಡುತ್ತೇನೆ" ಎಂದು ಅವರು ಹೇಳಿದರು.
Advertisement