

ಪುತ್ತೂರು: ಪಕ್ಷ ಶುದ್ಧೀಕರಣ ವಿಚಾರದಲ್ಲಿ ನಾನು ಮಾಧ್ಯಮಗಳ ಮುಂದೆ ಮಾತನಾಡಿರುವುದನ್ನು ತಪ್ಪಾಗಿ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ನನ್ನ ಚಾರಿತ್ರ್ಯವಧೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ನಿನ್ನೆ ಪುತ್ತೂರಿಗೆ ಭೇಟಿ ನೀಡಿದ್ದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಪಕ್ಷ ಶುದ್ಧೀಕರಣ ವಿಚಾರ ಬಂತು. ಪುತ್ತೂರಿನ ಬಿಜೆಪಿ ಬಗ್ಗೆ ಕೇಳಿದಾಗ ಅದು ನನ್ನ ಲೆವೆಲ್ಲಿಗೆ ಬರುವುದಿಲ್ಲ ಎಂದು ಹೇಳಿದ್ದೆ. ಅಂದರೆ ಅದು ನನ್ನ ಲೆವೆಲ್ಲಿಂದ ಮೇಲ್ಪಟ್ಟದ್ದು, ನನ್ನ ಹಿರಿಯರು ಮಾತನಾಡಬೇಕೆ ಹೊರತು ನಾನು ಅದರಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದೆ ಎಂದರು.
ಪುತ್ತೂರಿನ ಬಿಜೆಪಿಯ ವಿಚಾರದಲ್ಲಿ ನಮ್ಮ ಹಿರಿಯರ ತೀರ್ಮಾನವೇ ಅಂತಿಮ ಮತ್ತು ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಕಳೆದ ಚುನಾವಣೆ ನಂತರ ಹಲವರು ನನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇಂದು ನನ್ನ ಮಾತನ್ನು ಅಪಾರ್ಥ ಬರುವ ರೀತಿಯಲ್ಲಿ ಸೋಷಿಯಲ್ಲಿ ಮೀಡಿಯಾದಲ್ಲಿ ಹಬ್ಬಿಸುತ್ತಿದ್ದಾರೆ. ಇದು ನನ್ನ ಮನಸ್ಸಿಗೆ ನೋವು ತಂದಿದೆ ಎಂದರು.
ಪಕ್ಷದ ಶುದ್ಧೀಕರಣ ವಿಚಾರ ಬಂದಾಗ ರಾಜ್ಯಮಟ್ಟದಲ್ಲಿ ಮಾತನಾಡುತ್ತೇನೆಯೇ ಹೊರತು ಪುತ್ತೂರು ಮಟ್ಟಿಗೆ ಅಲ್ಲ. ನನಗೆ ಪುತ್ತೂರು ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಎಲ್ಲವನ್ನೂ ಕೊಟ್ಟಿದೆ. ನನ್ನ ಕರ್ಮಭೂಮಿ ಪುತ್ತೂರು ಬಗ್ಗೆ, ಉನ್ನತ ಸ್ಥಾನಮಾನಗಳನ್ನು ಕೊಟ್ಟ ಪುತ್ತೂರು ಬಿಜೆಪಿ ಬಗ್ಗೆ ಅತ್ಯಂತ ಗೌರವದಿಂದ ಈ ಹಿಂದೆಯೂ ನಡೆದುಕೊಂಡಿದ್ದೇನೆ. ಮುಂದೆಯೂ ಕೊನೆ ಉಸಿರು ಇರುವವರೆಗೂ ಇದೇ ರೀತಿ ನಡೆದುಕೊಳ್ಳುತ್ತೇನೆ ಎಂದು ಡಿ ವಿ ಸದಾನಂದ ಗೌಡ ಸುದೀರ್ಘವಾದ ಪತ್ರ ಬರೆದಿದ್ದಾರೆ.
Advertisement