2028ರಲ್ಲಿ ನಾನೂ ಮಂತ್ರಿಯಾಗುತ್ತೇನೆ; ಶೇ. 7.5 ರಷ್ಟು ಮೀಸಲಾತಿ ನೀಡದಿದ್ದರೆ ರಾಜೀನಾಮೆ: ರಮೇಶ್ ಜಾರಕಿಹೊಳಿ

ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
BJP MLA Ramesh Jarkiholi slams Satish Jarkiholi over ST quota
ರಮೇಶ್ ಜಾರಕಿಹೊಳಿ
Updated on

ಬಳ್ಳಾರಿ: 2028ರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಆ ಸರ್ಕಾರದಲ್ಲಿ ನಾನೂ ಕೂಡ ಸಚಿವನಾಗುತ್ತೇನೆ. ಆದರೆ ನಮ್ಮ ಸಮಾಜಕ್ಕೆ(ಎಸ್ ಟಿ) ಶೇ. 7.5 ರಷ್ಟು ಮೀಸಲಾತಿ ನೀಡದಿದ್ದರೆ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲು ಸಿದ್ಧ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಹೇಳಿದ್ದಾರೆ.

ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಯಾವ ಪಕ್ಷವೇ ಇರಲಿ, ಅದನ್ನು ಅಧಿಕಾರಕ್ಕೆ ತರುವ ಅಥವಾ ಗದ್ದುಗೆಯಿಂದ ಕೆಳಗಿಳಿಸುವ ರಾಜಕೀಯ ಶಕ್ತಿಯನ್ನು ದೇವರು ನಮ್ಮ ಸಮಾಜಕ್ಕೆ ಕೊಟ್ಟಿದ್ದಾನೆ. 1970ರ ದಶಕದಲ್ಲೇ ನಾವು ಕೇವಲ ಮೂರ್ನಾಲ್ಕು ಸೀಟುಗಳನ್ನು ಗೆದ್ದು, ಇಡೀ ಅಧಿಕಾರದ ಚುಕ್ಕಾಣಿಯನ್ನು ನಮ್ಮ ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದೆವು. ನಾವು ಈಗ ಮತ್ತಷ್ಟು ಪ್ರಬಲವಾಗಿ ಸಂಘಟನೆ ಮಾಡಬೇಕಿದೆ. ಕೇವಲ ನಮ್ಮದೇ ಸಮಾಜವಲ್ಲದೆ, ರಾಜ್ಯದಲ್ಲಿರುವ ಇತರೆಲ್ಲಾ ಸಣ್ಣಪುಟ್ಟ ಸಮುದಾಯಗಳನ್ನು ಜೊತೆಗೆ ಕರೆದುಕೊಂಡು ಹೋದಾಗ ಮಾತ್ರ ನಮಗೆ ನಿಜವಾದ ರಾಜಕೀಯ ಶಕ್ತಿ ಬರಲು ಸಾಧ್ಯ ಎಂದರು.

BJP MLA Ramesh Jarkiholi slams Satish Jarkiholi over ST quota
ರಾಮಕೃಷ್ಣ ಹೆಗಡೆ ನಂತರ ಇದುವರೆಗೂ ಒಂದು ಸರ್ಕಾರ ರಿಪೀಟ್ ಆಗಿಲ್ಲ: 2028ರ ಸೋಲಿನ ಮುನ್ಸೂಚನೆ ಕೊಟ್ರಾ ಸತೀಶ್ ಜಾರಕಿಹೊಳಿ?

ಇದೇ ವೇಳೆ ತಮ್ಮ ಸಹೋದರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ರಮೇಶ್ ಜಾರಕಿಹೊಳಿ, ಇವತ್ತು ಸಮಾಜದ ಹಿತದೃಷ್ಟಿಯಿಂದ ಮಾತನಾಡಲು ಕೆಲವರಿಗೆ ಧೈರ್ಯವಿಲ್ಲ. ಒಂದು ವೇಳೆ ಸತೀಶ್ ಜಾರಕಿಹೊಳಿ ಇರುವ ಸ್ಥಾನದಲ್ಲಿನಾನೇನಾದರೂ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದೆ. ಆದರೆ ಅಧಿಕಾರ ತ್ಯಾಗ ಮಾಡುವ ಆ ಶಕ್ತಿ ಮತ್ತು ಧೈರ್ಯ ಸತೀಶ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಹಾಗೂ ಉಚಿತ ಯೋಜನೆಗಳ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಬಡವರಿಗೆ ಕೇವಲ ನಾಲ್ಕು ಸೈಕಲ್ ಕೊಟ್ಟರೆ ಅಥವಾ ಉಚಿತವಾಗಿ ಏನನ್ನೋ ನೀಡಿದರೆ ಸಮಾಜದ ಬಡತನ ನಿರ್ಮೂಲನೆಯಾಗುವುದಿಲ್ಲ. ರೈತರ ಜಮೀನುಗಳಿಗೆ ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕೃಷಿ ಮತ್ತು ನೀರಾವರಿ ಕ್ಷೇತ್ರಗಳು ಅಭಿವೃದ್ಧಿಯಾದಾಗ ಮಾತ್ರ ಗ್ರಾಮೀಣ ಭಾಗದ ಬಡತನ ಸಂಪೂರ್ಣವಾಗಿ ದೂರವಾಗುತ್ತದೆ ಎಂದರು.

X

Advertisement

X
Kannada Prabha
www.kannadaprabha.com