

ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ತಮ್ಮ ಕೈತಪ್ಪಿದೆ ಎಂಬ ಮಾತುಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವು ಬಹಳ ಹಿಂದೆಯೇ 'ಒಬ್ಬರಿಗೆ ಒಂದು ಹುದ್ದೆ' ಎಂಬ ನೀತಿಯನ್ನು ಅನುಸರಿಸುವುದಾಗಿ ತಿಳಿಸಿತ್ತು, ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಿಸಿರುವುದು ಕಾಂಗ್ರೆಸ್ ಪಕ್ಷದ ನಿಯಮಾನುಸಾರ ತೆಗೆದುಕೊಂಡ ನಿರ್ಧಾರವಾಗಿದ್ದು, ಅದನ್ನು ತಮ್ಮ ಹಿನ್ನಡೆಯಾಗಿ ನೋಡಬಾರದು ಎಂದು ಹೇಳಿದರು.
"ಕೆಪಿಸಿಸಿ ಅಧ್ಯಕ್ಷ ಸ್ಥಾನ ನನ್ನ ಕೈತಪ್ಪಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಅದು ಸರಿಯಲ್ಲ. ಸುಮಾರು ಎರಡು ತಿಂಗಳ ಹಿಂದೆಯೇ ಪಕ್ಷದ ಹೈಕಮಾಂಡ್ ತನ್ನ ನಿಲುವು ಸ್ಪಷ್ಟಪಡಿಸಿತ್ತು. ಸಚಿವ ಸ್ಥಾನ ಹಾಗೂ ಸಂಘಟನಾ ಹುದ್ದೆಗಳನ್ನು 'ಒಬ್ಬರಿಗೆ ಒಂದು ಹುದ್ದೆ' ಎಂಬ ಸೂತ್ರದ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಸರ್ಕಾರದಲ್ಲಿ ಜವಾಬ್ದಾರಿ ಹೊಂದಿರುವ ನಾಯಕರನ್ನು ಸಾಮಾನ್ಯವಾಗಿ ಪ್ರಮುಖ ಪಕ್ಷದ ಹುದ್ದೆಗಳಿಗೆ ಪರಿಗಣಿಸುವುದಿಲ್ಲ ಎಂದು ವಿವರಿಸಿದರು.
ಸರ್ಕಾರ ರಚನೆಯ ಅಂತಿಮ ಹಂತದಲ್ಲಿ ಸಚಿವ ಸ್ಥಾನಗಳ ಬಗ್ಗೆ ಸ್ಪಷ್ಟತೆ ಇರದ ಕಾರಣ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕುರಿತ ಚರ್ಚೆಗಳು ನಡೆದಿದ್ದವು. "ಒಂದು ಹಂತದಲ್ಲಿ ಸಚಿವ ಸ್ಥಾನ ಸಿಗುತ್ತದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ಆಗ ಕೆಪಿಸಿಸಿ ಹುದ್ದೆ ಖಾಲಿ ಇದ್ದುದರಿಂದ ಸಹಜವಾಗಿಯೇ ಅದರ ಬಗ್ಗೆ ಚರ್ಚೆಗಳು ನಡೆದವು. ನಂತರ ಪಕ್ಷದ ನಿಲುವು ಸ್ಪಷ್ಟವಾದ ಬಳಿಕ ಆ ವಿಚಾರಕ್ಕೆ ಅಂತ್ಯವಾಯಿತು ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನವೇ ರಾಜಕೀಯವಾಗಿ ಅತ್ಯುನ್ನತ ಹುದ್ದೆ ಅಲ್ಲ, ಮುಖ್ಯಮಂತ್ರಿ ಹುದ್ದೆ ಪಡೆಯಲು ಕೆಪಿಸಿಸಿ ಅಧ್ಯಕ್ಷರಾಗಿರಬೇಕೆಂಬ ನಿಯಮವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರಾಗದೆ ಮುಖ್ಯಮಂತ್ರಿಯಾಗಿದರು ಎಂದು ಹೇಳಿದರು.
Advertisement