

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧದ ವಾಗ್ದಾಳಿಯನ್ನು ಕಾಂಗ್ರೆಸ್ ಮತ್ತಷ್ಟು ತೀವ್ರಗೊಳಿಸಿದ್ದು, ಆರ್ಎಸ್ಎಸ್ ನೋಂದಣಿಗೆ ದಾಖಲೆಗಳನ್ನು ಸಿದ್ಧಪಡಿಸಿ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಬುಧವಾರ ಬೆಂಬಲ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಸಂವಿಧಾನದ ಚೌಕಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹರಿಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರ್ಎಸ್ಎಸ್ ತನ್ನ ನೋಂದಣಿ ದಾಖಲೆಗಳನ್ನು ಸಿದ್ಧವಾಗಿಡುವಂತೆ ಪ್ರಿಯಾಂಕ್ ಖರ್ಗೆ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, "ಪ್ರಿಯಾಂಕ್ ಖರ್ಗೆ ಸರ್ಕಾರದ ಭಾಗ. ಅವರು ಗೃಹ ಇಲಾಖೆಯ ಉಸ್ತುವಾರಿ ಹೊಂದಿರುವ ಸಚಿವರು ಮತ್ತು ಅವರಿಗೆ ಸಂವಿಧಾನದ ಚೌಕಟ್ಟಿನೊಳಗೆ ಕ್ರಮ ಕೈಗೊಳ್ಳುವ ಎಲ್ಲಾ ಹಕ್ಕುಗಳಿವೆ. ಅವರು ಹೇಳಿದ್ದನ್ನು ನಾನು ಅನುಮೋದಿಸುತ್ತೇನೆ" ಎಂದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, "ಆರ್ಎಸ್ಎಸ್ ತನ್ನನ್ನು ದೇಶಭಕ್ತಿ ಮತ್ತು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ಆದ್ದರಿಂದ ಅದನ್ನು ನೋಂದಾಯಿಸಬೇಕು... ಅವರು ಹಾಗೆ ಮಾಡದಿದ್ದರೆ, ಯಾವ ಕ್ರಮ ತೆಗೆದುಕೊಳ್ಳಬೇಕೆಂದು ಗೃಹ ಸಚಿವರು ನಿರ್ಧರಿಸುತ್ತಾರೆ" ಎಂದರು.
ಮೀನಾಕ್ಷಿ ನಟರಾಜ್ ಅರ್ಜಿ ತಿರಸ್ಕಾರದ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್, ಬಿಜೆಪಿ ಅವರು ವೋಟ್ ಚೋರಿ ಜೊತೆಗೆ ಸೀಟ್ ಚೋರಿ ಮಾಡುತ್ತಿದ್ದಾರೆ. ಸ್ಥಾನ ಕಳ್ಳತನ ಮಾಡುತ್ತಿದ್ದಾರೆ. ಇದು ಹೊಸದಲ್ಲ,ನಾವು ಎದುರಿಸುತ್ತೇವೆ. ಇದರಲ್ಲಿ ನಾವು ಡಾಕ್ಟರೇಟ್ ಪಡೆದಿದ್ದೇವೆ ಎಂದರು. ಈ ಹಿಂದೆ ಹರಿಯಾಣದಲ್ಲೂ ಬಿಜೆಪಿ ನಾಯಕರು ಹೀಗೆ ಮಾಡಿದ್ದರು. ಬಿಜೆಪಿ ನಡೆಯುನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
Advertisement