

ನವದೆಹಲಿ: ವಿಧಾನಪರಿಷತ್ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಅಡ್ಡಮತದಾನ ರಾಜಕೀಯಕ್ಕೆ ಪವಿತ್ರ ಕ್ಷೇತ್ರ ಧರ್ಮಸ್ಥಳವನ್ನು ತರಬೇಡಿ, ಪಕ್ಷದೊಳಗೇ ಸಮಿತಿಯ ವೇದಿಕೆಯಿಂದ ಪತ್ತೆಹಚ್ಚಿ, ಇದರಿಂದ ಪಕ್ಷಕ್ಕೆ ಮುಜುಗರ ಎಂದು ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ಆಣೆ ಪ್ರಮಾಣ ಮಾಡಿಸಲು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಪಕ್ಷದ ಹಿರಿಯ ಶಾಸಕರು ಹಾಗೂ ನಾಯಕರಿಂದ ವ್ಯಕ್ತವಾದ ತೀವ್ರ ವಿರೋಧದ ಬೆನ್ನಲ್ಲೇ ಆಣೆ ಪ್ರಮಾಣಕ್ಕೆ ಬ್ರೇಕ್ ಬಿದ್ದಿದ್ದು ಧರ್ಮಸ್ಥಳದಲ್ಲಿ ನಡೆಸಲು ಉದ್ದೇಶಿಸಿದ್ದ ಶಾಸಕಾಂಗ ಪಕ್ಷದ ಸಭೆಯನ್ನೂ ರದ್ದುಗೊಳಿಸಲಾಗಿದೆ.
ಧರ್ಮಸ್ಥಳವನ್ನು ರಾಜಕೀಯ ಅಪಚಾರಕ್ಕೆ ಬಳಸುವುದು ಬೇಡ ಎಂದು ನಮ್ಮ ಪಕ್ಷದ ಹಿರಿಯರಿಂದಲೇ ಸಲಹೆ ಬಂದ ಹಿನ್ನೆಲೆಯಲ್ಲಿ ನಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ. ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಲಾಗುವುದು ಎಂದು ತಿಳಿಸಿದರು. ಹೈಕಮಾಂಡ್ ನಿಂದ ಬುಲಾವ್ ಬಂದ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದ ಆರ್ ಅಶೋಕ್ ಮತ್ತು ಬಿ ವೈ ವಿಜಯೇಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.
ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ
ಅಡ್ಡ ಮತದಾನದ ಮೂಲಕ ಪಕ್ಷಕ್ಕೆ ಮೋಸ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ, ತಕ್ಕ ಶಿಕ್ಷೆ ಕೊಟ್ಟೇ ಕೊಡುತ್ತೇವೆ. ಅದು ಸೆರಗಲ್ಲಿ ಕೆಂಡ ಮುಚ್ಚಿಟ್ಟಂತೆ. ಯಾರು ಅಡ್ಡಮತದಾನ ಮಾಡಿದ್ದಾರೆ ಎಂದು ಒಂದಲ್ಲ ಒಂದು ದಿನ ಆಚೆ ಬಂದೇ ಬರುತ್ತದೆ ಎಂದರು.ಯಾರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೋ ಅವರಿಗೆ ತಕ್ಕ ಬುದ್ಧಿ ಕಲಿಸುತ್ತೇವೆ. ಇಂತಹ ದುಷ್ಕೃತ್ಯ ಮತ್ತೆ ಮಾಡಬಾರದು ಎಂದರು.
ರಾಜ್ಯ ಸರ್ಕಾರ ಸುಮಾರು 20 ಲಕ್ಷ ಜನರನ್ನು ಗುರುತಿಸಿ ಸರ್ಕಾರದ ಗ್ಯಾರಂಟಿ ಫಲಾನುಭವಿಗಳನ್ನು ಹೊರಗಿಡಲು ಮುಂದಾಗಿದ್ದಾರೆ. ಇದರಿಂದ ಸರ್ಕಾರಕ್ಕೆ ಸುಮಾರು 10ರಿಂದ 15 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಕಾಂಗ್ರೆಸ್ ನವರು ಗೆಲ್ಲುವವರೆಗೆ ಒಂದು, ಗೆದ್ದ ನಂತರ ಮತ್ತೊಂದು ಮಾಡುತ್ತಿದ್ದಾರೆ, ಕಳ್ಳ ಕಾಂಗ್ರೆಸ್ ನ್ನು ರಾಜ್ಯದ ಜನತೆ ನಂಬಬೇಡಿ, ಇದು ಡಿ ಕೆ ಶಿವಕುಮಾರ್ ಆರಂಭವಷ್ಟೇ ಇನ್ನು ಮುಂದಿನ ದಿನಗಳಲ್ಲಿ ಇವರ ಆಟ ನೋಡುತ್ತಿರಿ ಎಂದು ವ್ಯಂಗ್ಯವಾಡಿದರು.
ಕಸ ವಿಲೇವಾರಿಯಲ್ಲಿ 39 ಸಾವಿರ ಕೋಟಿ ಲೂಟಿ ಹೊಡೆದಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆಯಲ್ಲಿ 10-15 ಸಾವಿರ ಕೋಟಿ ರೂಪಾಯಿ ಕಿಕ್ ಬ್ಯಾಕ್ ತೆಗೆದುಕೊಳ್ಳುತ್ತಾರೆ. ಮೂರೂವರೆ ಸಾವಿರ ಎಕರೆ ಅಲ್ಲಿ ಸರ್ಕಾರಿ ಜಮೀನು ಇದೆ, ಅದನ್ನು ಕಾಂಗ್ರೆಸ್ ಸರ್ಕಾರ ನಯಾಪೈಸೆ ನೀಡದೆ ಸಿಗುತ್ತಿದೆ. ಯಾವುದೇ ಲೇ ಔಟ್ ಮಾಡಿದರೂ ಬಡವರಿಗೆ ಕೊಡಬೇಕು ಎಂದಿದೆ, ಆದರೆ ಇಲ್ಲಿ ಚದರಡಿ ಲೆಕ್ಕಹಾಕಿ ಕಾಂಗ್ರೆಸ್ ಸರ್ಕಾರ ಕೊಡುತ್ತಿದೆ. ಡಿ ಕೆ ಶಿವಕುಮಾರ್ ಅವರನ್ನು ದೆಹಲಿ ಹೈಕಮಾಂಡ್ ಭ್ರಷ್ಟಾಚಾರ ಮಾಡಲು ನೇಮಕ ಮಾಡಿದೆ, ಅವರು ಮುಖ್ಯಮಂತ್ರಿಯಾಗಿರುವುದೇ ಭ್ರಷ್ಟಾಚಾರ ಮಾಡಲು ಎಂದರು.
ಮಾಧ್ಯಮಗಳಲ್ಲಿ ಅಡ್ಡ ಮತದಾನ ಮಾಡಿದವರ ಬಗ್ಗೆ ದಿನಕ್ಕೊಂದು ಹೆಸರುಗಳು ಬರುತ್ತವೆ. ಇದನ್ನು ಯಾರೋ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರೇ ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ, ಗೊಂದಲ ಸೃಷ್ಟಿ ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚಿನ ಎಂಎಲ್ಸಿ ಎಲೆಕ್ಷನ್ ನಲ್ಲಿ ನಡೆದ ಅಡ್ಡಮತದಾನ ಬಗ್ಗೆ ರಾಷ್ಟ್ರಾಧ್ಯಕ್ಷರಿಗೆ ಪ್ರಾಥಮಿಕ ವರದಿ ಸಲ್ಲಿಸುತ್ತೇವೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಸತ್ಯ ಶೋಧನಾ ಸಮಿತಿ ಪತ್ತೆಹಚ್ಚಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುತುವರ್ಜಿ ವಹಿಸಿ ಬಿಡದಿ ರೈತರಿಂದ ಜಮೀನು ವಶಪಡಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ನಾವು ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.
Advertisement