

ಬೆಂಗಳೂರು: ನನ್ನ ಅಣ್ಣನ ಹಣಬರಹದಲ್ಲಿದ್ದರೆ ಮುಖ್ಯಮಂತ್ರಿ ಆಗುತ್ತಾರೆ, ಕಾಯಬೇಕು, ತಾಳ್ಮೆ, ಸಹನೆ ಮುಖ್ಯ ಎಂದು ಅವರ ಸೋದರ ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ವಿಧಿಯಲ್ಲಿ ಇಲ್ಲದಿದ್ದರೆ ಯಾರೂ ಏನೂ ಮಾಡಲಾಗದು. ತ್ಯಜಿಸಲು ಮೊದಲು ಕೈಯಲ್ಲಿ ಆಯುಧ ಇರಬೇಕಲ್ಲವೇ? ಇಲ್ಲಿ ಯಾವುದೇ ಆಯುಧವೇ ಇಲ್ಲ. ಇದು ರಾಜಕೀಯ; ಇಲ್ಲಿ ಆಯುಧಗಳ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ಡಿಕೆ ಶಿವಕುಮಾರ್ ಬೆಂಬಲಿಗ ಶಾಸಕರು ನಾಯಕತ್ವ ಬದಲಾವಣೆ ಕುರಿತು ಸ್ಪಷ್ಟನೆ ಪಡೆಯಲು ಪಕ್ಷದ ಹೈಕಮಾಂಡ್ ನ್ನು ಭೇಟಿಯಾಗಲು ದೆಹಲಿ ಪ್ರವಾಸ ಯೋಜಿಸಿರುವ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಕೂಡ ಸುರೇಶ್ ಹೇಳಿದರು.
ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹುಟ್ಟುಹಬ್ಬದ ಮುನ್ನಾದಿನ ಡಿ ಕೆ ಶಿವಕುಮಾರ್ ಬೆಂಬಲಿಗ ಶಾಸಕರು ಆಯೋಜಿಸಿದ್ದ ಔತಣಕೂಟದ ಬಗ್ಗೆ ತಮಗೆ ತಿಳಿದಿಲ್ಲ ಎಂದರು. ಅವರು ಯಾವ ನಿರ್ಧಾರ ತೆಗೆದುಕೊಂಡರು ಅಥವಾ ಯಾವ ಹೇಳಿಕೆ ನೀಡಿದರು ಎಂಬುದು ನನಗೆ ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಷಯ. ಪಕ್ಷ ಅದನ್ನು ಪರಿಶೀಲಿಸುತ್ತದೆ ಎಂದು ಹೇಳಿದರು.
2028ರ ವಿಧಾನಸಭೆ ಚುನಾವಣೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಉಂಟಾದ ಗೊಂದಲದಿಂದ ಪಕ್ಷಕ್ಕೆ ಗೆಲುವು ಕಷ್ಟವಾಗಬಹುದು ಎಂಬ ಕೆಲವು ಕಾಂಗ್ರೆಸ್ ಶಾಸಕರ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಅವರು, ಪೈಪೋಟಿ ಮಾಡುವವರಿಗೆ ಕಷ್ಟವಾಗಬಹುದು, ಆದರೆ ನಾನು ಸ್ಪರ್ಧಿಸುವುದಿಲ್ಲ; ನನಗೆ ಕಷ್ಟವಿಲ್ಲ ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಸಿದ್ದರಾಮಯ್ಯರನ್ನು ಬದಲಿಸಿದರೆ ದಲಿತ ನಾಯಕನನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದ ಬಗ್ಗೆ ಪ್ರಶ್ನಿಸಿದಾಗ, ಎಲ್ಲರೂ ಅದನ್ನೇ ಬಯಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ ಎಂದರು.
ತಾವು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಆಸೆಪಡುವುದಿಲ್ಲ ಎಂದು ಸ್ಪಷ್ಟಪಡಿಸಿ, ಅದನ್ನು ಪಕ್ಷವೇ ನಿರ್ಧರಿಸುತ್ತದೆ ಎಂದು ಹೇಳಿದರು.
Advertisement