ಕೇಂದ್ರದ ಮೇಲೆ ಆರೋಪ ಮಾಡಿ ವೈಫಲ್ಯ ಮರೆಮಾಚುವ ಯತ್ನ, ಜನಸೇವೆ ಸುವರ್ಣಾವಕಾಶ ಕಳೆದುಕೊಂಡ ಸಿದ್ದರಾಮಯ್ಯ: ವಿಜಯೇಂದ್ರ ವಾಗ್ದಾಳಿ

ರಾಜ್ಯ ಬಜೆಟ್ ಒಂದೇ ಸಮುದಾಯವನ್ನು ಮೆಚ್ಚಿಸುವ ಉದ್ದೇಶದಿಂದ ರೂಪಿಸಲಾಗಿದೆ. ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಸರ್ಕಾರ ತನ್ನ ತೆರಿಗೆ ಸಂಗ್ರಹ ಗುರಿ ಸಾಧಿಸಲು ವಿಫಲವಾಗಿದ್ದು, ಹೆಚ್ಚಿನ ಸಾಲ ಪಡೆದು ಜನರ ಮೇಲೆ ಭಾರ ಹಾಕಿದೆ.
Vijayendra, CM Siddaramaiah Casual images
ಬಿ.ವೈ. ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 17ನೇ ರಾಜ್ಯ ಬಜೆಟ್ ಜನಸೇವೆಗೆ ದೊರೆತಿದ್ದ ಸುವರ್ಣಾವಕಾಶವನ್ನು ಕೈಚೆಲ್ಲಿದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ಟೀಕಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಬಜೆಟ್ ಆರ್ಥಿಕ ದಿವಾಳಿತನವನ್ನು ಬಯಲಿಗೆಳೆದಿದೆ ಎಂದು ಕಿಡಿಕಾರಿದರು.

ರಾಜ್ಯ ಬಜೆಟ್ ಒಂದೇ ಸಮುದಾಯವನ್ನು ಮೆಚ್ಚಿಸುವ ಉದ್ದೇಶದಿಂದ ರೂಪಿಸಲಾಗಿದೆ. ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಸರ್ಕಾರ ತನ್ನ ತೆರಿಗೆ ಸಂಗ್ರಹ ಗುರಿ ಸಾಧಿಸಲು ವಿಫಲವಾಗಿದ್ದು, ಹೆಚ್ಚಿನ ಸಾಲ ಪಡೆದು ಜನರ ಮೇಲೆ ಭಾರ ಹಾಕಿದೆ. ಇದರಿಂದ ರಾಜ್ಯದ ಹಣಕಾಸು ಕೊರತೆ ಹೆಚ್ಚುತ್ತಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಸರ್ಕಾರ ಹುದ್ದೆಗಳ ಭರ್ತಿ, ರಸ್ತೆ-ಸೇತುವೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಎಷ್ಟು ರಸ್ತೆಗಳು ನಿರ್ಮಾಣವಾಗಿವೆ, ಎಷ್ಟು ಸೇತುವೆಗಳು ಕಟ್ಟಲಾಗಿದೆ ಮತ್ತು ಎಷ್ಟು ಸರ್ಕಾರಿ ಹುದ್ದೆಗಳು ಭರ್ತಿಯಾಗಿವೆ ಎಂಬ ವಿವರಗಳನ್ನು ಬಜೆಟ್‌ನಲ್ಲಿ ಎಲ್ಲಿಯೂ ನೀಡಿಲ್ಲ ಎಂದು ಕಿಡಿಕಾರಿದರು.

ನಿರಾಶ್ರಿತರಿಗೆ ಮನೆಗಳನ್ನು ಒದಗಿಸಲು ಮತ್ತು ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಆದ್ಯತೆ ನೀಡುವುದಾಗಿ ಸರ್ಕಾರ ಹೇಳಿಕೊಳ್ಳುತ್ತದೆ, ಆದರೆ ಈ ಹೇಳಿಕೆಗಳು ನಿಜವಲ್ಲ ಎಂದು ಟೀಕಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಪಾಲು ಸಿಗುತ್ತಿಲ್ಲ ಎಂಬ ಸರ್ಕಾರದ ಆರೋಪಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕವು ಆದಾಯ ತೆರಿಗೆ, ಜಿಎಸ್‌ಟಿ ಸೇರಿದಂತೆ ವಿವಿಧ ಮೂಲಗಳಿಂದ ಕೇಂದ್ರಕ್ಕೆ ಸುಮಾರು ರೂ.4.3 ಲಕ್ಷ ಕೋಟಿ ನೀಡುತ್ತದೆ. ಆದರೆ, ರಕ್ಷಣಾ ಕ್ಷೇತ್ರ, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಮೊದಲಾದ ಕ್ಷೇತ್ರಗಳಲ್ಲಿ ಕೇಂದ್ರ ಮಾಡುವ ವೆಚ್ಚವನ್ನು ರಾಜ್ಯ ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಹೇಳಿದರು.

Vijayendra, CM Siddaramaiah Casual images
'ಬಿಜೆಪಿಯಲ್ಲಿ ಕೆಲವು ಸಮಸ್ಯೆ ಮತ್ತು ಗೊಂದಲಗಳಿರುವುದು ನಿಜ, ಅದನ್ನು ಬಗೆಹರಿಸಿಕೊಳ್ಳುತ್ತೇವೆ': ಬಿ.ವೈ ವಿಜಯೇಂದ್ರ

ಅಭಿವೃದ್ಧಿಯಾದ ರಾಜ್ಯಗಳಿಂದ ಸಂಗ್ರಹವಾಗುವ ಆದಾಯವನ್ನು ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಹಂಚುವ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು.

ಈ ನಡುವೆ ಕಾರ್ಕಳ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಅವರು ಮಾತನಾಡಿ, 2028ರಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ತಮ್ಮ ಪಕ್ಷದ ನಾಯಕ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು.

2028 ರಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡುತ್ತಾರೆ ಎಂದು ಎನ್ಡಿಎ ಮಿತ್ರಪಕ್ಷ ಜೆಡಿಎಸ್ ಆಶಿಸುತ್ತಿದೆ ಎಂದು ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ನಂತರ ಸುನೀಲ್ ಕುಮಾರ್ ಅವರು ಈ ಹೇಳಿಕೆ ನೀಡಿದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರಿಯುತ್ತಾರೋ ಅಥವಾ ಅವರನ್ನು ಬದಲಾಯಿಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸುವಂತೆ ಸುನೀಲ್ ಕುಮಾರ್ ಅವರು ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದರು.

ಏತನ್ಮಧ್ಯೆ, ಬಿಜೆಪಿ ಶಾಸಕ ಸಿದ್ದು ಸವದಿ ಅವರ ಹೇಳಿಕೆಯೊಂದು ನಾಯಕತ್ವದ ವಿಷಯದ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿತು.

Vijayendra, CM Siddaramaiah Casual images
ಸಿಎಂ-ಡಿಸಿಎಂ ನಡುವಿನ 'ಕುರ್ಚಿ ಕದನ'ದಿಂದ ಜನರ ಸಮಸ್ಯೆ ಕೇಳಲು ಅವರಿಗೆ ಸಮಯವೇ ಇಲ್ಲ, ಸರ್ಕಾರಿ ಹುದ್ದೆ ಭರ್ತಿ ಮಾಡುವ ಭರವಸೆ ಈಡೇರಿಸಿಲ್ಲ: ಬಿ.ವೈ ವಿಜಯೇಂದ್ರ

ಸಮಾಜದ ಒಂದು ವರ್ಗವನ್ನು ಸಮಾಧಾನಪಡಿಸುವ ಮೂಲಕ ಮತ್ತು ಇತರ ಸಮುದಾಯಗಳನ್ನು ನಿರ್ಲಕ್ಷಿಸುವ ಮೂಲಕ ಕಾಂಗ್ರೆಸ್ ಮತ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.

ದೇಶವು "ಕಾಂಗ್ರೆಸ್ ಮುಕ್ತ ಭಾರತ"ದತ್ತ ಸಾಗುತ್ತಿದೆ ಎಂದು ಹಲವು ಸಮೀಕ್ಷೆಗಳು ಸೂಚಿಸುತ್ತಿರುವುದರಿಂದ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದಲ್ಲಿ ಬಿಜೆಪಿಯ ಭವಿಷ್ಯದ ಬಗ್ಗೆ ಚಿಂತಿಸಿ ಎಂದು ತಿರುಗೇಟು ನೀಡಿದರು.

ಬಳಿಕ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ ಸವದಿ, 'ಲವ್ ಜಿಹಾದ್' ಅನ್ನು ನಿಗ್ರಹಿಸಲು ಕಾನೂನಿನ ಅವಶ್ಯಕತೆಯಿದೆ, ಇದರಿಂದಾಗಿ ಜೋಡಿಗಳು ಮದುವೆಯಾಗಲು ಪೋಷಕರ ಒಪ್ಪಿಗೆ ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com