

ಬೆಂಗಳೂರು: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಕಾರ್ಯನಿರ್ವಹಣಾ ಪ್ರಧಾನಮಂತ್ರಿಗಳಂತೆ ಮಾತನಾಡುತ್ತಿದ್ದು, ಮೋದಿಯವರು ಸೂಚನೆ ಪಾಲಿಸುತ್ತಿರುವ ಬೊಂಬೆಯಂತೆ ಕಾಣಿಸುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟುವಾಗಿ ಟೀಕೆ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಷ್ಯಾ ತೈಲ ಖರೀದಿ ವಿಚಾರದಲ್ಲಿ ಟ್ರಂಪ್ ಅವರ ಹೇಳಿಕೆಗೆ ತೀವ್ರವಾಗಿ ಕಿಡಿಕಾರಿದ್ದಾರೆ,
ಭಾರತದ ಆರ್ಥಿಕ ಮತ್ತು ವಿದೇಶಾಂಗ ನಿರ್ಧಾರಗಳಲ್ಲಿ ಅಮೆರಿಕಾದ ಪ್ರಭಾವ ಹೆಚ್ಚುತ್ತಿರುವುದಾಗಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಸಲು “30 ದಿನ ಅವಕಾಶ” ನೀಡುವುದಾಗಿ ಅಮೆರಿಕಾ ಹೇಳಿಕೆ ನೀಡುತ್ತಿರುವುದು ಭಾರತಕ್ಕೆ ಅವಮಾನಕರ ವಿಚಾರವಾಗಿದೆ ಎಂದು ಟೀಕಿಸಿದ್ದಾರೆ.
ಯಾವುದೇ ವಿದೇಶಿ ಸರ್ಕಾರವು ಭಾರತದ ಆರ್ಥಿಕತೆ ಹೇಗೆ ನಡೆಯಬೇಕು ಎಂದು ಅನುಮತಿ ನೀಡುವ ಅಥವಾ ತಡೆಯುವ ಸ್ಥಿತಿಯಲ್ಲಿ ಇರಬಾರದು. ಈಗಿನ ಪರಿಸ್ಥಿತಿಯನ್ನು ನೋಡಿದರೆ ಭಾರತದ ರಾಜಧಾನಿ ನವದೆಹಲಿ ಅಲ್ಲ, ವಾಷಿಂಗ್ಟನ್ ಡಿಸಿ ಆಗಿದೆ ಎಂಬ ಭಾವನೆ ಮೂಡುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಕಾರ್ಯಕಾರಿ ಪ್ರಧಾನಿಯಂತೆ ಮಾತನಾಡುತ್ತಿದ್ದು, ನರೇಂದ್ರ ಮೋದಿಯವರು ಅವರ ಸೂಚನೆ ಅನುಸರಿಸುವ ಬೊಂಬೆಯಂತೆ ಕಾಣುತ್ತಿದ್ದಾರೆಂದು ಹೇಳಿದ್ದಾರೆ.
ಆಪರೇಶನ್ ಸಿಂಧೂರ್’ ಯುದ್ಧ ವಿಚಾರದಲ್ಲಿ ಟ್ರಂಪ್ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಈ ಬಗ್ಗೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ರೀತಿ ಅಮೆರಿಕ ಇರಾನ್ನಿಂದ ತೈಲ ಖರೀದಿಸಬಾರದು ಎಂದು ಹೇಳಿದಾಗ ಭಾರತ ಅದನ್ನು ಪಾಲಿಸಿದೆ. ಈಗ ರಷ್ಯಾದ ತೈಲ ಖರೀದಿಯ ಮೇಲೂ ಒತ್ತಡ ತರಲಾಗುತ್ತಿದೆ. ಈ ಬೆಳವಣಿಗೆಗಳನ್ನು ಗಮಿನಿಸಿದರೆ ಭಾರತದ ಸ್ವಾಯತ್ತತೆ ಪ್ರಶ್ನಾರ್ಥಕವಾಗಿದೆ ಎಂದು ಆರೋಪಿಸಿದ್ದಾರೆ.
ಅದಾನಿ ಗ್ರೂಪ್ ಸಂಬಂಧಿತ ತನಿಖೆಗಳು ಮತ್ತು ಎಪ್ಸ್ಟೀನ್ ಫೈಲ್ ಪ್ರಕರಣದ ದಾಖಲೆಗಳನ್ನು ರಾಜಕೀಯ ಒತ್ತಡದ ಸಾಧನವಾಗಿ ಬಳಸಲಾಗುತ್ತಿದೆ ಎಂಬ ಅನುಮಾನಗಳು ಕೂಡ ಮೂಡುತ್ತಿವೆ ಎಂದು ಹೇಳಿದ್ದಾರೆ.
ಇದೇ ವೇಳೆ, ಸಂವಿಧಾನದಿಂದ “ಧರ್ಮನಿರಪೇಕ್ಷ” ಮತ್ತು “ಸಾಮಾಜಿಕ ನ್ಯಾಯ” ಪದಗಳನ್ನು ತೆಗೆದುಹಾಕಬೇಕು ಎಂದು ಹೇಳುತ್ತಿರುವವರು, ತಮ್ಮ ಆಡಳಿತದಲ್ಲಿ “ಸಾರ್ವಭೌಮತ್ವ”ವನ್ನೇ ದುರ್ಬಲಗೊಳಿಸುತ್ತಿದ್ದಾರೆ ಎಂದೂ ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಜಗತ್ತಿನಲ್ಲಿ ಯುದ್ಧ ಮತ್ತು ಅಶಾಂತಿ ಹೆಚ್ಚುತ್ತಿರುವ ಸಮಯದಲ್ಲಿ ಭಾರತ ಸ್ವತಂತ್ರ ಧ್ವನಿಯೊಂದಿಗೆ ಮಾತನಾಡಬೇಕು. ದೇಶದ ಗೌರವ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ದೇಶದ ಹಿತದೃಷ್ಟಿಯಿಂದ ಅವರು ಸ್ಥಾನ ತ್ಯಜಿಸಬೇಕು ಎಂದೂ ಆಗ್ರಹಿಸಿದ್ದಾರೆ,
Advertisement